ಅತ್ಯಾಚಾರ ಪ್ರಕರಣ: ಶುಕ್ರವಾರ ಮೈಸೂರು ಪೊಲೀಸರ ಸಭೆ ಕರೆದ ಗೃಹ ಸಚಿವ ಆರಗ ಜ್ಞಾನೇಂದ್ರ
ಮೈಸೂರು, ಆಗಸ್ಟ್ 25: ಮೈಸೂರಿನ ಚಾಮುಂಡಿ ಬೆಟ್ಟ ತಪ್ಪಲಿನಲ್ಲಿ ಗ್ಯಾಂಗ್ ರೇಪ್ ಹಾಗೂ ನಗರದಲ್ಲಿ ಚಿನ್ನಾಭರಣ ಅಂಗಡಿಯ ಡಕಾಯಿತಿ ವೇಳೆ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ನಾಳೆ (ಆಗಸ್ಟ್ 26) ರಾತ್ರಿ ಮೈಸೂರಿಗೆ ಭೇಟಿ ನೀಡಲಿದ್ದಾರೆ.
ಶುಕ್ರವಾರ ಮೈಸೂರು ಪೊಲೀಸ್ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ, ಪ್ರಕರಣಗಳ ಬಗ್ಗೆ ಮಾಹಿತಿ ಸಂಗ್ರಹಿಸಲಿದ್ದಾರೆ. ಎರಡು ದಿನಗಳ ಹಿಂದೆ ದರೋಡೆ ಶೂಟ್ಔಟ್ ನಡೆದಿತ್ತು. ಮಂಗಳವಾರ ಸಂಜೆ ಗ್ಯಾಂಗ್ ರೇಪ್ ನಡೆದಿತ್ತು. ಈ ಸಂಬಂಧ ಗೃಹ ಸಚಿವರು ಶುಕ್ರವಾರ ಮೈಸೂರು ಪೊಲೀಸ್ ಅಧಿಕಾರಿಗಳ ಸಭೆ ನಡೆಸಲಿದ್ದಾರೆ.
"ಪ್ರಕರಣ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಗ್ಯಾಂಗ್ರೇಪ್ ಬಗ್ಗೆ ಎಫ್ಐಆರ್ ದಾಖಲಾಗಿದೆ. ಬೆಂಗಳೂರಿನಿಂದ ಉನ್ನತ ಅಧಿಕಾರಿಗಳನ್ನು ಕಳುಹಿಸಿದ್ದೇವೆ. ಉನ್ನತ ಅಧಿಕಾರಿಗಳ ತಂಡವನ್ನು ಮೈಸೂರಿಗೆ ಕಳಿಸಿದ್ದೇವೆ. ನಾಳೆ ನಾನೇ ಮೈಸೂರಿಗೆ ಭೇಟಿ ನೀಡುತ್ತೇನೆ. ಪ್ರಕರಣ ಸಂಬಂಧ ಇದುವರೆಗೂ ಯಾರನ್ನೂ ಬಂಧಿಸಿಲ್ಲ. ಈ ಪ್ರಕರಣವನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ," ಎಂದು ಬುಧವಾರ ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

ಮಾಜಿ ಸಚಿವ ಸಿ.ಟಿ. ರವಿ ಪ್ರತಿಕ್ರಿಯೆ
ಮೈಸೂರಿನಲ್ಲಿ ನಡೆದ ವಿದ್ಯಾರ್ಥಿನಿ ಮೇಲಿನ ಗ್ಯಾಂಗ್ರೇಪ್ ಹಾಗೂ ವ್ಯಕ್ತಿಯ ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಮಂಡ್ಯದಲ್ಲಿ ಬಿಜೆಪಿ ನಾಯಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದ್ದಾರೆ.
"ಇಷ್ಟಕ್ಕೇ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಹೇಳಲಾಗಲ್ಲ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಇಂತಹ ಪ್ರಕರಣಗಳಿಂದ ಸಾಂಸ್ಕೃತಿಕ ನಗರಿಗೆ ಕಪ್ಪು ಚುಕ್ಕೆ. ತಪ್ಪಿತಸ್ಥರು ಯಾರೇ ಇದ್ದರೂ ಅವರ ವಿರುದ್ಧ ಕ್ರಮ ಆಗಬೇಕು," ಎಂದು ಹೇಳಿದ್ದಾರೆ.
ಪ್ರಕರಣದ ಬಗ್ಗೆ ಇನ್ನಷ್ಟು ಮಾಹಿತಿ ಬಯಲು
ವಿದ್ಯಾರ್ಥಿನಿ ಸ್ನೇಹಿತನ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ್ದರು. ದುಷ್ಕರ್ಮಿಗಳು ಬಿಟ್ಟುಹೋದ ನಂತರ ಸಂತ್ರಸ್ತ ವಿದ್ಯಾರ್ಥಿನಿ, ಯುವಕ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಅಪರಿಚಿತರು ಹಲ್ಲೆ ಮಾಡಿದ್ದಾರೆಂದು ಮಾಹಿತಿ ನೀಡಿ ಚಿಕಿತ್ಸೆ ಪಡೆದಿದ್ದರು ಎಂದು ಹಲ್ಲೆ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಗೆ ಆಗಮಿಸಿ ಪೊಲೀಸ್ ಸಿಬ್ಬಂದಿ ಹೇಳಿಕೆ ಪಡೆದಿದ್ದಾರೆ.

ವಿದ್ಯಾರ್ಥಿನಿ ಗೆಳೆಯನ ಹೇಳಿಕೆ
ದುಷ್ಕರ್ಮಿಗಳು ನಮ್ಮ ಜೊತೆ ಗಲಾಟೆ ಮಾಡಿ, ನನ್ನ ತಲೆಗೆ ಕಲ್ಲಿನಿಂದ ಹೊಡೆದರು. ನಾನು ಪ್ರಜ್ಞೆ ತಪ್ಪಿ ಬಿದ್ದಾಗ ಹುಡುಗಿಯನ್ನು ದೂರ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಅತ್ಯಾಚಾರ ಸಂತ್ರಸ್ತೆಯ ಗೆಳೆಯ ಹೇಳಿದ್ದಾನೆ.
ನಾನು ನನ್ನ ಸ್ನೇಹಿತೆ ರೌಂಡ್ಸ್ ಬಂದಿದ್ದೆವು. ಈ ವೇಳೆ ಅಲ್ಲೇ ಎಣ್ಣೆ ಹೊಡೆಯುತ್ತಿದ್ದ 5-6 ಜನರು ಗಲಾಟೆ ಶುರು ಮಾಡಿದರು. ಇದರಲ್ಲಿ ಎಲ್ಲರೂ ಕನ್ನಡ ಮಾತಾಡುತ್ತಿದ್ದರು. ಒಬ್ಬ ಮಾತ್ರ ಬೇರೆ ಬಾಷೆ ಮಾತಾಡುತ್ತಿದ್ದ.
ಇದೇ ಸಂದರ್ಭದಲ್ಲಿ ಗಲಾಟೆ ಮಾಡಿದವರು ನನಗೆ ಕಲ್ಲಿನಲ್ಲಿ ತಲೆಗೆ ಹೊಡೆದರು. ಆಗ ನಾನು ಪ್ರಜ್ಞೆ ತಪ್ಪಿ ಬಿದ್ದೆ. ನಂತರ ಹುಡುಗಿಯನ್ನು ದೂರ ಕರೆದುಕೊಂಡು ಹೋಗಿ ರೇಪ್ ಮಾಡಿದರು ಎಂದು ಯುವಕ ನಡೆದ ಅತ್ಯಾಚಾರ ಘಟನೆಯನ್ನು ವಿವರಿಸಿದ್ದಾನೆ.
ಸದ್ಯ ಯುವಕ ಹಾಗೂ ಯುವತಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿಗಳ ವಿರುದ್ಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಯುವತಿ ಉತ್ತರ ಭಾರತ ಮೂಲದವಳಾಗಿದ್ದಾಳೆ ಎನ್ನಲಾಗಿದೆ. ಸಾಮೂಹಿಕ ಅತ್ಯಾಚಾರ ಕೃತ್ಯ ನಡೆದಿರುವ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಕೃತ್ಯ ನಡೆದಿರುವ ಬಗ್ಗೆ ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹಿಸುತ್ತಿದ್ದಾರೆ.












Click it and Unblock the Notifications