ಹೆದ್ದಾರಿ ಬಾರ್ ಬಂದ್ ಆಗಿದ್ರೂ, ಅಬಕಾರಿ ಇಲಾಖೆಗೆ ಆಗಿಲ್ವಂತೆ ನಷ್ಟ!
ಮೈಸೂರು, ಆಗಸ್ಟ್ 1 : ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಹೆದ್ದಾರಿ ಅಕ್ಕಪಕ್ಕದ ಬಾರ್ ಮತ್ತು ರೆಸ್ಟೋರೆಂಟ್ ಬಂದ್ ಆಗಿದ್ದರೂ ಜಿಲ್ಲೆಯಲ್ಲಿ ಅಬಕಾರಿ ಇಲಾಖೆಗೆ ಹೆಚ್ಚಿನ ಮಟ್ಟದ ನಷ್ಟ ಸಂಭವಿಸಿಲ್ಲ ಎಂಬುದು ಅಚ್ಚರಿಯ ಸಂಗತಿ.
ಇತ್ತೀಚೆಗೆ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಸಮೀಪದ ಗ್ರಾಮಗಳಲ್ಲಿ ಜನಸಂಖ್ಯೆ 20 ಸಾವಿರದ ಒಳಗಿದ್ದರೆ 220 ಮೀ. ಹಾಗೂ ಅದಕ್ಕಿಂತಲೂ ಹೆಚ್ಚಿದ್ದರೆ 500 ಮೀ. ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಿದ ಆದೇಶದಿಂದ ಜಿಲ್ಲೆಯಲ್ಲಿ 148 ಬಾರ್ ಗಳು ಬಂದ್ ಆದವು. ಹಾಗಿದ್ದೂ ಒಟ್ಟಾರೆ ಆದಾಯದಲ್ಲಿ ಶೇ.2ರಷ್ಟು ಮಾತ್ರವೇ ಇಳಿಕೆ ಆಗಿದೆ. ಕಾನೂನು ಪ್ರಕಾರವಾಗಿ ಬೇರೆಡೆಗೆ ಮದ್ಯ ಮಾರಾಟದಂಗಡಿ ಸ್ಥಳಾಂತರಿಸಿ ಪರವಾನಗಿ ನವೀಕರಿಸಿಕೊಳ್ಳಲು ಸೆಪ್ಟೆಂಬರ್ ಮಾಸಾಂತ್ಯದವರೆಗೂ ಅವಕಾಶ ನೀಡಲಾಗಿದೆ.

ಅಬಕಾರಿ ಇಲಾಖೆ ಪ್ರಸಕ್ತ ಸಾಲಿನಲ್ಲಿ 2017ರ ಜುಲೈ ಮಾಸಾಂತ್ಯದವರೆಗೆ ಜಿಲ್ಲೆಯಲ್ಲಿ ಒಟ್ಟು 757069 ಸಂಚಿಕೆ (ಶೇ.92.06) ಗುರಿ ಇದ್ದು, 696965 ಸಂಚಿಕೆ (ಶೇ.79.85) ಗುರಿ ಸಾಧನೆ ಮಾಡಿದ್ದೇವೆ ಎನ್ನುತ್ತಾರೆ ಅಬಕಾರಿ ಇಲಾಖೆಯ ಉಪ ಆಯುಕ್ತ ಜಗದೀಶ್.
1,107 ಕೋಟಿ ರೂ. ದಾಖಲೆ ಸಂಗ್ರಹ:
ಕಳೆದ ಸಾಲಿನ ವಾರ್ಷಿಕ ಆದಾಯವನ್ನು ಗಮನಿಸಿದರೆ ಹಿಂದಿನ 2 ವರ್ಷಗಳ ಆದಾಯಕ್ಕಿಂತ 195 ಕೋಟಿ ರೂ. ಹೆಚ್ಚಾಗಿದ್ದು, ನಿರೀಕ್ಷೆಗೂ ಮೀರಿ ಇಲಾಖೆ ಸಾಧನೆ ಮಾಡಿದೆ. 2016-17ನೇ ಸಾಲಿನಲ್ಲಿ 1,107 ಕೋಟಿ ರೂ. ದಾಖಲೆ ತೆರಿಗೆ ಸಂಗ್ರಹವಾಗಿದ್ದು, 2015-16ರಲ್ಲಿ 911 ಕೋಟಿ ರೂ. ಹಾಗೂ 2014-15ರಲ್ಲಿ 693 ಕೋಟಿ ರೂ. ತೆರಿಗೆ ಸಂಗಹಿಸಲಾಗಿತ್ತು. ಮೈಸೂರು ವಿಭಾಗ-1ರಲ್ಲಿ ಶೇ.81.27, ವಿಭಾಗ-2ರಲ್ಲಿ ಶೇ.84.07, ವಿಭಾಗ-3ರಲ್ಲಿ 84.74, ವಿಭಾಗ-4ರಲ್ಲಿ ಶೇ. 80.69, ನಂಜನಗೂಡು ಶೇ.73.78, ತಿ.ನರಸೀಪುರ ಶೇ.72.99, ಹುಣಸೂರು ಶೇ.87.55, ಕೆ.ಆರ್.ನಗರ ಶೇ.90.74, ಪಿರಿಯಾಪಟ್ಟಣ ಶೇ.86.23, ಎಚ್.ಡಿ.ಕೋಟೆ ಶೇ.61.22 ವಹಿವಾಟು ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
2016-17ರಲ್ಲಿ ಹೆಚ್ಚು ಪ್ರಕರಣ:
ಕಳೆದ 3 ವರ್ಷಗಳಲ್ಲಿ ಅಬಕಾರಿ ಇಲಾಖೆಯಿಂದ ದಾಖಲಾದ ಮೊಕದ್ದಮೆಗಳಲ್ಲಿ ಪ್ರಸಕ್ತ ಸಾಲಿನಲ್ಲಿ 1,410 ಪ್ರಕರಣಗಳು ದಾಖಲಾಗಿವೆ. ಒಟ್ಟು 635 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. 2015-16ನೇ ಸಾಲಿನಲ್ಲಿ 1037 ಪ್ರಕರಣಗಳಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ 387 ಮೊಕದ್ದಮೆಗಳು ಹೆಚ್ಚಾಗಿ ದಾಖಲಾಗಿವೆ. ಈ ಸಾಲಿನಲ್ಲಿ ನಕಲಿ ಮಧ್ಯದ ಪ್ರಕರಣಗಳು ದಾಖಲಾಗಿಲ್ಲದಿದ್ದರೂ 30 ಲೀಟರ್ ನಕಲಿ ಮದ್ಯ ಮತ್ತು 7.280 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ. ನಮ್ಮ ಸರಕಾರವೇನೋ ಮುಖ್ಯ ರಸ್ತೆಯ ಬಾರ್ ಗಳನನ್ನೇನೋ ಬಂದ್ ಮಾಡಿದೆ. ಆದರೆ ನಮ್ಮ ಜನರು ಮದಿರೆಯ ದಾಸ್ಯವನ್ನು ಬಿಟ್ಟಿಲ್ಲವೆಂಬುದು ಮಾತ್ರ ಅಕ್ಷರಶಃ ಸತ್ಯ.












Click it and Unblock the Notifications