ರಾಜ್ಯ ಮುಕ್ತ ವಿವಿಯ 95 ಸಾವಿರ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ಪ್ರಮಾಣ ಪತ್ರ
ಮೈಸೂರು, ಜುಲೈ 13: ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಓದಿದ್ದ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ಪದವಿ ಪ್ರಮಾಣ ಪತ್ರ ನೀಡುವಂತೆ ರಾಜ್ಯ ಉಚ್ಚ ನ್ಯಾಯಾಲಯ ಆದೇಶಿಸಿದೆ. ಯುಜಿಸಿ ಮಾನ್ಯತೆ ರದ್ದಾಗಿದ್ದ ಹಿನ್ನೆಲೆಯಲ್ಲಿ 2013ರಿಂದ 2018ರವರೆಗೆ ಪರೀಕ್ಷೆ ಬರೆದವರ ಪದವಿ ಹಾಗೂ ಸ್ನಾತಕೋತ್ತರ ಪದವಿ ಪ್ರಮಾಣ ಪತ್ರವನ್ನು ತಡೆಹಿಡಿಯಲಾಗಿತ್ತು. ಆದ್ದರಿಂದ 95 ಸಾವಿರ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿತ್ತು.
ಕರಾಮುವಿ 2019-20ನೇ ಶೈಕ್ಷಣಿಕ ಸಾಲಿನ ಪ್ರವೇಶಾತಿ ಆರಂಭ
ಡಿ. ಶಿವಲಿಂಗಯ್ಯ ಅವರು ವಿವಿ ಕುಲಪತಿಯಾಗಿದ್ದ ಸಂದರ್ಭ, ಯುಜಿಸಿ ಮಾನ್ಯತೆ ನವೀಕರಣಕ್ಕೆ ಸಾಕಷ್ಟು ಶ್ರಮ ವಹಿಸಿದ್ದರು. ಇತ್ತೀಚೆಗೆ ಈ ಸ್ಥಾನಕ್ಕೆ ನೇಮಕಗೊಂಡ ಡಾ. ವಿದ್ಯಾಶಂಕರ್ ಕೂಡ ಈ ನಿಟ್ಟಿನಲ್ಲಿ ಮುತುವರ್ಜಿ ವಹಿಸಿದ್ದರು.
ರಾಜ್ಯ ಉಚ್ಚ ನ್ಯಾಯಾಲಯವು ತಾತ್ಕಾಲಿಕ ಪದವಿ ಪ್ರಮಾಣ ಪತ್ರ ನೀಡಲು ಕೆಎಸ್ಒಯುಗೆ ನಿರ್ದೇಶನ ನೀಡಿದೆ. ಈ ಮೂಲಕ ಯುಜಿಸಿ ಮಾನ್ಯತೆ ಪಡೆಯುವ ನಿಟ್ಟಿನಲ್ಲಿ ಕೆಎಸ್ಒಯು ಮೊದಲ ಹೆಜ್ಜೆ ಇಟ್ಟಿದೆ. ಅದಕ್ಕಾಗಿ ಕುಲಪತಿ ವಿದ್ಯಾಶಂಕರ ಅವರಿಗೆ ಅಭಿನಂದನೆ ಸಲ್ಲಿಸಿರುವುದಾಗಿ ಸಂಸದ ಪ್ರತಾಪ್ ಸಿಂಹ ಟ್ವೀಟಿಸಿದ್ದಾರೆ.