ಮೈಸೂರಿಗೆ ‘ಕೇರಳ’ ಕಂಟಕ; ಮೈಸೂರಿಗರ ನಿರ್ಲಕ್ಷ್ಯವೇ ಅಪಾಯ!
ಮೈಸೂರು, ಫೆಬ್ರವರಿ 23: ಕೊರೊನಾ ದಿನೇ ದಿನೇ ಹೆಚ್ಚಾಗುತ್ತಿದೆ. ಸಾಂಸ್ಕೃತಿಕ ನಗರಿ ಮೈಸೂರಿಗೆ ಕೇರಳ ಕೊರೊನಾ ಭಯ ವ್ಯಾಪಿಸಿದೆ. ಪ್ರತಿನಿತ್ಯ ಸಾವಿರಾರು ಮಂದಿ ಪ್ರವಾಸಿಗರು ಮೈಸೂರಿಗೆ ಆಗಮಿಸುತ್ತಿದ್ದು, ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ ಮುಂದಾಗಿದೆ.
ಕೇರಳದಿಂದ ಆಗಮಿಸುವ ಪ್ರವಾಸಿಗರ ಮೇಲೆ ಹದ್ದಿನಕಣ್ಣು ಇಡಲಾಗಿದ್ದು, ಪ್ರವಾಸಿಗರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಲಾಗಿದೆ. ಅಲ್ಲದೇ ಮೈಸೂರಲ್ಲಿ ನಡೆಯುವ ಸಭೆ ಸಮಾರಂಭದಲ್ಲಿ ಸಾಮಾಜಿಕ ಅಂತರವನ್ನು ಕಡ್ಡಾಯಗೊಳಿಸಲಾಗಿದೆ.
ಪ್ರತಿ ಮದುವೆಗೆ 500 ಜನರನ್ನು ಸೀಮಿತಗೊಳಿಸಲಾಗಿದೆ . ಅಲ್ಲದೇ ಬಾಣಸಿಗರ ಮೇಲೂ ನಿಗಾ ಇಡಲು ಸೂಚನೆ ಕೊಡಲಾಗಿದೆ. ಮತ್ತೊಂದೆಡೆ ಕೊರೊನಾ ನಿಯಮಗಳನ್ನೇ ಮೈಸೂರಿನ ಜನರು ಮರೆತಿದ್ದಾರೆ.

ಮಾಸ್ಕ್ ಧರಿಸದೇ ನಿರ್ಭೀತಿಯಿಂದ ಜನರು ಓಡಾಡುತ್ತಿದ್ದಾರೆ. ಈ ಧೋರಣೆಯೇ ಅಧಿಕಾರಿಗಳಿಗೆ ತಲೆನೋವಾಗಿದೆ. 2ನೇ ಕೊರೊನಾ ಅಲೆ ತಡೆಯಲು ಅರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ. ಮೈಸೂರು ಪ್ರವೇಶಿಸುವ ಗಡಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಕೊರೊನಾ ಮರೆತ ಮೈಸೂರಿಗರು; ಚೀನಿ ಮಹಾಮಾರಿಗೆ ಬೆಚ್ಚಿಬಿದ್ದಿದ್ದ ಮೈಸೂರು ಕಳೆದ ವರ್ಷ ಭಾರಿ ಸಂಕಷ್ಟ ಅನುಭವಿಸಿತ್ತು. ಜ್ಯುಬಿಲಿಯೆಂಟ್ ಕಾರ್ಖಾನೆ ಯಡವಟ್ಟಿನಿಂದಲೂ ತೀವ್ರ ಭೀತಿ ಸೃಷ್ಟಿಸಿತ್ತು.
ಆಗೆಲ್ಲಾ ಮೈಸೂರಿಗರು ಸಾಕಷ್ಟು ಜಾಗರೂಕತೆಯಿಂದ ವರ್ತಿಸಿದ್ದರು. ಕೊರೊನಾ ಆತಂಕ ಕೊಂಚ ಕಡಿಮೆಯಾದ ಬಳಿಕ ರೂಲ್ಸ್ ಮರೆತ ಜನರು ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವುದನ್ನೇ ಬಿಟ್ಟಿದ್ದಾರೆ. ಈಗ ಕೊರೊನಾ ಎರಡನೇ ಅಲೆ ಭೀತಿ ಆರಂಭವಾಗಿದ್ದು, ಮೈಸೂರಿಗೆ ಕಂಟಕವಾಗೋ ಸಾಧ್ಯತೆ ದಟ್ಟವಾಗಿದೆ .
ಪ್ರವಾಸೋದ್ಯಮ ಚೇತರಿಕೆ ಹೊತ್ತಲ್ಲೇ ಡೇಂಜರ್; ಮೈಸೂರಿನಲ್ಲಿ ಚಾಮುಂಡಿ ಬೆಟ್ಟ ಮೃಗಾಲಯ, ಅರಮನೆ ಸೇರಿ ಹತ್ತಾರು ಪ್ರವಾಸಿ ತಾಣಗಳಿವೆ. ಕಳೆದೊಂದು ತಿಂಗಳಿಂದ ಪ್ರವಾಸೋದ್ಯಮ ಸಾಕಷ್ಟು ಸುಧಾರಿಸಿತ್ತು.
ಆದರೆ, ಹೊರ ರಾಜ್ಯದಿಂದ ಬರುವ ಪ್ರವಾಸಿಗರೇ ಕಂಟಕವಾಗಿದ್ದಾರೆ. ಪ್ರವಾಸೋದ್ಯಮ ಸುಧಾರಿಸಿದ್ದು ಒಂದೆಡೆಯಾದರೆ, ಕೊರೊನಾ ಆತಂಕವೂ ಹೆಚ್ಚಾಗಿದೆ. ಎಲ್ಲೆಡೆ ಕೊರೊನಾ ಎರಡನೇ ಅಲೆ ಜೋರಾಗಿದ್ದು, ಮೈಸೂರು ಕೂಡ ಡೇಂಕರ್ ಝೋನ್ಗೆ ಸಿಲುಕುವ ಸಾಧ್ಯತೆ ಇದೆ.
ಫೆಬ್ರವರಿ 22ರ ವರದಿಯಂತೆ ಮೈಸೂರು ನಗರದಲ್ಲಿ 29 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 53,941. ಒಟ್ಟು ಸಕ್ರಿಯ ಪ್ರಕರಣಗಳು 159.












Click it and Unblock the Notifications