ಹೋಟೆಲ್ ಆಗಿ ಬದಲಾಗುತ್ತಿದೆ ಮೈಸೂರಿನ ಪಾರಂಪರಿಕ ಕಟ್ಟಡ ಗನ್ ಹೌಸ್
ಮೈಸೂರು, ಸೆಪ್ಟೆಂಬರ್.21: ಸಾಂಸ್ಕೃತಿಕ ನಗರಿ ಮೈಸೂರಿನ ಪಾರಂಪರಿಕ ಕಟ್ಟಡ ಗನ್ ಹೌಸ್ ಗೆ ಮರುಜೀವ ನೀಡಲಾಗುತ್ತಿದ್ದು, ಗನ್ ಹೌಸ್, ಬಿಲ್ಡಿಂಗ್ ಇಂಪಿರಿಯಲ್ ಹೋಟೆಲ್ ಆಗಿ ಪುನರ್ ಸ್ಥಾಪನೆಗೆ ಚಾಲನೆ ನೀಡಲಾಗುತ್ತಿದೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದರು.
ನಿನ್ನೆ (ಸೆ.20) ಗನ್ ಹೌಸ್ ದುರಸ್ತಿ ಕಾಮಗಾರಿ ವೀಕ್ಷಣೆ ಬಳಿಕ ಮಾತನಾಡಿದ ಅವರು, ಈ ಗನ್ ಹೌಸ್ ಅನ್ನು ಪ್ರತಿಷ್ಠಿತ ಹೋಟೆಲ್ ಉದ್ಯಮಕ್ಕೆ ತೊಡಗಿಸಬೇಕೆಂಬುದು ಶ್ರೀಕಂಠದತ್ತ ಒಡೆಯರ್ ಅವರ ಕನಸಾಗಿತ್ತು. ಅಷ್ಟೇ ಅಲ್ಲ, ಹೋಟೆಲ್ ಉದ್ಯಮ ಅವರಿಗೆ ಇಷ್ಟ. ಅವರ ಇಷ್ಟದಂತೆ ನಾನೂ ಹೋಟೆಲ್ ನಿರ್ಮಾಣಕ್ಕೆ ಮುಂದಾಗಿದ್ದೀನಿ.
ಹೋಟೆಲ್ ಪರವಾನಿಗೆಯು ನನ್ನ ಹೆಸರಿನಲ್ಲಿಯೇ ಇರಲಿದೆ. ಇದರಿಂದ ಜನರಿಗೆ ಒಂದಷ್ಟು ಅನುಕೂಲವಾಗಲಿದೆ ಎಂದರು. ಇದರ ಮೂಲ ಕಟ್ಟಡಕ್ಕೆ ಯಾವುದೇ ಹಾನಿ ಉಂಟು ಮಾಡದೆ ಕಟ್ಟಡವನ್ನು ದುರಸ್ಥಿ ಮಾಡಲಾಗುತ್ತದೆ. ಕಟ್ಟಡದ ಸುತ್ತ-ಮುತ್ತ ಅನುಕೂಲಕ್ಕೆ ತಕ್ಕಂತೆ ಟೆಂಟ್ ನಿರ್ಮಾಣ ಮಾಡಲಾಗುತ್ತದೆ.

ಜತೆಗೆ ಹಿಂದಿನ ಗತವೈಭವ ಮರುಕಳಿಸುವಂತೆ ಕಟ್ಟಡದ ನಿರ್ಮಾಣಕ್ಕೆ ಪ್ರಯತ್ನ ಮಾಡಲಾಗುತ್ತದೆ ಎಂದು ಪ್ರಮೋದಾದೇವಿ ಒಡೆಯರ್ ತಿಳಿಸಿದರು. ಮೈಸೂರಿಗೆ ಬರುವ ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೋಟೆಲ್ ಆರಂಭಿಸಲಾಗುವುದು.
ಮುಖ್ಯವಾಗಿ ದಸರಾ ಸಂದರ್ಭದಲ್ಲಿ ಬಂದು ಹೋಗುವವರಿಗೆ ಯಾವುದೇ ಅನಾನುಕೂಲವಾಗಬಾರದು. ಪ್ರಸ್ತುತ ಸುನಂದ ಗಿರೀಶ್ ಎಂಬುವವರಿಂದ ಹೋಟೆಲ್ ನಿರ್ಮಾಣ ಮಾಡಲಾಗುತ್ತಿದ್ದು, ಅದು ಮಲ್ಟಿ ಕ್ಯುಸಿನ್ ಹೋಟೆಲ್ ಆಗಲಿದೆ. ಕಟ್ಟಡದ ಪಾರಂಪರಿಕತೆ ಉಳಿಸಿಕೊಳ್ಳುವಂತೆ ಖಾಸಗಿ ಸಂಸ್ಥೆಯಿಂದ ಕಾಮಗಾರಿ ನಡೆಯಲಿದೆ.
ಇನ್ನು 3 ತಿಂಗಳಲ್ಲಿ ಈ ಹೋಟೆಲ್ ತಲೆ ಎತ್ತಲಿದ್ದು, ಈಗಾಗಲೇ ಜಾಗ ಬಾಡಿಗೆ ಪಡೆದು ಕಾಮಗಾರಿ ಆರಂಭ ಮಾಡಲಾಗಿದೆ.












Click it and Unblock the Notifications