ಜಂಬೂ ಸವಾರಿ ಆನೆ ಮೇಲೆ ಚಿತ್ತಾರ ಬಿಡಿಸುವ ನಾಯಕರು ಇವರು
ಮೈಸೂರು, ಸೆಪ್ಟೆಂಬರ್ 30 : ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವುದು ಜಂಬೂಸವಾರಿ. ಅದರಲ್ಲೂ ಈ ಬಾರಿಯ ಮೆರವಣಿಗೆಯಲ್ಲಿ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತು ಸಾಗಲಿರುವ ಅರ್ಜುನ ನೇತೃತ್ವದ ಗಜಪಡೆ ಗಮನ ಸೆಳೆಯಲಿದೆ. ಆನೆ ಎಂದರೆ ನಮ್ಮ ಗಮನ ಸೆಳೆಯುವುದು ಅವುಗಳ ಮೈ ಮೇಲಲಿರುವ ಚಿತ್ತಾಕರ್ಷಕ ಬಣ್ಣಗಳಲ್ಲಿ ಹಾಗೂ ಕಲೆಯಲ್ಲಿಯೇ.
ಇದನ್ನು ಕಾರ್ಯರೂಪಕ್ಕೆ ತರುವವರು ಬೇರಾರು ಅಲ್ಲ, ಹುಣಸೂರಿನ ಕಲಾ ಶಿಕ್ಷಕ ನಾಗಲಿಂಗಪ್ಪ ಚಂದ್ರಪ್ಪ 15 ವರ್ಷಗಳಿಂದಲೂ ಚಿತ್ತಾರ ಬಿಡಿಸುವ ಎಲ್ಲರ ಗಮನಸೆಳೆದ ನಾಗಲಿಂಗಪ್ಪ, ಇದೊಂದು ಮಹಾ ಕಾರ್ಯವೆಂದೇ ಪಾಲಿಸಿಕೊಂಡು ಬಂದಿದ್ದಾರೆ.
ನವರಾತ್ರಿಯ ವೈಭವಕ್ಕೆ ಅನುಗುಣವಾಗಿ ಗಜಪಡೆಯನ್ನು ಬಣ್ಣಗಳಲ್ಲಿ ಅಲಂಕಾರ ಮಾಡುವ ಮೂಲಕ ಜನಾಕರ್ಷಣೀಯಗೊಳಿಸುವ ಕಾಯಕವನ್ನು 15 ವರ್ಷದಿಂದ ಮಾಡಿಕೊಂಡು ಬಂದಿದ್ದಾರೆ. ಹುಣಸೂರಿನ ನಿವಾಸಿಯೂ ಆದ ಪಿರಿಯಾಪಟ್ಟಣ ತಾಲ್ಲೂಕಿನ ಪಂಚವಳ್ಳಿ ಸರ್ಕಾರಿ ಶಾಲೆಯ ಕಲಾ ಶಿಕ್ಷಕರಾಗಿರುವ ನಾಗಲಿಂಗಪ್ಪ ಚಂದ್ರಪ್ಪ ಈ ಬಾರಿಯ ದಸರಾ ಆನೆಗಳಿಗೆ ಮೇಕಪ್ ಮಾಡುತ್ತಿದ್ದಾರೆ. ಇದಕ್ಕಾಗಿ ಎರಡು ದಿನಗಳ ಹಿಂದೆಯೇ ಅರಮನೆಗೆ ಬಂದು ರಾತ್ರಿಯಿಂದ ದಸರಾ ಮಹೋತ್ಸವದ 15 ಆನೆಗಳಿಗೂ ಅಲಂಕಾರ ಮಾಡುವ ಕಾಯಕ ಆರಂಭಿಸಿದ್ದಾರೆ .
ಅಪಾರ ಜನಸ್ತೋಮದ ನಡುವೆ ಸಾಗುವ ಆನೆಗಳ ಮೇಲೆ ಚಿತ್ತಾರ ಮೂಡಿಸುವುದು ಗಮನಾರ್ಹ. ವಿವಿಧ ಚಿತ್ರಗಳನ್ನು ಮೈಮೇಲೆ ಮೂಡಿಸಿಕೊಂಡು ಸಾಗಲಿರುವ ಆನೆಗಳು ಚಿತ್ರದಿಂದಲೇ ಜನಾಕರ್ಷಣೀಯವಾಗಿದೆ. ಅವುಗಳ ಕಿವಿಯಲ್ಲಿ ಶಂಖ, ಚಕ್ರ ಮತ್ತು ಸೊಂಡಿಲ ಮೇಲೆ ಗಂಡ ಭೇರುಂಡ, ಹೂವು, ಎಲೆ, ಬಳ್ಳಿ ಹಾಗೂ ದಂತದ ಹಿಂಭಾಗ ಗಿಳಿ, ಎಲೆ ಕೆನ್ನೆಯ ಮೇಲೆ ಹೂವು, ಬಳ್ಳಿ ಮೊಗ್ಗು, ಎಲೆ ಕಾಲ ಮೇಲೆ ಪಕ್ಷಿ, ಎಲೆ, ಹೂವು , ಮೊಗ್ಗು , ಬಳ್ಳಿ ಆನೆಯ ಹಿಂಭಾಗ ಬಾಲದ ಗಾತ್ರಕ್ಕೆ ತಕ್ಕಂತೆ ಪಕ್ಷಿ ಚಿತ್ರದ ರಚನೆ ಹಾಗೂ ಹೂವು, ಬಳ್ಳಿ ಅಲಂಕಾರ ಕಣ್ಣಿನ ಸುತ್ತು ಎಲೆ ಆಕೃತಿ ಹಣೆಯ ಮೇಲೆ ನಾಮ ಮತ್ತು ಸುರಳಿ ಚಿತ್ರವನ್ನೂ ಬಿಡಿಸಲಾಗುತ್ತದೆ .

ಗಜದ ಮೈತುಂಬ ಬಣ್ಣದ ಚಿತ್ತಾರ
ದೇಹದ ಗಾತ್ರಕ್ಕೆ ಅನುಗುಣವಾಗಿ ಬರೆಯುವ ಚಿತ್ರಗಳು ಅವುಗಳ ಸೌಂದರ್ಯ ಹಾಗೂ ರಾಜ ಗಾಂಭೀರ್ಯದ ನಡೆಯನ್ನುದ್ವಿಗುಣ ಗೊಳಿಸಲಿದೆ. ದಸರಾ ಆನೆಗಳ ಮೇಲೆ ಚಿತ್ರ ಬರೆಯುವುದಕ್ಕೆ ಬಳಸುವ ಬಣ್ಣಗಳಿಂದ ಯಾವುದೇ ದುಷ್ಪರಿಣಾಮ ಉಂಟಾಗುವುದಿಲ್ಲ. ಚರ್ಮದ ಮೇಲೆ ಯಾವುದೇ ದುಷ್ಪರಿಣಾಮ ನೀಡದಂತಹ ವಾಟರ್ ಪೈಂಟ್ ಬಳಸಲಾಗುತ್ತಿದೆ.

ಉಗುರಿಗೆ ಸ್ವರ್ಣ ಬಣ್ಣದ ಹೊಳಪು
ಅಂಬಾರಿ ಹೊರುವ ಅರ್ಜುನ ಸೇರಿದಂತೆ ಎಲ್ಲಾ ಆನೆಗಳ ಉಗುರಿಗೆ ಸ್ವರ್ಣ ಬಣ್ಣ ಹಚ್ಚಲಾಗುತ್ತದೆ. ಸೊಂಡಿಲ ಮೇಲಿರುವ ಬಿಳಿ ಮಚ್ಚುಗಳಿಗೆ ಕಣ್ಣು ಬಣ್ಣದ ಲೇಪನ ಮಾಡಿ ಮರೆಮಾಚಲಾಗುತ್ತಿದೆ. ಬಳಿಕ 2 ಡಿ ಎಫೆಕ್ಟ್ನಲ್ಲಿ ಚಿತ್ರವನ್ನು ಬಿಳಿ, ಕೆಂಪು , ಹಸಿರು , ಹಳದಿ , ಕಿತ್ತಳೆ ಬಣ್ಣ ಬಳಸಿ ಚಿತ್ರ ಬಿಡಿಸಲಾಗುತ್ತದೆ . ಈ ಬಣ್ಣ ರಾಸಾಯನಿಕ ವಸ್ತುವಿನಿಂದ ಮುಕ್ತವಾಗಿರುತ್ತದೆ .

ಚಿತ್ತಾರ ಮೂಡಿಸುವ ಚಂದ್ರಪ್ಪ ಬಡಿಗೇರ
ದಸರಾ ಮಹೋತ್ಸವದ ಆನೆಗಳಿಗೆ ನಾಗಲಿಂಗಪ್ಪ ಚಂದ್ರಪ್ಪ ಬಡಿಗೇರ ಕಳೆದ ಹದಿನೈದು ವರ್ಷದಿಂದ ಚಿತ್ತಾರ ಬಿಡಿಸುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿದ್ದಾರೆ . ಅವರು ಮೂಲತಃ ಗದಗ ಜಿಲ್ಲೆಯ ಕುರ್ತಕೋಟಿ ಗ್ರಾಮದ ಚಿತ್ರಕಲಾ ವಿಭಾಗದಲ್ಲಿ ಡಿಪ್ಲೊಮಾ ಪದವೀಧರರಾಗಿದ್ದು, ವೈಜಯಂತಿ ಚಿತ್ರಕಲಾ ಶಾಲೆಯಲ್ಲಿ ಶಿಕ್ಷಕರಾಗಿದ್ದ ವೇಳೆ ದಸರಾ ಆನೆಗಳಿಗೆ ಚಿತ್ತಾರ ಮೂಡಿಸುವ ಕಲೆ ಮತ್ತು ಜವಾಬ್ದಾರಿ ಹುಡುಕಿಕೊಂಡು ಬಂದಿದೆ .

ತಾಳ್ಮೆಯ ಪರೀಕ್ಷೆ!
ಬೃಹತ್ ಗಾತ್ರದ ಆನೆಗಳಿಗೆ ಚಿತ್ರ ಬಿಡಿಸುವುದು ಸುಲಭದ ಮಾತಲ್ಲ. ಸದಾ ಕಿವಿ ಬಡಿಯುತ್ತಾ ಸೊಂಡಿಲು ಮತ್ತು ಬಾಲ ಅಲ್ಲಾಡಿಸುತ್ತಲೇ ಇರುವ ಆನೆಗಳ ಮೈಮೇಲೆ ಚಿತ್ತಾರ ಬಿಡಿಸುವ ಕಾಯಕ ಅತ್ಯಂತ ಕಷ್ಟದ ಕೆಲಸ. ಆದರೂ ಸವಾಲಾಗಿ ಸ್ವೀಕರಿಸುವ ಕಲಾ ಶಿಕ್ಷಕ ನಾಗಲಿಂಗಪ್ಪ ಬಡಿಗೇರ ಅವರು ತಮ್ಮ ತಂಡದ ಸದಸ್ಯರೊಂದಿಗೆ ತಾಳ್ಮೆಯಿಂದ ಚಿತ್ತಾರ ಮೂಡಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ .

ನಮ್ಮ ಸೌಭಾಗ್ಯವೇ ಸರಿ
ಒನ್ ಇಂಡಿಯಾದೊಂದಿಗೆ ಮಾತನಾಡಿದ ನಾಗಲಿಂಗಪ್ಪ, ದಸರಾ ಆನೆಗಳಿಗೆ ಚಿತ್ತಾರ ಬಿಡಿಸುವ ಮಹತ್ಕಾರ್ಯ ನಮಲ್ಲಿ ಸಿಕ್ಕಿರುವುದು ಸೌಭಾಗ್ಯವೇ ಸರಿ. ಇದೊಂದು ಪುಣ್ಯದ ಕೆಲಸವೆಂದು ಭಾವಿಸಿದ್ದೇನೆ. ಒಂದೊಂದು ಆನೆಗೆ ಚಿತ್ತಾರ ಬಿಡಿಸಲು ಒಂದೂವರೆ ತಾಸು ಸಮಯ ಹಿಡಿಯುತ್ತದೆ. ಅಂಬಾರಿ ಆನೆ ಅರ್ಜುನನಿಗೆ ಎರಡು ಗಂಟೆಗಳ ಕಾಲ ಚಿತ್ತಾರ ಮೂಡಿಸುತ್ತೇವೆ. ಕಳೆದ 15 ವರ್ಷದಿಂದ ದಸರಾ ಆನೆಗಳಿಗೆ ಚಿತ್ತಾರ ಬಿಡಿಸಿ ಅವುಗಳ ಸೌಂದರ್ಯ ಹೆಚ್ಚಿಸುವ ಕಾಯಕ ಮಾಡುತ್ತಿದ್ದೇನೆ. ಬಲರಾಮ ಶಾಂತ ಸ್ವಭಾವದವರಾಗಿದ್ದು ಬಣ್ಣ ಹಚ್ಚುವಾಗ ಸಹಕರಿಸುತ್ತಾನೆ ಉಳಿದ ಎಲ್ಲಾ ಆನೆಗಳು ಅಷ್ಟೇ ಎನ್ನುತ್ತಾರೆ.












Click it and Unblock the Notifications