ಮೈಸೂರಿನಲ್ಲಿ ಉಕ್ಕಿ ಹರಿಯುತ್ತಿರುವ ಕಾವೇರಿ, ಕಪಿಲೆ: ಪ್ರವಾಹ ಪರಿಸ್ಥಿತಿ
ಮೈಸೂರು, ಆಗಸ್ಟ್ 17 : ಕೇರಳದಲ್ಲಿ ಮಳೆ ಆರ್ಭಟ ಮುಂದುವರಿದಿರುವ ಕಾರಣ ಭಾರೀ ಪ್ರಮಾಣದಲ್ಲಿ ನೀರು ಜಿಲ್ಲೆಗೆ ಹರಿದು ಬರುತ್ತಿದ್ದು ದಕ್ಷಿಣ ಕಾಶಿ ನಂಜನಗೂಡು ಮತ್ತೆ ಪ್ರವಾಹದ ಭೀತಿಗೆ ಒಳಗಾಗಿದೆ.
ಜಲಾಶಯದಿಂದ 70 ಸಾವಿರ ಕ್ಯೂಸೆಕ್ಸ್ಗೂ ಹೆಚ್ಚು ನೀರನ್ನು ಹೊರಬಿಡಲಾಗಿದೆ. 6 ದಿನಗಳ ಹಿಂದೆಯಷ್ಟೇ ಮುಳುಗಡೆಯಾಗಿದ್ದ ನಂಜನಗೂಡು ಪಟ್ಟಣದಲ್ಲಿ ಈಗ ಮತ್ತೆ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದ ಶ್ರೀಕಂಠೇಶ್ವರ ದೇವಾಲಯ ಆವರಣ, ಕಪಿಲೆ ಸ್ನಾನಘಟ್ಟ, ತೋಪಿನ ಬೀದಿ, ಸರಸ್ವತಿ ಕಾಲೊನಿ, ರಾಜಾಜಿಕಾಲೋನಿ, ಹಳ್ಳದಕೇರಿ ಗಾಮಾಂತರದ ಹೆಜ್ಜಿಗೆ ತೊರೆಮಾವು, ಬೊಕ್ಕಳ್ಳಿ ಕುಳ್ಳಂಕನ ಹುಂಡಿ, ಕತ್ಯಾಡಿಪುರ, ಸುತ್ತೂರು ಸೇರಿದಂತೆ ಅನೇಕ ಜನವಸತಿ ಪ್ರದೇಶಗಳು ಹಾಗೂ ಸಾವಿರಾರು ಎಕರೆ ಕೃಷಿಭೂಮಿ ಜಲಾವೃತವಾಗಿವೆ.

ಕಪಿಲಾ ನದಿಪಾತ್ರದ ಜನಗಳಿಗೆ ಭೀತಿ
ಶ್ರೀಕಂಠೇಶ್ವರ ದೇವಳದ ದಾಸೋಹ ಭವನದಲ್ಲಿದ್ದ ಸಂತ್ರಸ್ಥರು ಗಂಜಿ ಕೇಂದ್ರದಿಂದ ಮನೆಗೆ ಹಿಂತಿರುಗಬೇಕು ಎಂದು ಕೊಂಡಿರುವಾಗಲೇ ಪ್ರವಾಹದ ಆಘಾತ ಎದುರಾಗಿದೆ. ಕಪಿಲಾ ನದಿಪಾತ್ರದ ನಂಜನಗೂಡು, ಎಚ್.ಡಿ.ಕೋಟೆ, ಗುಂಡ್ಲುಪೇಟೆ ತಾಲ್ಲೂಕಿನ ಅನೇಕ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ.

ಉಕ್ಕಿ ಹರಿಯುತ್ತಿರುವ ಕಾವೇರಿ
ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ಇಲ್ಲಿನ ಕೆಲವು ಯಾತ್ರಾ ಸ್ಥಳಗಳು, ರೈತರ ಗದ್ದೆಗಳು ಜಲಾವೃತಗೊಂಡು ಬೆಳೆಗಳು ಹಾನಿಗೀಡಾಗಿದೆ. ಪಟ್ಟಣದಲ್ಲಿ ಕೂಡ ಜನಜೀವನ ಅಸ್ತವ್ಯಸ್ತಗೊಂಡಿದೆ.

ಕಾವೇರಿಗೆ ಹಾರಂಗಿಯಿಂದ ನೀರು
ಹಾರಂಗಿ ಜಲಾಶಯದಿಂದ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಕಾವೇರಿ ನದಿಗೆ ಕಳೆದ ಎರಡು-ಮೂರು ದಿನಗಳಿಂದ ನೀರು ಪ್ರವಾಹ ಮಟ್ಟದಲ್ಲಿ ಹರಿದು ಬರುತ್ತಿದ್ದು, ತಾಲ್ಲೂಕಿನ ಹನಸೋಗೆ, ಚುಂಚನಕಟ್ಟೆ, ಬಳ್ಳೂರು ಜಲಾಶಯಗಳು ತುಂಬಿ ಹರಿಯುತ್ತಿವೆ. ಹೆಚ್ಚುವರಿಯಾದ ನೀರು ನದಿಯಲ್ಲಿ ಹರಿದು ಬರುತ್ತಿರುವುದರಿಂದ ಚುಂಚನಕಟ್ಟೆ ಧನುಷ್ಕೋಟಿ ಜಲಪಾತ ಸಂಪೂರ್ಣ ತುಂಬಿ ಧುಮ್ಮಿಕ್ಕುತ್ತಿದೆ.

ಕೋಟ್ಯಂತರ ರೂತಾಯಿ ನಷ್ಟ
ಮಳೆಯ ಅವಾಂತರಗಳಿಂದ ಮನೆಗೋಡೆ ಕುಸಿದಿರುವ, ರಸ್ತೆ ಗುಂಡಿ ಬಿದ್ದಿದ್ದು, ರಸ್ತೆಯೆಲ್ಲಾ ರಾಡಿಯಾಗಿವೆ, ಜಮೀನಿಗೆ ನೀರು ನುಗ್ಗಿ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಜಾನುವಾರುಗಳ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.

ರಾಷ್ಟ್ರೀಯ ಹೆದ್ದಾರಿ ಬಂದ್
ಮೈಸೂರು-ನಂಜನ ಗೂಡು-ಊಟಿ ರಾಷ್ಟ್ರೀಯ ಹೆದ್ದಾರಿ 766ರ ನಂಜನ ಗೂಡು ತಾಲ್ಲೂಕು ಚಿಕ್ಕಯ್ಯನಛತ್ರ ಹೋಬಳಿಯ ಬಳಿಯಿರುವ ಮಲ್ಲನಮೂಲೆ ಮಠದ ಬಳಿ ಮತ್ತೆ ಕಪಿಲೆಯ ಪ್ರವಾಹ ಹೆಚ್ಚುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಜಲಾವೃತಗೊಂಡು ಬಂದ್ ಆಗುವ ಆತಂಕ ಎದುರಾಗಿದ್ದು, ಪ್ರಯಾಣಿಕರಲ್ಲಿ ಆತಂಕ ಮನೆಮಾಡಿದೆ.

ನಿರಾಶ್ರಿತರಿಗೆ ಸರ್ಕಾರಿ ಶಾಲೆಯಲ್ಲಿ ಆಶ್ರಯ
ಎಚ್.ಡಿ.ಕೋಟೆ ತಾಲ್ಲೂಕಿನ ಮಚ್ಚೂರು, ಆನೆಮಾಳ,ವಡಕನಮಾಳ ಹಾಗೂ ಡಿ.ಬಿ.ಕುಪ್ಪೆ ಆಸುಪಾಸಿನ ಗ್ರಾಮಗಳು ಜಲಾವೃತವಾಗಿವೆ. ಡಿ.ಬಿ.ಕುಪ್ಪೆಯ ಸರ್ಕಾರಿ ಶಾಲೆಯಲ್ಲಿ 35 ಜನರಿಗೆ ಸರ್ಕಾರದ ವತಿಯಿಂದ ಆಶ್ರಯ ಕಲ್ಪಿಸಲಾಗಿದೆ. ಡಿ.ಬಿ.ಕುಪ್ಪೆ ಸರ್ಕಾರಿ ಶಾಲೆಗೆ ತಹಶೀಲ್ದಾರ್ ರಜೆ ಘೋಷಿಸಿದ್ದಾರೆ ನಿರಾಶ್ರಿತರಿಗೆ ಡಿ.ಬಿ.ಕುಪ್ಪೆ ಗಂಜಿ ಕೇಂದ್ರದಲ್ಲಿ ಅಧಿಕಾರಿಗಳು ಆಶ್ರಯ ನೀಡಿದ್ದಾರೆ.












Click it and Unblock the Notifications