2ನೇ ದಿನವೂ ಚಾಮುಂಡೇಶ್ವರಿಯಲ್ಲಿ ಎಚ್ಡಿಕೆ ಭರ್ಜರಿ ರೋಡ್ ಶೋ
ಮೈಸೂರು, ಏಪ್ರಿಲ್ 15: ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಚಾಮುಂಡೇಶ್ವರಿಯಲ್ಲಿ ಇಂದೂ ಕೂಡ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ 2ನೇ ದಿನದ ಭರ್ಜರಿ ಪ್ರಚಾರ ನಡೆಸಿದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ. ಟಿ. ದೇವೇಗೌಡ ಪರ ಮೂರು ದಿನಗಳ ಕಾಲ ಪ್ರಚಾರ ನಡೆಸುತ್ತಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ, ಇಂದು ಶ್ರೀರಾಂಪುರದಿಂದ ಪ್ರಚಾರ ಕಾರ್ಯ ಆರಂಭಿಸಿದರು. ಬಳಿಕ ಹೆಚ್ಚು ನಾಯಕ ಜನಾಂಗದವರು ಇರುವ ಗ್ರಾಮ ಉದ್ಬೂರಿನಲ್ಲಿ ತೆರೆದ ವಾಹನದಲ್ಲಿ ಮತ ಯಾಚನೆ ಮಾಡಿದರು.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಹೆಚ್. ಡಿ. ಕುಮಾರಸ್ವಾಮಿ, "ಸೋಲುವ ಭಯ ಸಿದ್ದರಾಮಯ್ಯ ಅವರಿಗೆ ಕಾಡುತ್ತಿದೆ. ಇದ್ದಕ್ಕಿದ್ದಂತೆ ಇರುವೆ ಬಿಟ್ಟುಕೊಂಡರು ಎಂಬ ಸ್ಥಿತಿ ಅವರಿಗಾಗಿದೆ. ಪುತ್ರ ವ್ಯಾಮೋಹಕ್ಕೆ ವರುಣಾ ಬಿಟ್ಟು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬಂದಿದ್ದಾರೆ. ಆದರೆ ಇಲ್ಲಿಯೂ ಅವರಿಗೆ ಗೆಲ್ಲುವ ವಿಶ್ವಾಸ ಇಲ್ಲ. ಹಾಗಾಗಿ ಬದಾಮಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರನ್ನು ಸೋಲಿಸಲು ನಾನು ಪ್ರಯತ್ನ ಪಡಬೇಕಿಲ್ಲ. ಇಲ್ಲಿನ ಜನರೇ ಅವರನ್ನು ಸೋಲಿಸುತ್ತಾರೆ," ಎಂದರು.

ಕಾಂಗ್ರೆಸ್ ಧ್ವಜ ತೋರಿಸಿದ ಯುವಕರು
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಜಿ.ಟಿ ದೇವೇಗೌಡರ ಪರ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಪ್ರಚಾರ ನಡೆಸುತ್ತಿದ್ದ ವೇಳೆ ಕಾಂಗ್ರೆಸ್ ಬಾವುಟ ಪ್ರದರ್ಶಿಸಿರುವ ಘಟನೆ ನಡೆದಿದೆ.
ನಗರದ ಮಾರ್ಬಳ್ಳಿಹುಂಡಿಯಲ್ಲಿ ಈ ಘಟನೆ ನಡೆದಿದೆ. ಇಂದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿದ್ದ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಮಾರ್ಬಳ್ಳಿಹುಂಡಿ ಗ್ರಾಮಕ್ಕೆ ಬಂದಾಗ 20 ಮಂದಿ ಯುವಕರು ಕಾಂಗ್ರೆಸ್ ಬಾವುಟ ಪ್ರದರ್ಶಿಸಿದ್ದಾರೆ.

ಈ ವೇಳೆ ಪೊಲೀಸರು ಅವರನ್ನು ತಡೆಯಲು ಮುಂದಾಗಿದ್ದು, ಪೊಲೀಸರ ಜೊತೆಯೇ ಅವರು ವಾಗ್ವಾದಕ್ಕಿಳಿದಿದ್ದಾರೆ. ಈ ನಡುವೆ ಕಾಂಗ್ರೆಸ್ ಗೆ ಪ್ರತಿಯಾಗಿ ಜೆಡಿಎಸ್ ಕಾರ್ಯಕರ್ತರು ಬಾವುಟ ಪ್ರದರ್ಶಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಜೆಡಿಎಸ್ ಅಭ್ಯರ್ಥಿ ಜಿ.ಟಿ. ದೇವೇಗೌಡ, ಇದು ಕಾಂಗ್ರೆಸ್ ಪ್ರಾಯೋಜಿತ ಕೆಲಸ. ಮಾರ್ಬಳ್ಳಿಹುಂಡಿಯಲ್ಲಿ ಕುರುಬರೇ ಹೆಚ್ಚಾಗಿದ್ದಾರೆ. ತಮ್ಮ ಧ್ವಜ ಪ್ರದರ್ಶಿಸುವಂತೆ ಕಾಂಗ್ರೆಸ್ ಹೇಳಿಕೊಟ್ಟಿದೆ. ಪ್ರದರ್ಶಿಸಲಿ ಬಿಡಿ ಎಂದು ಕಿಡಿಕಾರಿದರು.












Click it and Unblock the Notifications