ಸಿಎಂ ಸಿದ್ದುಗೆ ಹಲೋ ಎಂದ ದೊಡ್ಡಗೌಡರು...!
ಮೈಸೂರು, ಜುಲೈ 23 : ಸದಾ ಮಾಧ್ಯಮಗಳ ಮುಂದೆ ಹಾವು -ಮುಂಗೂಸಿಯಂತೆ ದ್ವೇಷ ಕಾರುವ, ಆರೋಪ ಪ್ರತ್ಯಾರೋಪ ಮಾಡುವ, ಒಂದು ಕಾಲದಲ್ಲಿ ಗುರುಶಿಷ್ಯರಾಗಿದ್ದ, ಇದೀಗ ಬದ್ಧ ವೈರಿಯಂತೆ ವರ್ತಿಸುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದಾಗ ಪ್ರತಿಯೊಬ್ಬನಲ್ಲೂ ಕುತೂಹಲ ಮೂಡುವುದು ಸಹಜ.
ಸಾಮಾನ್ಯವಾಗಿ ಒಂದು ಪಕ್ಷದ ನಾಯಕರು ಮತ್ತೊಂದು ಪಕ್ಷದ ನಾಯಕರೊಂದಿಗೆ ಬೆರೆಯುವುದು ಅಪರೂಪವೇ. ಒಂದು ವೇಳೆ ರಾಜಕೀಯ ಮರೆತು ಬೆರೆತರೂ ಅದರ ಸುತ್ತ ನೂರಾರು ಕತೆಗಳು ಹುಟ್ಟಿಕೊಳ್ಳುತ್ತವೆ. ಸಾಮಾನ್ಯವಾಗಿ ಜನ ಕೂಡ ಒಂದು ಪಕ್ಷದ ನಾಯಕರು ಮತ್ತೊಂದು ಪಕ್ಷದ ನಾಯಕರೊಂದಿಗೆ ಬೆರೆತರೆ ಆಶ್ಚರ್ಯದ ಕಣ್ಣುಗಳಿಂದಲೇ ನೋಡುತ್ತಾರೆ. ಹೀಗಿರುವಾಗ ಸಿದ್ದರಾಮಯ್ಯ ಮತ್ತು ದೇವೇಗೌಡರು ಒಂದೇ ವೇದಿಕೆ ಹಂಚಿಕೊಳ್ಳುತ್ತಾರೆಂದರೆ ಇನ್ನೆಷ್ಟು ಕಾತರ ಇರಬಹುದು ಹೇಳಿ.

ಇಷ್ಟಕ್ಕೂ ಈ ಇಬ್ಬರು ನಾಯಕರನ್ನು ಅದು ಕೂಡ ಒಂದು ಕಾಲದ ಗುರುಶಿಷ್ಯರಾಗಿದ್ದು, ಈಗ ಸಾರ್ವಜನಿಕವಾಗಿ ರಾಜಕೀಯ ವಿಚಾರಕ್ಕೆ ಸಂಬಂಧಿಸಿದಂತೆ ಕಿತ್ತಾಡುವ ದಿಗ್ಗಜರನ್ನು ಒಂದೇ ವೇದಿಕೆಗೆ ತಂದಿದ್ದು ಮೈಸೂರು ವಿಶ್ವ ವಿದ್ಯಾನಿಲಯದ ಶತಮಾನೋತ್ಸವ ಸಂಭ್ರಮದ ಸಮಾರೋಪ ಕಾರ್ಯಕ್ರಮದ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದ ವೇದಿಕೆ.
ಕಾರ್ಯಕ್ರಮ ಆರಂಭವಾಗುತ್ತಿದ್ದಂತೆಯೇ ವೇದಿಕೆ ಮೇಲೇರಿ ಅತಿಥಿಗಳೆಲ್ಲರೂ ಆಸೀನರಾದರು. ಈ ಸಂದರ್ಭ ವೇದಿಕೆಗೆ ಬಂದ ಮಾಜಿ ಪ್ರಧಾನಿ ದೇವೇಗೌಡರು ಸ್ವತಃ ತಾವೇ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಮುಂದೆ ಕೈಚಾಚಿದರು.
ಆಗ ಸಿದ್ದರಾಮಯ್ಯ ಕೈ ಕುಲುಕಿದರೂ ಅವರ ಮುಖದಲ್ಲಿ ನಗು ಮಾತ್ರ ಕಾಣಲಿಲ್ಲ. ಸದಾ ನಗುವಿನಿಂದ ದೂರ ಇರುವ ದೇವೇಗೌಡರು ನಗುತ್ತಾ ಇದ್ದರೂ ಸಿದ್ದರಾಮಯ್ಯ ಅವರ ಮುಖದಲ್ಲಿ ಅದ್ಯಾಕೋ ನಗು ಮಾಯವಾಗಿತ್ತು. ಆದರೆ, ಇಬ್ಬರು ಗುರುಶಿಷ್ಯರು ಪರಸ್ಪರ ಎದುರಾಗಿದ್ದು ಮಾತ್ರ ಗಮನಸೆಳೆಯಿತು.












Click it and Unblock the Notifications