ಯಡಿಯೂರಪ್ಪ ರಾಜೀನಾಮೆ ಹೇಳಿಕೆ ಸ್ವಾಗತಿಸಿದ ಎಚ್. ವಿಶ್ವನಾಥ್
ಮೈಸೂರು, ಜೂನ್ 06; "ದೆಹಲಿ ಹೇಳಿದಂತೆ ಕೇಳೋದು ಮೊದಲಿಂದಲೂ ಇರುವ ಪರಿಪಾಠ. ಪರ್ಯಾಯ ನಾಯಕರನ್ನು ಮಾಡುತ್ತಾರೆ ಎಂದಿರುವುದು ಸ್ವಾಗತಾರ್ಹ" ಎಂದು ಎಚ್. ವಿಶ್ವನಾಥ್ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
Recommended Video

ಭಾನುವಾರ ಮೈಸೂರಿನಲ್ಲಿ ಮಾತನಾಡಿದ ಅವರು, "ನನಗೆ ಪರ್ಯಾಯ ನಾಯಕ ಇದ್ದಾರೆ ಎಂದು ಹೇಳಿರುವುದು ದೊಡ್ಡ ಮಾತು. ರಾಜ್ಯದಲ್ಲಿ ಜನ, ರಾಜಕೀಯ ನಾಯಕರು ಬಹಳ ವಿಶ್ವಾಸ ಇಟ್ಟುಕೊಂಡು ಬಂದಿದ್ದಾರೆ. ಯಡಿಯೂರಪ್ಪ ಈಗಿನ ಪರಿಸ್ಥಿತಿಯಲ್ಲಿ ರಾಜ್ಯದ ಹಿತಕ್ಕಾಗಿ ದೆಹಲಿ ನಾಯಕರ ಮಾತು ಕೇಳಿ ಕೆಳಗಿಳಿಯುತ್ತೇನೆ ಎನ್ನುವುದು ಸ್ವಾಗತ ಮಾಡುವೆ" ಎಂದರು.
"ಈ ಬೆಳವಣಿಗೆ ಬಹಳ ದಿನದ ಹಿಂದಿನಿಂದಲೂ ನಡೆಯುತ್ತಿತ್ತು. ಆರ್ಎಸ್ಎಸ್ ಕೂಡ ಅವರ ಮನವೊಲಿಸಿದೆ. ನಾಡಿನ ಹಿತದಿಂದ ಯಡಿಯೂರಪ್ಪ ರಾಜೀನಾಮೆ ಕೊಡುತ್ತೇನೆ ಎಂದಿರುವುದು ನಾಡಿನ ಜನ ಸ್ವಾಗತ ಮಾಡ್ತಾರೆ" ಎಂದು ಹೇಳಿದರು.

"ಯಡಿಯೂರಪ್ಪ ಯಾರೋ ಮಾತನಾಡಿದರು ಅಂತ ರಾಜೀನಾಮೆ ಕೊಡುತ್ತಿಲ್ಲ. ಅವರಿಗೆ ವಯಸ್ಸಿನ ಕಾರಣ, ಆರೋಗ್ಯದ ಸಮಸ್ಯೆ ಇದೆ. ಬಿಜೆಪಿಯಲ್ಲಿ ವಯಸ್ಸಿನ ಲಕ್ಷ್ಮಣ ರೇಖೆ ಇದೆ. ಯಡಿಯೂರಪ್ಪಗೆ ಒಂದು ವಿನಾಯಿತಿ ಕೊಟ್ಟಿದ್ದರು. ಯಡಿಯೂರಪ್ಪ ಬಹಳ ಕಷ್ಟಪಟ್ಟು ಪಕ್ಷ ಕಟ್ಟಿದ್ದರು. ಇದರ ಬದಲಿಗೆ ಸೈನಿಕ ದೆಹಲಿಗೆ ಹೋಗಿ ಬಂದರು ಅಂತ ಅವರು ರಾಜೀನಾಮೆ ಕೊಡುತ್ತಿಲ್ಲ" ಎಂದು ವಿಶ್ವನಾಥ್ ತಿಳಿಸಿದರು.
ಸಮಸ್ಯೆ ಬಗೆಹರಿಸಿದೆ; ಮೈಸೂರು ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತೆ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ವಿಶ್ವನಾಥ್, "ಸರ್ಕಾರ ಅತ್ಯಂತ ನಾಜೂಕಾಗಿ ಸಮಸ್ಯೆ ಬಗೆಹರಿಸಿದೆ. ಇಬ್ಬರು ಅಧಿಕಾರಿಗಳು ವರ್ಗಾವಣೆ ಆಗಿದ್ದಾರೆ. ಆದರೆ ಇಬ್ಬರೂ ಹೊರಗೆ ಹೋಗುವಂತೆ ಮಾಡಿದವರು ನಾವುಗಳು. ಜನಪ್ರತಿನಿಧಿಗಳು ಮಾಡಿದ ಗೊಂದಲಗಳಿಂದ ಇಬ್ಬರೂ ಅಧಿಕಾರಿಗಳು ಹೊರಗೆ ಹೋಗುವಂತಾಯಿತು" ಎಂದು ಪರೋಕ್ಷವಾಗಿ ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಕಿಡಿಕಾರಿದರು.











Click it and Unblock the Notifications