ಕ್ಷುಲ್ಲಕ ವಿಚಾರಕ್ಕೆ ರಾಜೀನಾಮೆ ಕೊಡಲ್ಲ, ಊಹಾಪೋಹಗಳಿಗೆ ತೆರೆ ಎಳೆದ ಎಚ್ ವಿಶ್ವನಾಥ್
Recommended Video

ಮೈಸೂರು, ಅಕ್ಟೋಬರ್. 24: "ಆಸ್ಪತ್ರೆಯಲ್ಲಿದ್ದಾಗ ನನ್ನನ್ನು ಬಂದು ನೋಡಿಲ್ಲ ಎಂದು ರಾಜೀನಾಮೆ ನೀಡುತ್ತಾರಾ"? ಇಂತಹ ಕ್ಷುಲ್ಲಕ ಕಾರಣಗಳಿಗೆಲ್ಲಾ ರಾಜೀನಾಮೆ ನೀಡುವಂತ ದಡ್ಡ ನಾನಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ತಿಳಿಸಿದರು.
ತಮ್ಮ ಮೇಲಿನ ಊಹಾಪೋಹಗಳಿಗೆ ಉತ್ತರಿಸಲು ಇಂದು ಸುದ್ದಿಗೋಷ್ಠಿ ಕರೆದು ಮಾತನಾಡಿದ ವಿಶ್ವನಾಥ್, ಕೆಲವು ಸ್ನೇಹಿತರು ಮಾಧ್ಯಮದ ಮೂಲಕ ಅಪಪ್ರಚಾರ ಮಾಡಿದ್ದಾರೆ. ನಾನು ಇಂತಹ ಊಹಾಪೋಹಗಳ ವಿರುದ್ಧ ಹೋರಾಟ ಮಾಡುವವನು.
ಕ್ಷುಲ್ಲಕ ವಿಚಾರಗಳಿಗೆ ರಾಜೀನಾಮೆ ಕೊಡುವ ವ್ಯಕ್ತಿತ್ವ ನನ್ನದಲ್ಲ. ಇಂತಹ ಪ್ರಚಾರ ಮಾಡುವ ಸ್ನೇಹಿತರಿಗೆ ಕೈ ಮುಗಿದು ಕೇಳುತ್ತೇನೆ, ಇದನ್ನು ನಿಲ್ಲಿಸಿ ಎಂದು ಮನವಿ ಮಾಡಿದರು.

ತಮಗೆ ಜೆಡಿಎಸ್ ನಲ್ಲಿ ಉಸಿರು ಕಟ್ಟುವ ವಾತಾವರಣವಿದೆ ಎನ್ನಲಾಗುತ್ತಿದೆಯೆಲ್ಲಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇದನ್ನೆಲ್ಲ ಹೇಳಿದವರು ಯಾರು? ಮಾಧ್ಯಮದವರೇ. ಪ್ರಚಾರ ಮಾಡಿ ಮತ್ತೆ ನಮ್ಮನ್ನೇ ಕೇಳುತ್ತೀರಿ. ಯಾರಿಗೂ ಹೀಗಾಗಿಲ್ಲ. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಜನರ ತೀರ್ಪಿನ ಮೇಲೆ ಇರುವುದು.
ಸಿದ್ದರಾಮಯ್ಯ, ಕುಮಾರಸ್ವಾಮಿ, ನಾವೆಲ್ಲ ಗೆದ್ದೇವೆಂದು ಹೇಳಲು ಯಾರು? ಇವೆಲ್ಲ ಮತದಾರರ ಮೇಲೆ ನಿಂತಿದೆ. ನಮ್ಮದು ಮತದಾರರ ಇಚ್ಛೆ ಎಂದರು.
ಜೆಡಿಎಸ್ ವರಿಷ್ಠರಾದ ದೇವೇಗೌಡರಿಗೆ ವಾಲ್ಮಿಕಿ ಪ್ರಶಸ್ತಿ ಲಭಿಸಿರುವುದು ಸಂತೋಷ. ವಾಲ್ಮಿಕಿ ಜನಾಂಗಕ್ಕೆ ಮೀಸಲಾತಿ ಕೊಡಿಸುವಲ್ಲಿ ದೇವೇಗೌಡರು ತುಂಬಾ ಶ್ರಮಿಸಿದ್ದಾರೆ. ಇದೇ ತಿಂಗಳು 29-30ಕ್ಕೆ ಶಿವಮೊಗ್ಗ ಉಪಚುನಾವಣಾ ಪ್ರಚಾರಕ್ಕೆ ಹೋಗುತ್ತೇನೆ ಎಂದು ವಿಶ್ವನಾಥ್ ಸ್ಪಷ್ಟಪಡಿಸಿದರು.












Click it and Unblock the Notifications