"ಎಲ್ಲವನ್ನೂ ಮೀರಿ ಬರುವ ಶಕ್ತಿ ಶಿವಕುಮಾರ್ ಗೆ ಇದೆ"
ಮೈಸೂರು, ಅಕ್ಟೋಬರ್ 5: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ಇಂದು ಬೆಳಿಗ್ಗೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಈ ಬಗ್ಗೆ ಮೈಸೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಪ್ರತಿಕ್ರಿಯಿಸಿದ್ದಾರೆ.
"ದೇಶದ ಆರ್ಥಿಕ ಅಪರಾಧಗಳ ಬಗ್ಗೆ ಇಲಾಖೆ ಕಾಲ ಕಾಲಕ್ಕೆ ಎಲ್ಲಾಪ್ರಕ್ರಿಯೆಗಳನ್ನು ನಡೆಸುತ್ತಿರುತ್ತದೆ. ಇದನ್ನು ಗೆದ್ದು ಬರುವ ಶಕ್ತಿ ಡಿ.ಕೆ.ಶಿವಕುಮಾರ್ ಅವರಿಗೆ ಇದೆ" ಎಂದಿದ್ದಾರೆ. "ಈ ದಾಳಿಯ ಬಗ್ಗೆ ನಾನು ಕಾಮೆಂಟ್ ಮಾಡುವುದಿಲ್ಲ. ಈ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಸಿದ್ದರಾಮಯ್ಯ ಈ ಸಿಬಿಐ ದಾಳಿ ರಾಜಕೀಯ ಪ್ರೇರಿತ ಹಾಗೂ ಆಡಳಿತ ಪಕ್ಷದ ನೈತಿಕ ದಿವಾಳಿತನಕ್ಕೆ ಸಾಕ್ಷಿ ಎಂದಿದ್ದಾರೆ. ವಿರೋಧ ಪಕ್ಷದ ನಾಯಕರು ಹೇಳಿದ ತಕ್ಷಣ ಅದು ವೇದ ವಾಕ್ಯ ಅಲ್ಲ" ಎಂದು ಹೇಳಿದ್ದಾರೆ.
ಡಿಕೆ ಶಿವಕುಮಾರ್ ನಿವಾಸದ ಮೇಲೆ ಸಿಬಿಐ ದಾಳಿ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ
ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಹಾಗೂ ದೇಶದ ಆರ್ಥಿಕ ಅಪರಾಧಗಳ ಮೇಲೆ ಕಣ್ಣಿಡಲು ಒಂದು ಇಲಾಖೆ ಇದೆ. ಅದು ಕಾಲ ಕಾಲಕ್ಕೆ ಎಲ್ಲವನ್ನೂ ನಡೆಸುತ್ತಿರುತ್ತದೆ. ಎಲ್ಲವನ್ನೂ ಮೀರಿ ಬರುವ ಶಕ್ತಿ ಡಿ.ಕೆ.ಶಿವಕುಮಾರ್ ಅವರಿಗೆ ಇದೆ. ಅವರು ಗೆದ್ದು ಬರುತ್ತಾರೆ. ನಾವೆಲ್ಲಾ ಒಟ್ಟಾಗಿ ಕೆಲಸ ಮಾಡಿದ್ದೇವೆ, ಅವರ ಶಕ್ತಿ ಏನು ಎಂಬುದು ನಮಗೆ ಗೊತ್ತು ಎಂದು ವಿಶ್ವನಾಥ್ ಹೇಳಿದ್ದಾರೆ.