ಮಾಜಿ ಸಿಎಂ ಸಿದ್ದರಾಮಯ್ಯಗೆ ಆಹ್ವಾನ ನೀಡಿದ ಎಚ್.ವಿಶ್ವನಾಥ್
ಮೈಸೂರು, ಡಿಸೆಂಬರ್ 4: ಕುರುಬ ಸಮುದಾಯದ ಎಸ್.ಟಿ. ಹೋರಾಟಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ನಾಯಕತ್ವ ವಹಿಸಲಿ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಅವರು ಆಹ್ವಾನ ನೀಡಿದ್ದಾರೆ.
ಶುಕ್ರವಾರ ಮೈಸೂರಿನಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಎಂಎಲ್ಸಿ ಎಚ್.ವಿಶ್ವನಾಥ್, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಕರೆಯುತ್ತಿರುವುದು ರಾಜಕೀಯ ನಾಯಕತ್ವಕ್ಕಲ್ಲ, ಸಮಾಜದ ನಾಯಕತ್ವಕ್ಕೆ ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ.
ಬಿ.ಸಿ ಪಾಟೀಲ್ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ
ಸಿದ್ದರಾಮಯ್ಯ ನಾಯಕತ್ವ ವಹಿಸಿದರೆ ಕುರುಬ ಸಮುದಾಯ ನಿಮ್ಮ ಹಿಂದೆ ಬರಲಿದೆ ಎಂದು ಹೇಳಿದ ಮಾಜಿ ಸಚಿವ ಎಚ್.ವಿಶ್ವನಾಥ್, ಕುರುಬ ಸಮಾಜದ ಅಭಿವೃದ್ಧಿಗಾಗಿ ನಿಮ್ಮನ್ನು ಕರೆಯುತ್ತಿದ್ದೇವೆ ಎಂದು ತಿಳಿಸಿದರು.
ಈ ಹಿಂದೆ ಇಡೀ ಕುರುಬ ಸಮುದಾಯ ನಿಮ್ಮ ರಾಜಕೀಯ ಏಳಿಗೆಗೆ ತನು-ಮನ-ಧನ ಅರ್ಪಿಸಿದೆ. ಕುರಿ ಮಾರಿ ದುಡ್ಡು ಕೊಟ್ಟಿದ್ದಾರೆ. ಬೇರೆ ಸಮುದಾಯದವರೂ ನಿಮಗೆ ಬೆಂಬಲ ನೀಡಿದ್ದಾರೆ. ನೀವು ಕುರುಬ ಸಮುದಾಯಕ್ಕೆ ವಾಪಸ್ ಏನು ಕೊಟ್ಟಿರಿ? ಎಂದು ಇದೇ ಸಂದರ್ಭದಲ್ಲಿ ಪ್ರಶ್ನಿಸಿದರು.
""ನಮ್ಮೆಲ್ಲರ ತ್ಯಾಗದಿಂದ ನೀವು ಮುಖ್ಯಮಂತ್ರಿಯಾದೀರಿ. ಆ ದೊಡ್ಡ ಮಟ್ಟಕ್ಕೆ ಬೆಳೆದಿರುವ ನೀವು ಕುರುಬ ಸಮುದಾಯದ ಎಸ್.ಟಿ ಹೋರಾಟದಲ್ಲಿ ಮುಂಚೂಣಿಯಲ್ಲಿರಬೇಕು. ಈ ಹೋರಾಟವನ್ನು ಆರ್ಎಸ್ಎಸ್ ಹೈಜಾಕ್ ಮಾಡುತ್ತಿದೆ ಎಂದಾಗಲಿ ಅಥವಾ ತಮ್ಮ ನಾಯಕತ್ವವನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಭಾವಿಸಬಾರದು'' ಎಂದರು.
""ಒಂದು ವೇಳೆ ನಿಮ್ಮ ನಾಯಕತ್ವವನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದಾದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ನನ್ನ ಹಿರಿತನವನ್ನು ಬದಿಗಿಟ್ಟು ನೀವು ಮುಖ್ಯಮಂತ್ರಿಯಾಗಲು ಸಾಧ್ಯವಾಗುತ್ತಿತ್ತಾ. ಆಗಲೇ ನಾನು ನಾಯಕತ್ವ ಬಿಟ್ಟುಕೊಟ್ಟಿದ್ದು, ಈಗಲೂ ಬಿಟ್ಟುಕೊಡುತ್ತೇವೆ. ನೀವು ಸೋತಿದ್ದಾಗ ನಾನು ಮಂತ್ರಿಯಾಗಿದ್ದೆ. ಆಗಲೂ ನೀವು ನಮ್ಮ ನಾಯಕ ಎಂದೇ ಕರೆಯುತ್ತಿದ್ದೆ'' ಎಂದು ಎಂಎಲ್ಸಿ ಎಚ್.ವಿಶ್ವನಾಥ್ ತಿಳಿಸಿದರು.