ರಾಜಕೀಯ ಭವಿಷ್ಯ ಕುರಿತು ಮೊದಲ ಬಾರಿಗೆ ಮಾತನಾಡಿದ ಜಿಟಿ ದೇವೇಗೌಡ
ಮೈಸೂರು, ಜುಲೈ 4: ಮುಂದಿನ ಎರಡು ತಿಂಗಳ ನಂತರ ನನ್ನ ರಾಜಕೀಯ ಭವಿಷ್ಯದ ಬಗ್ಗೆ ತೀರ್ಮಾನ ರಾಜಕೀಯ ನಡೆಯ ಬಗ್ಗೆ ತಿಳಿಸುವುದಾಗಿ ಶಾಸಕ ಜಿ.ಟಿ. ದೇವೇಗೌಡ ಸೋಮವಾರ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐದು ವರ್ಷ ನಾನು ಜೆಡಿಎಸ್ ಶಾಸಕನಾಗಿರಲು ಜನ ಮತ ಹಾಕಿದ್ದಾರೆ. ಯಾವುದೇ ಚುನಾವಣೆಯಲ್ಲಿ ಪಕ್ಷ ವಿಪ್ ಕೊಡಲಿ ಬಿಡಲಿ ನಾನು ಜೆಡಿಎಸ್ ಪರವಾಗಿ ಮತ ಹಾಕುತ್ತೇನೆ. ಏಕೆಂದರೆ ನನ್ನ ಆತ್ಮಸಾಕ್ಷಿಗೆ ದ್ರೋಹ ಬಗೆಯುವ ಕೆಲಸವನ್ನು ಯಾವತ್ತೂ ಮಾಡುವುದಿಲ್ಲ. ಆದರೆ ನಾನು ಕಳೆದ ಮೂರು ವರ್ಷಗಳಿಂದ ಪಕ್ಷದ ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸಿಲ್ಲ ಎಂದು ಹೇಳಿದರು.
ರಾಜಕೀಯ ನಡೆ ಬಗ್ಗೆ ಮಾತನಾಡಿ, ಎರಡು ತಿಂಗಳ ನಂತರ ಕ್ಷೇತ್ರದ ಜನರ ಸಭೆ ಕರೆದು, ಜನಾಭಿಪ್ರಾಯ ಪಡೆದುಕೊಂಡು ಅದರಂತೆ ನನ್ನ ಮುಂದಿನ ರಾಜಕೀಯ ತೀರ್ಮಾನ ತೆಗೆದುಕೊಳ್ಳುತ್ತೇನೆ. ಇದರಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ ಎಂದರು.

ಕ್ಷಮೆಯಾಚಿಸದಿದ್ದರೆ ರಾಜಣ್ಣ ವ್ಯಕ್ತಿತ್ವಕ್ಕೆ ಧಕ್ಕೆ
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಬಗ್ಗೆ ಮಧುಗಿರಿ ಮಾಜಿ ಶಾಸಕ ಕೆಎನ್ ರಾಜಣ್ಣ ಅವಹೇಳನಕಾರಿ ಹೇಳಿಕೆ ನೀಡಿರುವ ಬಗ್ಗೆ ಮಾತನಾಡಿ, ರಾಜಣ್ಣ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಅವರ ವ್ಯಕ್ತಿತ್ವಕ್ಕೆ ಧಕ್ಕೆ ಆಗಲಿದೆ. ಸಾವು ಯಾರನ್ನೂ ಹೇಳಿ ಕೇಳಿ ಬರುವುದಿಲ್ಲ. ನನ್ನ ಮೊಮ್ಮಗಳು ಗೌರಿ ಅತಿ ಸಣ್ಣ ವಯಸ್ಸಿಗೆ ನಿಧನಳಾದಳು. ರಾಜಣ್ಣನವರಿಂದ ನಾನು ಈ ರೀತಿಯ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ. ಕನ್ನಡಿಗರಿಗೆ ಎಚ್.ಡಿ. ದೇವಗೌಡರ ಬಗ್ಗೆ ಅಪಾರ ಪ್ರೀತಿ, ವಿಶ್ವಾಸ, ಗೌರವವಿದೆ. ರಾಜ್ಯದ ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಿಯಾಗಿ ಕಡಿಮೆ ಅವಧಿಯಲ್ಲಿ ಅವರು ಮಾಡಿರುವ ಸೇವೆ ಅಪಾರ. ರಾಜಣ್ಣ ಹೇಳಿಕೆಯಿಂದ ಕನ್ನಡಿಗರ ಮನಸ್ಸಿಗೆ ನೋವಾಗಿದೆ ಎಂದು ಹೇಳಿದರು.

ಅಭಿವೃದ್ಧಿಯ ಕ್ರೆಡಿಟ್ ಎಲ್ಲರಿಗೂ ಸಲ್ಲುತ್ತದೆ
ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆ ಕ್ರೆಡಿಟ್ ವಾರ್ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಒಬ್ಬರ ಕಾಲದಲ್ಲಿ ಕೆಲಸ ಆರಂಭವಾದರೆ, ಮತ್ತೊಬ್ಬರ ಕಾಲದಲ್ಲಿ ಆ ಕೆಲಸ ಮುಗಿಯುತ್ತದೆ. ಹೀಗಾಗಿ ಅಭಿವೃದ್ಧಿಯ ಕ್ರೆಡಿಟ್ ಎಲ್ಲರಿಗೂ ಸೇರುತ್ತದೆ. ನಾನೇ ಹುಣಸೂರಿನಲ್ಲಿ ನೂರಾರು ಕಾರ್ಯ ಪ್ರಾರಂಭ ಮಾಡಿದ್ದೆ, ಅದನ್ನ ಮಂಜುನಾಥ್ ಮುಂದುವರಿಸಿಕೊಂಡು ಬಂದ. ದಶಪಥ ರಸ್ತೆಯನ್ನು ಆಸ್ಕರ್ ಫರ್ನಾಂಡೀಸ್ ಕಾಲದಲ್ಲಿ ಜಾರಿಗೆ ತಂದ್ವಿ ಅಂತಾರೆ, ಅದನ್ನು ಬಿಜೆಪಿಯವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಆದರೆ ಎಲ್ಲದಕ್ಕಿಂತ ಮುಖ್ಯ ಅಭಿವೃದ್ದಿ ಆಗಬೇಕು ಎಂದು ತಿಳಿಸಿದರು.

ಸಿದ್ದರಾಮೋತ್ಸವಕ್ಕೆ ಆಹ್ವಾನ ಬಂದಿಲ್ಲ
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹುಟ್ಟುಹಬ್ಬಕ್ಕೆ ಸಂಬಂಧಿಸಿದಂತೆ ನಡೆಯುವ ಸಿದ್ದರಾಮೋತ್ಸವದ ಬಗ್ಗೆ ನನಗೆ ಗೊತ್ತಿಲ್ಲ. ನನಗೆ ಇಲ್ಲಿಯವರೆಗೆ ಯಾವುದೇ ಆಹ್ವಾನ ಬಂದಿಲ್ಲ. ಆದರೆ ಆ ಕಾರ್ಯಕ್ರಮಕ್ಕೆ ಆಹ್ವಾನ ಬರಲಿ, ಬಿಡಲಿ, ನಾನು ಮುಂಚಿತವಾಗಿಯೇ ಕರೆ ಮಾಡಿ ಸಿದ್ದರಾಮಯ್ಯಗೆ ಶುಭಾಶಯ ಕೋರುತ್ತೇನೆ ಎಂದು ತಿಳಿಸಿದರು.

ನರೇಗಾ ಯೋಜನೆಯಡಿ ಶ್ಮಸಾನ ನಿರ್ಮಿಸಲು ಸೂಚನೆ
ಮೈಸೂರು ತಾಲ್ಲೂಕಿನ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲ್ಲೂಕಿನ ಪ್ರತಿಯೊಂದು ಗ್ರಾಮ ಪಂಚಾಯಿತಿಗಳು ಮಹಾತ್ಮ ಗಾಂಧಿ ನರೇಗಾ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಿ ಪಂಚಾಯಿತಿ ವ್ಯಾಪ್ತಿಯಲ್ಲಿಗೊಳಪಡುವ ಗ್ರಾಮಗಳ ಅಭಿವೃದ್ಧಿ ಪೂರಕವಾಗುವಂತೆ ರೈತರು ಹಾಗೂ ಜನರಿಗೆ ಅನುಕೂಲವಾಗುವ ಕಾಮಗಾರಿಗಳನ್ನು ಕೈಗೊಳ್ಳುಬೇಕು. ಪ್ರತಿಯೊಂದು ಗ್ರಾಮದಲ್ಲಿರುವ ಸ್ಮಶಾನಗಳನ್ನು ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಬೇಕು. ಜಾಗದ ಸಮಸ್ಯೆ ಇರುವ ಗ್ರಾಮದಲ್ಲಿ ಅವಶ್ಯಕವಿರುವಷ್ಟು ಜಾಗ ಗುರುತಿಸಿ ಹೊಸದಾಗಿ ಸ್ಮಶಾನ ನಿರ್ಮಿಸಬೇಕು ಎಂದು ಹೇಳಿದರು.












Click it and Unblock the Notifications