ಜಿಎಸ್ಟಿ ಜಾರಿಯಾಗಿ 10 ದಿನ : ಗೊಂದಲವಿನ್ನೂ ಮುಗಿದಿಲ್ಲ!
ಮೈಸೂರು, ಜುಲೈ 10 : ಜಿಎಸ್ಟಿ ಜಾರಿಗೆ ಬಂದು ಇಂದಿಗೆ 10 ದಿನಗಳು ಕಳೆದಿದೆ. ಆದರೆ ಜನರಲ್ಲಿರುವ ಗೊಂದಲಕ್ಕೆ ಮಾತ್ರ ಇನ್ನೂ ಉತ್ತರ ಸಿಕ್ಕಿಲ್ಲ. ತೆರಿಗೆ ನೀತಿ ಜಾರಿಯ ಬಳಿಕ ವ್ಯಾಪಾರಿಗಳು ಮತ್ತು ಉದ್ಯಮಿಗಳಲ್ಲಿ ಉಂಟಾಗಿರುವ ಗೊಂದಲ ಮುಂದುವರಿದಿರುವುದರಿಂದ ನಗರಕ್ಕೆ ಸರಕು ತುಂಬಿಕೊಂಡು ಬರುತ್ತಿರುವ ಲಾರಿಗಳ ಸಂಖ್ಯೆ ಕಡಿಮೆಯಾಗಿದೆ.
ಪ್ರತಿದಿನ ನಗರಕ್ಕೆ ಸುಮಾರು 1000ಕ್ಕೂ ಹೆಚ್ಚು ಲಾರಿಗಳು ವಿವಿಧ ರಾಜ್ಯಗಳಿಂದ ಸರಕುಗಳನ್ನು ತುಂಬಿಕೊಂಡು ಬರುತ್ತಿದ್ದವು. ಆದರೆ, ಕಳೆದ ಒಂದು ವಾರದಿಂದ ಸುಮಾರು 200 ಲಾರಿಗಳು ಕಡಿಮೆಯಾಗಿದ್ದು, ಇದಕ್ಕೆ ಜಿಎಸ್ ಟಿ ಜಾರಿಯಲ್ಲಿ ವ್ಯಾಪಾರಿಗಳಲ್ಲಿ ಉಂಟಾಗಿರುವ ಗೊಂದಲವೇ ಕಾರಣ ಎಂದು ವಿಶ್ಲೇಷಿಸಲಾಗಿದೆ.
ಜಿಎಸ್ ಟಿ ಜಾರಿಯ ಬಳಿಕ ರಾಷ್ಟ್ರೀಯ ಹೆದ್ದಾರಿಗಳಲ್ಲಿದ್ದ ವಾಣಿಜ್ಯ ತೆರಿಗೆ ಕೇಂದ್ರಗಳನ್ನು ತೆರವುಗೊಳಿಸಲಾಗಿದೆ. ಇದರಿಂದ ಸರಕು ತುಂಬಿದ ಲಾರಿಗಳ ಸರಾಗ ಸಾಗಣೆಗೆ ಸಹಕಾರಿಯಾಗಿದೆ. ಆದರೆ, ಸಾರ್ವಜನಿಕರು ಮತ್ತು ಗ್ರಾಹಕರಲ್ಲಿ ಇನ್ನೂ ಗೊಂದಲ ನಿವಾರಣೆಯಾಗಿಲ್ಲ. ಮಾತ್ರವಲ್ಲ ವ್ಯಾಪಾರಸ್ಥರು ಹೊರ ಸರಕು ಖರೀದಿಗೆ ಔಷಧ ಮಳಿಗೆಗಳಲ್ಲಿ ಕೆಲವು ಔಷಧಿಗಳು ದೊರೆಯುತ್ತಿಲ್ಲ. ಸಗಟು ವ್ಯಾಪಾರಸ್ಥರು ಜಿಎಸ್ ಟಿ ಹಿನ್ನೆಲೆಯಲ್ಲಿ ಕೆಲವು ಔಷಧಿಗಳ ದಾಸ್ತಾನನ್ನು ಖಾಲಿ ಮಾಡಿದ ಹಿನ್ನೆಲೆಯಲ್ಲಿ ಔಷಧ ಪೂರೈಕೆಯಾಗುತ್ತಿಲ್ಲ.
ಕೆಲವು ಔಷಧಿಗಳ ಮೇಲಿನ ಬೆಲೆ ಇಳಿಕೆಯಿಂದಲೂ ಗೊಂದಲ ಉಂಟಾಗಿದೆ. ಇನ್ನು ಕೆಲವು ಎಲೆಕ್ಞ್ರಾನಿಕ್ ಉಪಕರಣಗಳು ಹಳೆಯ ದರದಲ್ಲೇ ಮಾರಾಟವಾಗುತ್ತಿದ್ದರೆ, ಕೆಲವಕ್ಕೆ ಜಿಎಸ್ ಟಿ ಹಿಂದೇಟು ಹಾಕುತ್ತಿದ್ದಾರೆ. ಇದ್ದ ಮಾಲುಗಳನ್ನೇ ಖಾಲಿ ಮಾಡಲು ಅವರು ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಇದರಿಂದ ನಗರಕ್ಕೆ ಬರುತ್ತಿರುವ ಲಾರಿಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳುತ್ತಾರೆ.

ಪೂರೈಕೆಯಿಲ್ಲ!
ಇತ್ತ ಮೊಬೈಲ್ ಹ್ಯಾಂಡ್ ಸೆಟ್ಗಳ ಬೆಲೆಯಲ್ಲಿ ಏರಿಳಿತವಾಗಿದೆ. ಕಾರಿನ ಬೆಲೆ ಇಳಿಕೆಯಾಗಿದ್ದರೂ, ಕೆಲವು ಕಾರಿನ ಬಿಡಿ ಭಾಗಗಳ ಮೇಲೆ ಜಿಎಸ್ ಟಿ ಪರಿಣಾಮ ಬೀರಿದ್ದು, ಬಿಡಿ ಭಾಗಗಳ ಮಾರಾಟ ಮಳಿಗೆಗಳಲ್ಲಿ ಕೆಲವು ಕಾರಿನ ಬಿಡಿ ಭಾಗಗಳು ಲಭ್ಯವಿಲ್ಲ. ಕಂಪನಿಗಳಿಂದ ಜೂನ್ 25ರ ನಂತರ ಯಾವುದೇ ದಾಸ್ತಾನು ಪೂರೈಕೆಯಾಗಿಲ್ಲ ಎನ್ನಲಾಗಿದೆ.

ಹೊಟೇಲ್ ತಿಂಡಿಗಳ ಬೆಲೆ ಗಗನದೆತ್ತರ
ಹೊಟೇಲ್ ಗಳಲ್ಲಿ ತಿಂಡಿ ಊಟ ಮಾಡುವವರಂತೂ ಬೆಲೆ ಹೆಚ್ಚಳದ ಬಿಸಿ ಅನುಭವಿಸಿದ್ದಾರೆ. ಜಿಎಸ್ ಟಿ ನೆಪದಲ್ಲಿ ಹೊಟೇಲ್ ಗಳು ತಮ್ಮ ತಿಂಡಿಯ ಬೆಲೆಯನ್ನು ಹೆಚ್ಚಿಸಿದ್ದಾರೆ ಶೇ.12 ಜಿಎಸ್ ಟಿ ಇದ್ದರೆ ಅವರು ಗ್ರಾಹಕರ ಮೇಲೆ ಶೇ 20 ಹೊರೆ ಹೊರಿಸಿದ್ದಾರೆ. 25 ರೂ.ಗೆ 2 ಇಡ್ಲಿ ದೊರೆಯುತ್ತಿದ್ದರೆ ಈಗ 30 ರೂ. ನಿಗದಿ ಮಾಡಿದ್ದಾರೆ. ಜಿಎಸ್ ಟಿ ನೆಪದಲ್ಲಿ ಹೆಚ್ಚಿನ ಲಾಭಕ್ಕೆ ಮುಂದಾಗಿದ್ದಾರೆ.

ಅಂಗಡಿಗೆ ಯಾರೂ ಬರುತ್ತಲೇ ಇಲ್ಲ:
ಜಿಎಸ್ ಟಿ ಮೈಸೂರಲ್ಲಿ ವ್ಯಾಪಾರ ಉದ್ಯೋಮದ ಮೇಲೆ ಭಾರಿ ಪೆಟ್ಟು ನೀಡಿದೆ. ಮಳಿಗೆಗಳು ಖಾಲಿ ಖಾಲಿಯಾಗಿದ್ದು, ಸಂತೇಪೇಟೆ, ಎಪಿಎಂಸಿ, ಮಾರ್ಕೆಟ್ ಗಳಲ್ಲಿ ಮುಚ್ಚಿದ ಬಾಗಿಲು ಕಾಣಿಸುತ್ತಿದೆ. ಮಾಲಿಕರು ಸರಿಯಾಗಿ ಅಂಗಡಿ ತೆರೆಯುತ್ತಿಲ್ಲ. ಜಿಎಸ್ ಟಿ ಬಿಲ್ ಬಗ್ಗೆಯೇ ಗೊಂದಲ ಮೂಡಿದ್ದು, ಬಿಲ್ಇಲ್ಲದೆ ವಸ್ತು ಮಾರಾಟ ಮಾಡಿದರೆ ದಂಡ ವಿಧಿಸುವ ಭೀತಿ ಎದುರಿಸುತ್ತಿದ್ದಾರೆ. ಗ್ರಾಹಕರು ವಸ್ತುಗಳನ್ನ ಕೊಂಡುಕೊಳ್ಳಲು ಬರುತ್ತಿಲ್ಲ. ಮೈಸೂರು ಉದ್ಯಮದ ಮೇಲೆ ಭಾರಿಹೊಡೆತ ಬಿದ್ದಿದ್ದು,ಹಣ್ಣು, ತರಕಾರಿ, ದಿನಸಿ ಪದಾರ್ಥಗಳ ಮೇಲೂ ಪರಿಣಾಮ ಬೀರಿದೆ. ರಾಜ್ಯವಷ್ಟೇ ಅಲ್ಲದೇ ಹೊರ ರಾಜ್ಯದಿಂದ ಬರುತ್ತಿದ್ದ ವಸ್ತುಗಳ ಆಮದಿಗೂ ಹೊಡೆತ ಬಿದ್ದಿದೆ. ಬೆಲೆಗಳ ಏರಿಕೆಯಿಂದ ಬೇಸತ್ತ ಅಂಗಡಿ ಮಾರಾಟಗಾರರು ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡಿದರೂ ಸಾಧ್ಯವಾಗುತ್ತಿಲ್ಲ.

ದಿನಬಳಕೆ ವಸ್ತುಗಳ ಬೆಲೆ ಏರಿಕೆ
ಸಕ್ಕರೆ, ಶ್ಯಾಂಪು, ಕಾಫಿಪುಡಿ ಹೀಗೆ ಎಲ್ಲಾ ಪದಾರ್ಥಗಳ ಬೆಲೆಗಳೂ ಹೆಚ್ಚಾದ ಕಾರಣ ವರ್ತಕರು ಕಂಗಾಲಾಗಿದ್ದು, ಗ್ರಾಹಕರು ಕೊಂಡುಕೊಳ್ಳಲು ಅಂಗಡಿಗೆ ಬರುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಪರಿಣಾಮ ಎಪಿಎಂಸಿ, ಸಂತೇಪೇಟೆ, ಮಾರ್ಕೆಟ್ ಎಲ್ಲವೂ ಖಾಲಿ ಖಾಲಿಯಾಗಿವೆ. ಎಲ್ಲದ್ದಕ್ಕೂ ಬಿಲ್ ಇರುವ ಸಂಬಂಧ ಮಾಲೀಕರು ಹಾಗು ಗ್ರಾಹಕರ ನಡುವೆ ವಾಗ್ಯುದ್ಧವೇ ನಡೆಯುತ್ತಿದೆ. ಬಹುತೇಕರು ಬಿಲ್ ಇಲ್ಲದೇ ವಸ್ತು ತೆಗೆದುಕೊಳ್ಳಲು ಹಿಂದೇಟು ಕೂಡ ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.











Click it and Unblock the Notifications