ಆ ಆರು ಮಂದಿಯನ್ನು ದೊಡ್ಡಮ್ಮ ತಾಯಿಯೂ ಕಾಪಾಡಲಿಲ್ಲ!
ಪಿರಿಯಾಪಟ್ಟಣ, ಅಕ್ಟೋಬರ್ 5: ಕಷ್ಟ ಬಂದಾಗ ದೇವರ ಗುಡಿಗೆ ತೆರಳಿ ಕಾಪಾಡು ಎಂದು ದೇವರಿಗೆ ಕೈ ಮುಗಿಯುತ್ತೇವೆ. ಆದರೆ ಮಳೆಯಿಂದ ತಪ್ಪಿಸಿಕೊಂಡು ದೊಡ್ಡಮ್ಮತಾಯಿ ಗುಡಿಯಲ್ಲಿ ಆಶ್ರಯ ಪಡೆಯಲು ತೆರಳಿದ ಆರು ಮಂದಿ ಸಿಡಿಲು ಬಡಿದು ಸಾವನ್ನಪ್ಪಿದ್ದು, ತಾಲೂಕಿನ ಕಸಬಾ ಹೋಬಳಿಗೆ ಸೇರಿದ ಹುಣಸವಾಡಿ ಗ್ರಾಮದಲ್ಲಿ ಸೂತಕದ ವಾತಾವರಣಕ್ಕೆ ಕಾರಣವಾಗಿದೆ.
ಹುಣಸವಾಡಿ ಗ್ರಾಮದ ತಿಮ್ಮೇಗೌಡ (70), ಪುಟ್ಟೇಗೌಡ (60), ಸುವರ್ಣಮ್ಮ (50), ಸುದೀಪ್ (17), ಸುಜಯ್(18) ಮತ್ತು ಉಮೇಶ್(23) ಮೃತಪಟ್ಟವರು. ಗಣೇಶ (18), ವಿಜಯ್ (16) ಮತ್ತು ಮಾದೇಶ್ (11) ತೀವ್ರವಾಗಿ ಗಾಯಗೊಂಡು ಮೈಸೂರಿನ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಮೈಸೂರಿನ ಪಿರಿಯಾಪಟ್ಟಣದಲ್ಲಿ 6 ಜನರ ಬಲಿ ಪಡೆದ ಭೀಕರ ಸಿಡಿಲು
ಇವರೆಲ್ಲ ತಮ್ಮ ಜಮೀನು ಬಳಿ ದನ ಮೇಯಿಸುತ್ತಿದ್ದರು. ಈ ವೇಳೆ ದಿಢೀರ್ ಮಳೆ ಸುರಿಯ ತೊಡಗಿದೆ. ಮಳೆಯಿಂದ ರಕ್ಷಣೆ ಪಡೆಯಲೆಂದು ಗ್ರಾಮದ ಹೊರವಲಯದಲ್ಲಿರುವ ದೊಡ್ಡಮ್ಮತಾಯಿ ದೇವಸ್ಥಾನಕ್ಕೆ ತೆರಳಿದ್ದಾರೆ.
ಮಳೆಯೊಂದಿಗೆ ಬಂದ ಸಿಡಿಲು ಬಡಿದ ಪರಿಣಾಮ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಮೂವರು ಗಂಭೀರ ಗಾಯಗೊಂಡಿದ್ದಾರೆ. ಸ್ಥಳದಲ್ಲಿ ಚೀರಾಟ ಕೇಳಿ ಗ್ರಾಮಸ್ಥರು ಧಾವಿಸಿ ಬಂದಿದ್ದು, ಕೂಡಲೇ ಎಲ್ಲರನ್ನೂ ಪಿರಿಯಾಪಟ್ಟಣದ ಆಸ್ಪತ್ರೆಗೆ ವಾಹನದಲ್ಲಿ ಸಾಗಿಸಲಾಗಿದೆ.
ಈ ವೇಳೆ ಪರೀಕ್ಷಿಸಿದ ವೈದ್ಯರು ಒಂಬತ್ತು ಜನರ ಪೈಕಿ ಆರು ಮಂದಿ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಗಂಭೀರ ಗಾಯಗೊಂಡಿದ್ದ ಮೂವರಿಗೆ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯುವಂತೆ ತಿಳಿಸಿದ್ದಾರೆ.
ಚಿತ್ರಗಳು : ಗುರುವಾರ ಮಧ್ಯಾಹ್ನದ ಮಳೆಗೆ ಮುಳುಗಿದ ಬೆಂಗಳೂರು
ವಿಷಯ ತಿಳಿದು ಶಾಸಕ ಕೆ.ವೆಂಕಟೇಶ್, ತಹಸೀಲ್ದಾರ್ ಜೆ.ಮಹೇಶ್, ಕಂದಾಯಾಧಿಕಾರಿ ಮಂಜುನಾಥ್, ಎಸ್ಸೈ ಚಿಕ್ಕಸ್ವಾಮಿ, ಸಿದ್ದಯ್ಯ ಮತ್ತಿತರರು ಪಟ್ಟಣದ ಶವಾಗಾರಕ್ಕೆ ಭೇಟಿ ನೀಡಿದ್ದಾರೆ. ಈ ಸಂಬಂಧ ಪಿರಿಯಾಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಜನರ ಆಕ್ರಂದನ: ಆರು ಮಂದಿ ಸಿಡಿಲು ಬಡಿದು ಸಾವನ್ನಪ್ಪಿದ ವಿಷಯ ತಿಳಿಯುತ್ತಿದ್ದಂತೆಯೇ ಆಸ್ಪತ್ರೆಗೆ ಧಾವಿಸಿದ ಮೃತರ ಸಂಬಂಧಿಕರು ಶವಾಗಾರದ ಬಳಿ ರೋದಿಸುತ್ತಿದ್ದ ದೃಶ್ಯ ಕರುಳು ಹಿಂಡುವಂತಿತ್ತು. ಮನೆಯಿಂದ ದನ ಹೊಡೆದುಕೊಂಡು ಹೋದವರು ಹೆಣವಾಗಿ ಹಿಂತಿರುಗಿದರಲ್ಲಾ, ದೇವಸ್ಥಾನದಲ್ಲಿ ಆ ದೊಡ್ಡಮ್ಮನೇ ಕಾಪಾಡಲಿಲ್ಲವಲ್ಲ ಎಂದು ರೋದಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.