ದೇವರು ಜಾತಿ ಮಾಡಿಲ್ಲ. ಸ್ವಾರ್ಥಿಗಳು ಮಾಡಿದ್ದು: ಸಿದ್ದರಾಮಯ್ಯ
ಮೈಸೂರು, ಫೆಬ್ರವರಿ 1: ದೇವರು ಜಾತಿ ವ್ಯವಸ್ಥೆ ಮಾಡಿಲ್ಲ.ಆದರೆ ಸಮಾಜದಲ್ಲಿ ಬದುಕಲು ಅವಕಾಶ ಸಿಕ್ಕ ಸ್ವಾರ್ಥಿಗಳು ಜಾತಿ ವ್ಯವಸ್ಥೆ ನಿರ್ಮಾಣ ಮಾಡಿ, ಜೀತ ವ್ಯವಸ್ಥೆ ಸಮಾಜವನ್ನು ಜೀವಂತವನ್ನಾಗಿಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ಮಡಿವಾಳ ಮಾಚಿದೇವರ ಜಯಂತ್ಯೋತ್ಸವ, ಬೃಹತ್ ಜಾಗೃತ ಸಮಾವೇಶದಲ್ಲಿ ಸಿದ್ದರಾಮಯ್ಯ ಮಾತನಾಡಿ, ಸಂತರು, ಶರಣರು, ದಾರ್ಶನೀಕರು ಸಮಾಜದಲ್ಲಿ ಜಾತಿ ವ್ಯವಸ್ಥೆ ವಿರುದ್ಧ ಎಷ್ಟೇ ಹೋರಾಟ ಮಾಡಿ ಜಾಗೃತಿ ಮೂಡಿಸಿದರು. ಕ್ಷಣಕಾಲ ಜಾತಿ ವ್ಯವಸ್ಥೆ ಕಡಿಮೆಯಾಗಿ ಮತ್ತೆ ಬೆಳೆಯತೊಡಗುತ್ತದೆ.ಸಮಾಜದಲ್ಲಿ ಅಸ್ಪೃಶ್ಯತೆ ಹಾಗೂ ಜಾತಿ ವ್ಯವಸ್ಥೆ ಆಳವಾಗಿ ಬೇರು ಬಿಟ್ಟಿದೆ ಎಂದರು.[ಸಂಗೊಳ್ಳಿ ಗ್ರಾಮದ ಅಭಿವೃದ್ದಿಗೆ 75ಲಕ್ಷ ಅನುದಾನ: ಸಿದ್ದು]

ಅಕ್ಷರ ಕಲಿಯುವ ಅವಕಾಶ ಸಿಕ್ಕರೆ ಆರ್ಥಿಕ ಹಾಗೂ ಸಮಾಜಿಕವಾಗಿ ಹಿಂದುಳಿಯುವುದಿಲ್ಲ. ಆದರೆ ಶಿಕ್ಷಣದಿಂದ ವಂಚಿತರಾದಾಗ ಶೋಷಣೆ ಹೆಚ್ಚುತ್ತದೆ. ಶೂದ್ರ ಜನಾಂಗ ಇಂದಿಗೂ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದಾರೆ ಎಂದರು.
ಮಡಿವಾಳ ಜನಾಂಗವನ್ನು ಎಸ್ ಸಿ ವರ್ಗಕ್ಕೆ ಸೇರಿಸಲು ಕ್ಯಾಬಿನೇಟ್ ನಲ್ಲಿ ಕೂಲಂಕಷವಾಗಿ ಚರ್ಚೆ ನಡೆಯಬೇಕು. ಅಲ್ಲಿನ ತೀರ್ಮಾನದಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು. ಪ್ರೊ.ಅನ್ನಪೂರ್ಣಮ್ಮನವರ ವರದಿಯನ್ನು ಪರಿಗಣಿಸಲಾಗುವುದು ಎಂದು ಭರವಸೆಯಿತ್ತರು.
ಮುಂದಿನ ವರ್ಷದಿಂದ ಮಡಿವಾಳ ಮಾಚಿದೇವರ ಜಯಂತ್ಯೋತ್ಸವನ್ನು ಸರ್ಕಾರದ ವತಿಯಿಂದ ಆಚರಣೆ ಮಾಡಲಾಗುವುದು. ಈಗಾಗಲೇ ಈ ಸಂಬಂಧ ರಾಜ್ಯ ಸರ್ಕಾರ ಆದೇಶ ಹೊರಬೀಳಲಿದೆ ಎಂದು ತಿಳಿಸಿದರು.












Click it and Unblock the Notifications