ಮೈಸೂರು ದಸರಾ, ಕಾರ್ನಾಡ್ಗೆ ಅಧಿಕೃತ ಆಹ್ವಾನ
ಮೈಸೂರು, ಆ. 20 : ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟಿಸಲು ಜ್ಞಾನಪೀಠ ಪ್ರಶಸ್ತಿ ವಿಜೇತ ಲೇಖಕ, ನಟ, ನಿರ್ದೇಶಕ ಗಿರೀಶ್ ಕಾರ್ನಾಡ್ ಅವರಿಗೆ ಕರ್ನಾಟಕ ಸರಕಾರ ಅಧಿಕೃತವಾಗಿ ಆಹ್ವಾನ ನೀಡಿದ್ದು, ಈ ಕುರಿತು ಉದ್ಭವವಾಗಿದ್ದ ವಿವಾದಕ್ಕೆ ಅಂತಿಮವಾಗಿ ತೆರೆ ಎಳೆಯಲಾಗಿದೆ.
ಮೈಸೂರು ದಸರಾ ಉತ್ಸವವನ್ನು ಯಾರು ಉದ್ಘಾಟಿಸಬೇಕು ಎಂಬ ಕುರಿತು ಸಾಕಷ್ಟು ಚರ್ಚೆ ನಡೆದಿತ್ತು. ನಾಟಕಕಾರ ಗಿರೀಶ್ ಕಾರ್ನಾಡ್ ಅವರ ಹೆಸರನ್ನು ಸಿದ್ದರಾಮಯ್ಯ ಪ್ರಸ್ತಾಪಿಸಿದ್ದರೆ, ಅವರ ಬದಲಿಗೆ ಮೈಸೂರಿನವರೇ ಆದ ಮತ್ತೊಬ್ಬ ಖ್ಯಾತ ಲೇಖಕ ಎಸ್.ಎಲ್. ಭೈರಪ್ಪ ಅವರನ್ನು ಆಹ್ವಾನಿಸಬೇಕು ಎಂದು ಹಲವರು ವಾದ ಮಂಡಿಸಿದ್ದರು.

ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಹಿರಂಗವಾಗಿ ಬೆಂಬಲಿಸಿದ್ದ ಲೇಖಕ ಗಿರೀಶ್ ಕಾರ್ನಾಡ್ ಅವರನ್ನು ಅಂತಿಮವಾಗಿ ಆಹ್ವಾನಿಸಲಾಗಿದೆ. ಮೈಸೂರು ಜಿಲ್ಲಾ ಸಚಿವರ ನಿಯೋಗ ಗಿರೀಶ್ ಕಾರ್ನಾಡ್ ಅವರ ನಿವಾಸಕ್ಕೆ ಭೇಟಿ ನೀಡಿ, ಮೈಸೂರು ಪೇಟ ತೊಡಿಸಿ ಅಧಿಕೃತವಾಗಿ ಆಹ್ವಾನಿಸಿದೆ. [ಈ ಬಾರಿ ಖಾಸಗಿ ದರ್ಬಾರ್ ಇಲ್ಲ]
ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಅವರಿಗೂ ಅಧಿಕೃತವಾಗಿ ಆಹ್ವಾನ ನೀಡಲಾಯಿತು. ಈ ನಿಯೋಗದಲ್ಲಿ ಸಹಕಾರ ಸಚಿವ ಮಹದೇವ ಪ್ರಸಾದ್, ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್, ತನ್ವೀರ್ ಸೇಠ್, ಜಿಟಿ ದೇವೇಗೌಡ, ಮೈಸೂರು ಡಿಸಿ ಶಿಖಾ, ಮೈಸೂರು ಮೇಯರ್ ಮುಂತಾದವರು ಹಾಜರಿದ್ದರು.
ಓದುಗರ ಆಯ್ಕೆ ಭೈರಪ್ಪ : ಮೈಸೂರು ದಸರಾ ಉದ್ಘಾಟಿಸಲು ಯಾರನ್ನು ಆಹ್ವಾನಿಸಬೇಕೆಂದು ಒನ್ಇಂಡಿಯಾ ಓದುಗರಿಗೆ ಪ್ರಶ್ನೆ ಕೇಳಿತ್ತು. ಇದರಲ್ಲಿ ಶೇ.57ರಷ್ಟು ಜನರು ಭೈರಪ್ಪನವರೇ ಉದ್ಘಾಟಿಸಬೇಕೆಂದು ಅಭಿಪ್ರಾಯ ತಿಳಿಸಿದ್ದರು. ಗಿರೀಶ್ ಕಾರ್ನಾಡ್ ಅವರಿಗೆ ಸಿಕ್ಕಿದ್ದು ಶೇ.13ರಷ್ಟು ಮತ ಮಾತ್ರ. ಶೇ.11ರಂದು ಓದುಗರು ವಾಟಾಳ್ ನಾಗರಾಜ್ ಅವರಿಗೆ ಮತ ಹಾಕಿದ್ದರು. ಜನರ ಅಭಿಮತ ಏನೇ ಇದ್ದರೂ ಕಿವಿಗೆ ಹಾಕಿಕೊಳ್ಳದ ಸರಕಾರ ಕಾರ್ನಾಡ್ ಅವರನ್ನೇ ಉದ್ಘಾಟಿಸಬೇಕೆಂದು ಕೋರಿದೆ.












Click it and Unblock the Notifications