ಕಬಿನಿಯಲ್ಲೂ ಕೆಅರ್ಎಸ್ ಮಾದರಿ ಬೃಂದಾವನ; 48 ಕೋಟಿ ವೆಚ್ಚ
ಮೈಸೂರು, ಫೆಬ್ರವರಿ 23: "ಮಂಡ್ಯದ ಕೆಆರ್ಎಸ್ ನಲ್ಲಿರುವ ಬೃಂದಾವನ ಉದ್ಯಾನದಂತೆ ಕಬಿನಿಯಲ್ಲೂ 48 ಕೋಟಿ ವೆಚ್ಚದಲ್ಲಿ ಉದ್ಯಾನವನ ನಿರ್ಮಿಸಲು ಬಜೆಟ್ನಲ್ಲಿ ಘೋಷಣೆ ಮಾಡಲಾಗುವುದು" ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಹೇಳಿದರು.
ಮಂಗಳವಾರ ಹೆಚ್. ಡಿ. ಕೋಟೆ ತಾಲೂಕಿನ ಮೈಸೂರು ಗಡಿಭಾಗದಲ್ಲಿರುವ ಕಂಚಮಳ್ಳಿಯ ಹತ್ತಿರ ಸ್ವಾಗತ ಕಮಾನನ್ನು ಉದ್ಘಾಟಿಸಿ ಮಾತನಾಡಿದ ಅವರು, "ಅನೇಕ ಜನರು ಹೆಚ್. ಡಿ. ಕೋಟೆ ಹೆಸರು ಕೇಳಿರುತ್ತಾರೆ. ಆದರೆ ಇಲ್ಲಿನ ಪ್ರವಾಸೋದ್ಯಮ ವೈಶಿಷ್ಟ್ಯತೆಗಳು ತಿಳಿದಿರುವುದಿಲ್ಲ. ಈ ನಿಟ್ಟಿನಲ್ಲಿ ತಾಲೂಕಿನಲ್ಲಿರುವ ಪ್ರಕೃತಿ ಸಂಪತ್ತನ್ನು ಪರಿಚಯಸಲು ಸ್ವಾಗತ ಕಮಾನು ನೆರವಾಗಲಿದೆ" ಎಂದರು.
"ಹೆಚ್. ಡಿ. ಕೋಟೆ ತಾಲೂಕಿನಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳು ನಡೆಯಲಿದ್ದು, ಒಂದು ಸೇತುವೆ ಹಾಗೂ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಅನುಮೋದನೆ ದೊರಕಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕೈಗೊಳ್ಳಲಾಗುವುದು" ಎಂದು ತಿಳಿಸಿದರು.

"ಮೈಸೂರು ಜಿಲ್ಲೆಯನ್ನು ಅಭಿವೃದ್ಧಿ ಮಾಡಲಾಗುವುದು. ಅಲ್ಲದೆ ಜಿಲ್ಲೆಯ ಸಮಗ್ರ ಪ್ರವಾಸೋದ್ಯಮ ಅಭಿವೃದ್ಧಿಗೂ ಸಹ ನಾನು ಬದ್ಧನಾಗಿದ್ದೇನೆ" ಎಂದು ಸಚಿವರು ಭರವಸೆ ನೀಡಿದರು.
ಮೈಸೂರು ಜಿಲ್ಲೆಯ ಹೆಚ್. ಡಿ. ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದಲ್ಲಿ ಕಬಿನಿ ಜಲಾಶಯವಿದೆ. ಕಾವೇರಿ ನದಿಯ ಉಪನದಿಯಾಗಿರುವ ಕಬಿನಿ ತಿ. ನರಸೀಪುರದಲ್ಲಿ ಕಾವೇರಿ ನದಿಯನ್ನು ಸೇರುತ್ತದೆ.
ಮಂಡ್ಯ ಜಿಲ್ಲೆಯ ಕೆಆರ್ಎಸ್ನಲ್ಲಿರುವ ಬೃಂದಾವನ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದು. ಪ್ರತಿದಿನ ನೂರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇದೇ ಮಾದರಿಯ ಬೃಂದಾವನವನ್ನು ಕಬಿನಿ ಡ್ಯಾಂ ಬಳಿಯೂ ನಿರ್ಮಿಸಲಾಗುತ್ತದೆ.












Click it and Unblock the Notifications