ಮೈಸೂರಿನಲ್ಲಿ ಯುವ ವಿಜ್ಞಾನಿ ಮನೋಜ್ ಕುಮಾರ್ ಅಂತ್ಯಕ್ರಿಯೆ
ಮೈಸೂರು, ಡಿಸೆಂಬರ್ 6: ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಪ್ರಯೋಗಾಲಯದಲ್ಲಿ ಸಿಲಿಂಡರ್ ಸ್ಫೋಟಗೊಂಡು ಯುವ ವಿಜ್ಞಾನಿ ಮೃತಪಟ್ಟಿರುವ ದಾರುಣ ಘಟನೆ ಬುಧವಾರ ನಡೆದಿದೆ.
ಮೃತಪಟ್ಟವರು ಏರೋಸ್ಪೇಸ್ ವಿಭಾಗದ ಸಂಶೋಧನಾ ವಿದ್ಯಾರ್ಥಿ ಮನೋಜ್ ಕುಮಾರ್(28) ಎಂದು ಗುರುತಿಸಲಾಗಿದೆ. ಹೈಡ್ರೋಜನ್ ಗ್ಯಾಸ್ ಸಿಲಿಂಡರ್ ಸ್ಫೋಟದಿಂದಾಗಿ ಮನೋಜ್ ಕುಮಾರ್ ಸಾವಿಗೀಡಾಗಿದ್ದಾರೆ. ಸ್ಫೋಟದಲ್ಲಿ ಕಾರ್ತಿಕ್ ಶೆಣೈ, ನರೇಶ್ ಕುಮಾರ್, ಅತುಲ್ಯಾ ಎಂಬ ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ಯುವ ವಿಜ್ಞಾನಿ ಮೈಸೂರು ಕಲ್ಯಾಣಗಿರಿ ಸಮೀಪದ ರಾಜ್ ಕುಮಾರ್ ರಸ್ತೆಯ ಜೆಎಸ್ ಎಸ್ ಬಡಾವಣೆ ನಿವಾಸಿಯಾಗಿದ್ದಾರೆ. ಮನೋಜ್ ಕುಮಾರ್, ಮೈಸೂರಿನ ಊಟಿ ರಸ್ತೆಯ ಜೆಎಸ್ ಎಸ್ ಕಾಲೇಜು ನಿವೃತ್ತ ಪ್ರಿನ್ಸಿಪಾಲ್ ಪ್ರೊ. ಕೆ. ಪ್ರಕಾಶ್ ಅವರ ಪುತ್ರ.

ಮೈಸೂರಿನ ಸಿದ್ಧಾರ್ಥನಗರದಲ್ಲಿರುವ ಜೆಎಸ್ ಎಸ್ ಪಬ್ಲಿಕ್ ಶಾಲೆಯಲ್ಲಿ 10ನೇ ತರಗತಿವರೆಗೆ ಮತ್ತು ಎಸ್ಜೆಸಿಇಯಲ್ಲಿ ಮ್ಯೆಕಾನಿಕಲ್ ಇಂಜಿನಿಯರಿಂಗ್ ನಲ್ಲಿ ಎಂಟೆಕ್ ಅಧ್ಯಯನ ಮಾಡಿದ್ದ ಮನೋಜ್ ಕುಮಾರ್ ಐಐಎಸ್ ಸಿಯಲ್ಲಿ ಸ್ಟಾರ್ಟ್ಅಪ್ ಪ್ರಾಜೆಕ್ಟ್ ಗೆ ಸಂಶೋಧನಾ ವಿಜ್ಞಾನಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಅವರಿಗೆ 2017ರ ನವೆಂಬರ್ ನಲ್ಲಿ ಅನುಷಾ ಎಂಬುವವರ ಜೊತೆ ಮದುವೆಯಾಗಿತ್ತು. ಅನೂಷ ಅವರು ಸಹ ಇಂಜಿನಿಯರ್ ಆಗಿದ್ದಾರೆ. ಮನೋಜ್ ಕುಮಾರ್ ಅವರ ಪಾರ್ಥಿವ ಶರೀರವನ್ನು ಬುಧವಾರ ರಾತ್ರಿ ಮೈಸೂರಿಗೆ ತರಲಾಗಿದ್ದು, ಗುರುವಾರ ಮಧ್ಯಾಹ್ನ 1.30ಕ್ಕೆ ಮೈಸೂರಿನ ಹೊರವಲಯದ ಲಲಿತಾದ್ರಿಪುರ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.












Click it and Unblock the Notifications