ಮಹಿಳೆಯರ ಉಚಿತ ಸಾರಿಗೆ ಪ್ರಯಾಣದ ಬಗ್ಗೆ ಸಿಎಂ ಮೈಸೂರಿನಲ್ಲಿ ಹೇಳಿದ್ದು ಹೀಗೆ
ಮೈಸೂರು, ಜೂನ್, 10: ನಾಳೆಯಿಂದ (ಜೂನ್ 11) ಮಹಿಳೆಯರ ಉಚಿತ ಸಾರಿಗೆ ಪ್ರಯಾಣ ಯೋಜನೆ ಜಾರಿ ಆಗುತ್ತದೆ. ಹಾಗೂ ರಾಜ್ಯದ ಎಲ್ಲ ಮಹಿಳೆಯರಿಗೆ ವೋಲ್ವೋ, ಎಸಿ ಬಸ್ ಬಿಟ್ಟು ಇತರೆ ಬಸ್ಗಳಲ್ಲಿ ಉಚಿತ ಪ್ರಯಾಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ತಿಳಿಸಿದರು.
ಭಾನುವಾರ ಮಧ್ಯಾಹ್ನ 1 ಗಂಟೆಯಿಂದ ಉಚಿತ ಬಸ್ ಯೋಜನೆಗೆ ಚಾಲನೆ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ವಿಧಾನಸೌಧದ ಬಳಿ ನಾನು, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಾರಿಗೆ ಸಚಿವರು ಸೇರಿ ಈ ಯೋಜನೆಯನ್ನು ಜಾರಿ ಮಾಡುತ್ತೇವೆ. ಅಲ್ಲದೆ ಜಿಲ್ಲಾ ಕೇಂದ್ರದಲ್ಲಿ ಏಕಕಾಲಕ್ಕೆ ಜಾರಿಯಾಗುತ್ತದೆ ಎಂದು ತಿಳಿಸಿದರು. ಇನ್ನು ರಾಜ್ಯದ ಜಿಎಸ್ಟಿ ಪಾಲಿಗೆ ಒತ್ತಾಯದ ವಿಚಾರವಾಗಿ ಮಾತನಾಡಿದ ಅವರು, ನ್ಯಾಯಯುತವಾಗಿ ಕೇಂದ್ರದಿಂದ ನಮಗೆ ಬೇಕಾದ ಹಣವನ್ನು ಒತ್ತಾಯ ಪೂರ್ವಕವಾಗಿ ಕೇಳುತ್ತೇವೆ ಎಂದರು.

ಹಾಗೆಯೆ ರಾಜ್ಯದಲ್ಲಿ ಮಳೆ ಕೊರತೆ ಆತಂಕ ವಿಚಾರವಾಗಿ ಸೋಮವಾರ ಕುಡಿಯುವ ನೀರಿನ ಸಂಬಂಧ ಅಧಿಕಾರಿಗಳ ಸಭೆ ಕರೆಯಲಾಗಿದೆ.
ಮಳೆ ಸಮಸ್ಯೆ ಇರುವ ಜಿಲ್ಲೆಯ ಜಿಲ್ಲಾಧಿಕಾರಿಗಳ ಜೊತೆ ಕೂಡ ವಿಡಿಯೋ ಕಾನ್ಫರೆನ್ಸ್ ಮಾಡಿ ಅಗತ್ಯ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಜುಲೈ 1 ಚಾಲನೆ ಆಗಲಿರುವ ಯೋಜನೆಗಳು
1. ಜುಲೈ 1 ರಿಂದ ಗುಲ್ಬರ್ಗದಲ್ಲಿ ಗೃಹಜ್ಯೋತಿ ಯೋಜನೆಗೆ ಚಾಲನೆ.
2. ಜುಲೈ 1ರಂದೇ 10 ಕೆ.ಜಿ. ಆಹಾರ ಧಾನ್ಯ ಕೊಡುವ ಯೋಜನೆಗೆ ಮೈಸೂರಿನಲ್ಲಿ ಚಾಲನೆ.
3. ಜುಲೈ 16ರಿಂದ ಬೆಳಗಾವಿಯಲ್ಲಿ ಗೃಹಲಕ್ಷ್ಮಿ ಯೋಜನೆ ಜಾರಿ.
2022-23ರಲ್ಲಿ ಪಾಸ್ ಆದ ಪದವಿ, ಹಾಗೂ ಡಿಪ್ಲೋಮಾ ವಿದ್ಯಾರ್ಥಿಗಳು 24 ತಿಂಗಳಲ್ಲಿ ಕೆಲಸ ಸಿಗದಿದ್ದರೆ ಹಣ ಸಿಗಲಿದೆ. ಒಂದು ವೇಳೆ ಮಧ್ಯೆ ಸರ್ಕಾರಿ ಅಥವಾ ಖಾಸಗಿ ಕೆಲಸ ಸಿಕ್ಕರೆ ಹಣ ಸಿಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಸಿ.ಮಹದೇವಪ್ಪ, ಪಶು ಸಂಗೋಪನೆ ಸಚಿವರಾದ ಕೆ.ವೆಂಕಟೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಆರೋಗ್ಯಾಧಿಕಾರಿಗಳಿಗೆ ಎಚ್ಚರಿಕೆ
ಇನ್ನು ಯಾವುದೇ ಆಸ್ಪತ್ರೆಗಳಲ್ಲೇ ಆಗಲಿ ರೋಗಿಗಳನ್ನು ಮಾನವೀಯ ದೃಷ್ಠಿಕೋನದಿಂದ ನೋಡುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆರೋಗ್ಯಾಧಿಕಾರಿಗಳಿಗೆ ಇತ್ತೀಚೆಗಷ್ಟೇ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದರು.
ಶುಕ್ರವಾರ ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಹಿರಿಯ ಅಧಿಕಾರಿಗಳು ಹಾಗೂ ಎಲ್ಲಾ ಜಿಲ್ಲಾ ಆರೋಗ್ಯಾಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ನಿರ್ಲಕ್ಷೆಯಿಂದ ರೋಗಿಗಳಿಗೆ ತೊಂದರೆ ಆದರೆ ಸಹಿಸುವುದಿಲ್ಲ. ಆರೋಗ್ಯ ಇಲಾಖೆ ಸಾರ್ವಜನಿಕ ವಲಯದಲ್ಲಿ ಅತ್ಯಂತ ಸೂಕ್ಷ್ಮತೆ ಹೊಂದಿರುವ ಇಲಾಖೆಯಾಗಿದೆ. ಇಲ್ಲಿ ತುರ್ತಾಗಿ ರೋಗಿಗಳಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸಬೇಕು. ಕೆಲವು ತಪ್ಪುಗಳಿಂದ ರೋಗಿಗಳಿಗೆ ಸಮಸ್ಯೆಗಳಾಗುವುದನ್ನು ನಾವು ನೋಡುತ್ತಿರುತ್ತೇವೆ. ಆದರೆ, ನಿರ್ಲಕ್ಷ್ಯದಿಂದ ರೋಗಿಗಳಿಗೆ ತೊಂದರೆ ಆಗಬಾರದು ಎಂದು ಗೂಂಡುರಾವ್ ಸೂಚನೆ ನೀಡಿದ್ದರು.
ಉದಾಸೀನ, ನಿರ್ಲಕ್ಷೆಗಳಿಂದ ಆಸ್ಪತ್ರೆಗಳಲ್ಲಿ ಸಾವು, ನೋವುಗಳು ಸಂಭವಿಸಿದರೆ ನಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ತಪ್ಪುಗಳನ್ನು ಸರಿಪಡಿಸೊಣ. ಆದರೆ ನಿರ್ಲಕ್ಷ್ಯ ತೋರಬಾರದು. ಇದು ಅಕ್ಷಮ್ಯ ಅಪರಾಧ ಆಗುತ್ತದೆ. ಈ ರೀತಿಯ ಪ್ರಕರಣಗಳು ಕಂಡುಬಂದರೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.
ಕ್ರಮ ಕೈಗೊಂಡ ಬಳಿಕ ಅಧಿಕಾರಿಗಳು ಯಾವುದೇ ರಾಜಕೀಯ ಒತ್ತಡ ಹಾಕಿದರೆ, ನಾನು ಮಣಿಯುವವನಲ್ಲ. ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರು ಸಾರ್ವಜನಿಕರಿಗೆ ಪಬ್ಲಿಕ್ ರಿಲೇಷನ್ ಆಫೀಸರ್ ರೀತಿಯಲ್ಲೂ ಕೆಲಸ ಮಾಡಬೇಕು. ಹಾಗೆಯೇ ರೋಗಿಗಳಿಗೆ ಆತ್ಮಸ್ಥರ್ಯ ತುಂಬಬೇಕು. ನೀವೇ ನಿರ್ಲಕ್ಷ್ಯ, ಉದಾಸೀನ ಮಾಡಿದರೆ ರೋಗಿಗಳಿಗೆ ನೆಮ್ಮದಿಯೇ ಇಲ್ಲದಂತೆ ಆಗುತ್ತದೆ ಎಂದು ಎಚ್ಚರಿಸಿದ್ದರು.
ಹಾಗೆಯೇ ರಾಜ್ಯಾದ್ಯಂತ ಬೇರೆ ಬೇರೆ ಪ್ರಾದೇಶಿಕ ವಿಭಾಗಗಳಲ್ಲಿ ಪ್ರವಾಸ ಮಾಡುವುದಾಗಿ ಸಭೆಯಲ್ಲಿ ಅಧಿಕಾರಿಗಳಿಗೆ ತಿಳಿಸಿದರು. ಈ ವೇಳೆ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಸಾರ್ವಜನಿಕರ ಅಭಿಪ್ರಾಯಗಳನ್ನು ಕೂಡ ಸಂಗ್ರಹಿಸುತ್ತೇನೆ. ಆಸ್ಪತ್ರೆಗಳಲ್ಲಿ ಅಧಿಕಾರಿಗಳು ಸಾರ್ವಜನಿಕರಿಂದ ಒಳ್ಳೆಯ ಹೆಸರು ಪಡೆಯುವಂತೆ ಕೆಲಸ ಮಾಡಬೇಕು. ಯಾರು ಒಳ್ಳೆಯ ಕೆಲಸ ಮಾಡುತ್ತಾರೆಯೋ ಅಂತಹವರ ಪರ ನಾನಿರುತ್ತೇನೆ. ಅಲ್ಲದೆ ಸರ್ಕಾರದಿಂದಲೂ ಕೂಡ ಸಂಪೂರ್ಣ ಸಹಕಾರ ಕೊಡಿಸುವ ಭರವಸೆಯನ್ನು ವ್ಯಕ್ತಪಡಿಸಿದ್ದರು.












Click it and Unblock the Notifications