ಜುಬಿಲಿಯಂಟ್ ಕಾರ್ಖಾನೆ ಪ್ರಕರಣ ಮುಚ್ಚಿಹಾಕುತ್ತಿರುವುದೇಕೆ; ಧೃವನಾರಾಯಣ್ ಪ್ರಶ್ನೆ
ಮೈಸೂರು, ಮೇ 09: "ಜುಬಿಲಿಯೆಂಟ್ ಕಾರ್ಖಾನೆಯ ವಿಚಾರದಲ್ಲಿ ದೆಹಲಿಯ ಬಿಜೆಪಿ ನಾಯಕರ ಪ್ರಭಾವ ಇದೆ. ತನಿಖೆಗೆ ಪೂರ್ಣ ಸಹಕಾರ ದೊರಕಿಲ್ಲವೆಂದು ಹರ್ಷಗುಪ್ತ ಅವರು ಹೇಳಿದ್ದಾರೆ. ಈ ಕಾರ್ಖಾನೆಯ ವಿಚಾರ ತುಂಬಾ ನಿಗೂಢವಾಗಿದೆ. ಈ ಕಾರ್ಖಾನೆಯ ಮಾಲೀಕರು ದೆಹಲಿಯವರು. ದೆಹಲಿ ಮೂಲದ ಬಿಜೆಪಿ ನಾಯಕರು ಪ್ರಭಾವ ಬೀರಿ ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ" ಎಂದು ಆರೋಪಿಸಿದ್ದಾರೆ ಮಾಜಿ ಸಂಸದ ಧೃವನಾರಾಯಣ್.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಲಾಕ್ ಡೌನ್ ನಿಂದಾಗಿ ದೇಶಾದ್ಯಂತ ವಲಸೆ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಲಸೆ ಕಾರ್ಮಿಕರ ರಕ್ತ, ಬೆವರಿನ ಜೊತೆ ಕೇಂದ್ರ, ರಾಜ್ಯ ಸರ್ಕಾರಗಳು ಚೆಲ್ಲಾಟವಾಡುತ್ತಿವೆ. ವಿದೇಶದಲ್ಲಿ ನೆಲೆಸಿರುವವರನ್ನು ವಾಪಸ್ ಕರೆಸಿಕೊಳ್ಳುವ ವಿಚಾರದಲ್ಲಿ ತೋರಿದ ಉತ್ಸಾಹವನ್ನು ವಲಸೆ ಕಾರ್ಮಿಕರ ವಿಚಾರದಲ್ಲಿ ತೋರಿಲ್ಲ. ಸಿದ್ದರಾಮಯ್ಯನವರು, ಡಿ.ಕೆ. ಶಿವಕುಮಾರ್ ಅವರು ಯಾವಾಗ ಕೆಎಸ್ ಆರ್ ಟಿಸಿಗೆ ಹೋಗಿ ಎಂಡಿಗೆ ಬಸ್ ದರವನ್ನು ನಾವು ಕೊಡ್ತೇವೆ ಅಂದರೋ ಆಗ ಬಸ್ಸಿನಲ್ಲಿ ಮೂರು ದಿನ ಉಚಿತವಾಗಿ ಕಳುಹಿಸುವ ವ್ಯವಸ್ಥೆಯನ್ನು ಸರ್ಕಾರ ಮಾಡಿತು. ಸರ್ಕಾರ ಯಾರ ಪರವಾಗಿದೆ ಎನ್ನುವುದನ್ನು ಯೋಚನೆ ಮಾಡಬೇಕು" ಎಂದು ಆಕ್ರೋಶ ವ್ಯಕ್ತಪಡಿಸಿದರು.

"ಲಾಕ್ ಡೌನ್ ಅವಧಿಯಲ್ಲಿ ಸಾಕಷ್ಟು ತೊಂದರೆಗೊಳಗಾದವರು ವಲಸೆ ಕಾರ್ಮಿಕರು. ಸರ್ಕಾರ ತಳೆದ ದ್ವಂದ್ವ ನಿಲುವಿನಿಂದಲೇ ಬಡವ, ಬಲ್ಲಿದ ಎನ್ನುವುದು ಗೊತ್ತಾಗಲಿದೆ. ವಲಸೆ ಕಾರ್ಮಿಕರ ವಿಚಾರದಲ್ಲಿ ದ್ವಂದ್ವ ನೀತಿ, ನಿರ್ಲಕ್ಷ್ಯ ವಹಿಸಲಾಗುತ್ತಿದೆ" ಎಂದು ವಲಸೆ ಕಾರ್ಮಿಕರ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರಗಳ ಕಾರ್ಯವೈಖರಿಯನ್ನು ವಿರೋಧಿಸಿದರು.
ಕೊರೊನಾ ವೈರಸ್ ಸೋಂಕಿನ ವಿಚಾರಕ್ಕೆ ಪ್ರತಿಕ್ರಿಯಿಸಿ, "ಜುಬಿಲಿಯೆಂಟ್ ಕಾರ್ಖಾನೆಯಿಂದಾಗಿ ಇಡೀ ಮೈಸೂರು ಜಿಲ್ಲೆಗೆ, ನಂಜನಗೂಡಿಗೆ ಕಳಂಕ ಬಂದಿದೆ. ಜುಬಿಲಿಯೆಂಟ್ ಕಾರ್ಖಾನೆಯ ವಿಚಾರದಲ್ಲಿ ಒಬ್ಬೊಬ್ಬ ಸಚಿವರು ಒಂದೊಂದು ರೀತಿಯ ಹೇಳಿಕೆ ನೀಡಿದ್ದಾರೆ. ವಿಶೇಷ ತನಿಖಾಧಿಕಾರಿಯಾಗಿದ್ದ ಹರ್ಷಗುಪ್ತ ಕೂಡ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ಇದರ ನಡುವೆ ನಂಜನಗೂಡು ಶಾಸಕ ಹರ್ಷವರ್ಧನ್ ಅವರು ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆದಿಲ್ಲ ಎಂದು ಹೇಳಿದ್ದಾರೆ. ಸ್ವತಃ ಬಿಜೆಪಿ ಶಾಸಕರೇ ರಾಜ್ಯ ಸರ್ಕಾರದ ಬಗ್ಗೆ ಅನುಮಾನಗಳಿಗೆ ಎಡೆ ಮಾಡಿಕೊಡುವಂತೆ ಹೇಳಿಕೆ ನೀಡಿದ್ದಾರೆ. ಹಾಗಾಗಿ ವಿಶೇಷ ತನಿಖಾಧಿಕಾರಿ ಹರ್ಷಗುಪ್ತ ಸಲ್ಲಿಸಿರುವ ತನಿಖಾ ವರದಿಯನ್ನು ಕೂಡಲೇ ಬಹಿರಂಗ ಪಡಿಸಬೇಕು, ತಪ್ಪಿತಸ್ಥರ ಮೇಲೆ ಉಗ್ರ ಕ್ರಮ ಕೈಗೊಳ್ಳಬೇಕು" ಎಂದು ಒತ್ತಾಯಿಸಿದರು.












Click it and Unblock the Notifications