ರೈತ ವಿರೋಧಿ ಸಿದ್ದು ಸೋತಿದ್ದು , ಕಾಂಗ್ರೆಸ್ ಗೆ ತಕ್ಕ ಶಾಸ್ತಿ: ಶಾಂತಕುಮಾರ್
ಮೈಸೂರು, ಮೇ 17 : ರೈತ ವಿರೋಧಿ ವರ್ತನೆ ತೋರಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ರೈತರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ್ದಾರೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.
ಮೈಸೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಬಿನಿ, ಕಾವೇರಿ ಅಚ್ಚುಕಟ್ಟು ಭಾಗಗಳ ರೈತರಿಗೆ ಬೆಳೆ ಬೆಳೆಯಲು ನೀರು ಬಿಡದೆ ತಮಿಳು ನಾಡಿಗೆ ಹರಿಸಿ ರೈತ ದ್ರೋಹಿ ಕಾರ್ಯ ನಿರ್ವಹಿಸಿದ ಹಾಗೂ ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ನಿಗದಿಪಡಿಸದೆ ರೈತರನ್ನು ಕಡೆಗಣಿಸಿದ ಹಿನ್ನೆಲೆ ಯಲ್ಲಿ ಸಿದ್ದರಾಮಯ್ಯ ಹಾಗೂ ಎಚ್.ಸಿ.ಮಹದೇವಪ್ಪ ಅವರ ವಿರುದ್ಧ ರೈತರು ಮತ ಚಲಾಯಿಸಿ ಸೋಲಿಸಿದ್ದಾರೆ. ಇದು ರೈತ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಅಧಿಕಾರ ಹಿಡಿಯಲು ಹವಣಿಸುತ್ತಿರುವ ಬಿಜೆಪಿ ಮತ್ತು ಜಾ.ದಳ ಪಕ್ಷಗಳು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವ ಅಂಶಗಳ ನಿರ್ಲಕ್ಷ್ಯ ವಹಿಸದೆ ರೈತರಿಗೆ ವಂಚನೆ ಮಾಡದಂತೆ ನಡೆದುಕೊಳ್ಳಬೇಕು. ರೈತರ ಸಂಪೂರ್ಣ ಸಾಲಮನ್ನಾ ಮಾಡಿ, ಕೃಷಿ ಉತ್ಪನ್ನಗಳಿಗೆ ಖರ್ಚಿನ ಮೇಲೆ ಒಂದೂವರೆ ಪಟ್ಟು ಲಾಭದಾಯಕ ಬೆಲೆ ನಿಗದಿ ಮಾಡಿ ಖರೀದಿ ಮಾಡು ವಂತಹ ವ್ಯವಸ್ಥೆಯಾಗಬೇಕು. 60 ವರ್ಷ ತುಂಬಿದವರಿಗೆ 5 ಸಾವಿರ ರೂ.ಪಿಂಚಣಿ ಯೋಜನೆ ಹಾಗೂ ಇನ್ನಿತರೆ ಯೋಜನೆಗಳನ್ನು ಜಾರಿಗೆ ತರುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಜ್ವಲಂತವಾಗಿರುವ ಮಹಾದಾಯಿ ಹಾಗೂ ಕಾವೇರಿ ನದಿ ವಿವಾದಗಳನ್ನು ಬಗೆಹರಿಸಲು ನೂತನವಾಗಿ ಬರಲಿರುವ ಸರ್ಕಾರ ವಿಶೇಷ ಗಮನಹರಿಸಬೇಕು. ಕಾವೇರಿ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಮೇಕೆದಾಟು ಯೋಜನೆ ಜಾರಿಗೊಳಿಸಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ನಿಲುವಿನ ಬಗ್ಗೆ ಬ್ಯಾಟಿಂಗ್ :
ಜನಾದೇಶಕ್ಕೆ ವಿರೋಧವಾಗಿ ಜೆಡಿಎಸ್ ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯಲು ಹವಣಿಸುತ್ತಿರುವ ಕಾಂಗ್ರೆಸ್ ಪಕ್ಷದ ಸಿದ್ಧಾಂತವು ಸಂವಿಧಾನ ವಿರೋಧಿ ಎಂದರು. ಕಬಿನಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವ ಮೂಲಕ ಈ ಭಾಗದ ರೈತರನ್ನು ಭಿಕ್ಷುಕರನ್ನಾಗಿ ಮಾಡಿದ್ದರು. ಮನವಿ ಸಲ್ಲಿಸಲು ಮನೆ ಬಾಗಿಲಿಗೆ ಹೋದ ರೈತರನ್ನು ಪೊಲೀಸ್ ಮೂಲಕ ಹತ್ತಿಕ್ಕುತ್ತಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಉಸ್ತುವಾರಿ ಸಚಿವ ಮಹದೇವಪ್ಪ ಅವರಿಗೆ ಚುನಾವಣೆಯಲ್ಲಿ ಸೋಲಿಸುವ ಮೂಲಕ ಮತದಾರರು ತಕ್ಕ ಪಾಠ ಕಲಿಸಿದರು.
ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದ್ದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಸಂಪೂರ್ಣವಾಗಿ ಜನತೆ ತಿರಸ್ಕರಿಸಿದ್ದಾರೆ. ಅಲ್ಲದೆ ಸಚಿವ ಸಂಪುಟದ 14 ಜನ ಸಚಿವರನ್ನು ಸೋಲಿಸಿದರೂ ಸಹ ಅಧಿಕಾರದ ಹಪಾಹಪಿಯಿಂದಾಗಿ ಜೆಡಿಎಸ್ ನೊಂದಿಗೆ ಅಪವಿತ್ರ ಮೈತ್ರಿಗೆ ಮುಂದಾಗಿ ಅಧಿಕಾರ ಹಿಡಿಯಲೇಬೇಕೆಂದು ನಡೆಸಿರುವ ಕಾಂಗ್ರೆಸ್ ನ ಸಂಚು ಪ್ರಜಾಪ್ರಭುತ್ವದ ವಿರೋಧಿ ಎಂದರು.












Click it and Unblock the Notifications