ಅರಣ್ಯ ನಾಶ:ತಂಬಾಕು ಬೆಳೆಗಾರರಿಗೆ ಸಸಿ ನೀಡಲು ಮುಂದಾದ ಅರಣ್ಯ ಇಲಾಖೆ
ಮೈಸೂರು, ಏಪ್ರಿಲ್ 11:ತಂಬಾಕು ಬೆಳೆಯುವ ರೈತರು ಅದನ್ನು ಹದಗೊಳಿಸಲು ಸೌದೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿರುವುದರಿಂದ ವರ್ಷದಿಂದ ವರ್ಷಕ್ಕೆ ಮರಗಳು ನಾಶವಾಗುತ್ತಿದ್ದು, ಇದನ್ನು ತಡೆಯುವ ಸಲುವಾಗಿ ತಂಬಾಕು ಬೆಳೆಗಾರರಿಗೆ ಅರಣ್ಯ ಇಲಾಖೆ ಸಸಿಗಳನ್ನು ವಿತರಿಸಲು ಮುಂದಾಗಿದೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಕೆ.ಆರ್.ನಗರ ಮತ್ತು ಹುಣಸೂರು ವ್ಯಾಪ್ತಿಯಲ್ಲಿ ಹೆಚ್ಚಿನ ರೈತರು ತಂಬಾಕು ಬೆಳೆಯುತ್ತಾ ತಮ್ಮ ಬದುಕನ್ನು ಕಂಡುಕೊಂಡಿದ್ದಾರೆ. ಈ ಬೆಳೆಯ ಬೆಲೆಯೂ ಕೂಡ ಏರು ಪೇರಾಗುವುದರಿಂದ ಜತೆಗೆ ವರ್ಷದಿಂದ ವರ್ಷಕ್ಕೆ ಖರ್ಚು ವೆಚ್ಚಗಳು ಹೆಚ್ಚಾಗುತ್ತಿರುವುದರಿಂದ ತಂಬಾಕು ಬೆಳೆಗಾರರ ಆರ್ಥಿಕ ಪರಿಸ್ಥಿತಿ ಸುಧಾರಿಸಿದಂತೆ ಕಂಡು ಬರುತ್ತಿಲ್ಲ.
ಹಾಗೆ ನೋಡಿದರೆ ತಂಬಾಕು ಬೆಳೆದು ಕೈಸುಟ್ಟುಕೊಂಡು ಅದಕ್ಕೆ ಗುಡ್ ಬೈ ಹೇಳಿದ ಬೆಳೆಗಾರರು ಇದ್ದಾರೆ. ಇನ್ನೊಂದೆಡೆ ತಂಬಾಕು ಬೆಳೆ ಬೆಳೆಯಲು ಸಾಲ ಮಾಡಿ ಅದನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ರೈತರು ಕೂಡ ಇಲ್ಲದಿಲ್ಲ.
ಇದೆಲ್ಲದರ ನಡುವೆ ಮುಂದಿನ ದಿನಗಳಲ್ಲಿ ತಂಬಾಕು ಕೃಷಿಯನ್ನು ನಿಷೇಧಿಸಬೇಕೆಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ಇದನ್ನರಿತ ಕೆಲವು ರೈತರು ಪರ್ಯಾಯ ಬೆಳೆಯತ್ತ ಮುಖ ಮಾಡಿರುವುದನ್ನು ನಾವು ಕಾಣಬಹುದಾಗಿದೆ.
ಬೇರೆ ಬೆಳೆಗಳಿಗೆ ಹೋಲಿಸಿದರೆ ತಂಬಾಕು ಬೆಳೆಯುವುದು ಕಷ್ಟದ ಕೆಲಸವೂ ಹೌದು. ಕೂಲಿ ಕಾರ್ಮಿಕರು ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತದೆ. ಎಲ್ಲಕ್ಕಿಂತ ಹೆಚ್ಚು ತೊಂದರೆ ಅನುಭವಿಸಬೇಕಾಗಿರುವುದು ಕೊನೆಗೆ ತಂಬಾಕು ಹದ ಮಾಡುವಾಗ. ಈ ವೇಳೆ ಹೆಚ್ಚಿನ ಪ್ರಮಾಣದಲ್ಲಿ ಸೌದೆ ಬೇಕಾಗುತ್ತದೆ. ಮುಂದೆ ಓದಿ..

ತಂಬಾಕು ಬೆಳೆಗಾರರಿಗೆ ಸಸಿ ವಿತರಣೆ
ತಂಬಾಕು ಹದ ಮಾಡುವ ಉದ್ದೇಶಕ್ಕಾಗಿ ಬಹಳಷ್ಟು ಮರಗಳನ್ನು ಕಡಿಯಲಾಗುತ್ತಿದೆ. ಇದು ಮುಂದುವರೆದರೆ ಅರಣ್ಯ ನಾಶ ತಪ್ಪಿದಲ್ಲ. ಬಹಳಷ್ಟು ಬೆಳೆಗಾರರು ತಾವು ಮರಗಳನ್ನು ಬೆಳೆಸದ ಕಾರಣದಿಂದಾಗಿ ದುಪ್ಪಟ್ಟು ಹಣ ನೀಡಿ ಸೌದೆಯನ್ನು ತರುವಂತಾಗಿದೆ. ರೈತರು ತಮ್ಮ ಜಮೀನಿನಲ್ಲಿ ಗಿಡಗಳನ್ನು ನೆಟ್ಟು ಮರವಾಗಿ ಬೆಳೆಸಿದರೆ ಈ ಸಮಸ್ಯೆಗೆ ಪರಿಹಾರ ಕಂಡು ಸಾಧ್ಯವಾಗುತ್ತಿತ್ತು. ಆದರೆ ಹಿಂದಿನಿಂದಲೂ ಮರಬೆಳೆಸುವ ಕೆಲಸವಾಗದ ಕಾರಣದಿಂದಾಗಿ ಸೌದೆಗೆ ಹೆಚ್ಚಿನ ಬೇಡಿಕೆಯುಂಟಾಗಿದೆಯಲ್ಲದೆ, ಇರುವ ಮರಗಳಿಗೆ ಕೊಡಲಿಯೇಟು ಬೀಳುತ್ತಿದೆ. ಅರಣ್ಯನಾಶವಾಗುತ್ತಿರುವುದನ್ನು ಮನಗಂಡ ಅರಣ್ಯ ಇಲಾಖೆ ಇದೀಗ ತಂಬಾಕು ಬೆಳೆಗಾರರಿಗೆ ಸಸಿ ನೀಡಿ ಅದನ್ನು ಬೆಳೆಸುವಂತೆ ಪ್ರೇರೇಪಣೆ ನೀಡಲಾಗುತ್ತಿದೆ.

ಸಸಿಗಳನ್ನು ಪಡೆದು ಬೆಳೆಸಿ ಎಂದು ಮನವಿ
ಹುಣಸೂರು ತಾಲೂಕಿನ ತಂಬಾಕು ಬೆಳೆಗಾರರಿಗೆ 2019-2020 ನೇ ಸಾಲಿಗೆ ತಂಬಾಕು ಮಂಡಳಿವತಿಯಿಂದ ನೋಂದಾಯಿತ ತಂಬಾಕು ಬೆಳೆಗಾರರಿಗೆ ಒಂದು ಲಕ್ಷ ಸಸಿಗಳನ್ನು ವಿತರಿಸಲು ಯೋಜನೆ ರೂಪಿಸಲಾಗಿದೆ. ಮೈಸೂರು ವಿಭಾಗದ ತಂಬಾಕು ಮಂಡಳಿಯ ಪ್ರಾದೇಶಿಕ ವ್ಯವಸ್ಥಾಪಕ ಎಸ್.ಎಸ್. ಪಾಟಿಲ್ ಅವರು, ಅರಣ್ಯ ಇಲಾಖೆಯ ಸಸಿ ಸಂರಕ್ಷಣೆ ಪ್ರದೇಶಕ್ಕೆ ಭೆಟಿ ನೀಡಿದ್ದು ಈ ಬಗ್ಗೆ ಅರಣ್ಯಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿರುವ ಅವರು ಅರಣ್ಯ ಇಲಾಖೆ ನೀಡುವ ಸಸಿಗಳನ್ನು ಪಡೆದುಕೊಂಡು ಬೆಳೆಸುವಂತೆ ಬೆಳೆಗಾರರಿಗೆ ಮನವಿ ಮಾಡಿದ್ದಾರೆ.

ಸಾಮಾಜಿಕ ಜವಾಬ್ದಾರಿಯನ್ನು ತೋರಿಸಿ
ತಮ್ಮ ಜಮೀನಿನಲ್ಲಿ ಗಿಡಮರಗಳನ್ನು ಪೋಷಿಸಬೆಕು. ಆಗ ಮಾತ್ರ ತಂಬಾಕು ಬೆಳೆಗಾರರು ತಮ್ಮ ಅಗತ್ಯ ಬಳಕೆಯ ಸೌದೆಯನ್ನು ಪಡೆಯಲು ಸಾಧ್ಯವಿದ್ದು, ಪ್ರತಿಯೊಬ್ಬ ತಂಬಾಕು ಬೆಳೆಗಾರನು ಮರಗಳನ್ನು ಬೆಳಸಿ ಸಾಮಾಜಿಕ ಜವಾಬ್ದಾರಿಯನ್ನು ತೋರಿಸಬೇಕೆಂದು ಮನವಿ ಮಾಡಿದ್ದಾರೆ.

ಅರಣ್ಯ ಇಲಾಖೆಯಿಂದ ಸಂಪೂರ್ಣ ಸಹಕಾರ
ಈ ಯೋಜನೆಗೆ ಅರಣ್ಯ ಇಲಾಖೆ ಸಂಪೂರ್ಣ ಸಹಕಾರ ನೀಡಲಿದ್ದು, ಅರಣ್ಯ ಪ್ರೋತ್ಸಾಹ ಯೋಜನೆಯಡಿಯಲ್ಲಿ ಸಸಿಗಳನ್ನು ನಿಡಲು ಮುಂದಾಗಿದೆ. ಇದರ ಜತೆಗೆ ಕೇವಲ ಎರಡು ವರ್ಷಗಳಲ್ಲಿ ಬೆಳೆಯುವ ಸಸಿಗಳನ್ನು ನೆರೆಯ ರಾಜ್ಯಗಳಿಂದ ಒಂದು ಲಕ್ಷ ಸಸಿಗಳನ್ನು ತಂದು ಬೆಳೆಗಾರರಿಗೆ ವಿತರಿಸಲಾಗುತ್ತಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಅರಣ್ಯ ಇಲಾಖೆಯ ಈ ಕ್ರಮ ಶ್ಲಾಘನೀಯವಾಗಿದ್ದು, ತಂಬಾಕು ಬೆಳೆಗಾರರು ಇದರತ್ತ ಆಸಕ್ತಿ ವಹಿಸಿ ಗಿಡಗಳನ್ನು ನೆಟ್ಟು ಪೋಷಿಸುವ ಅಗತ್ಯವಿದೆ.












Click it and Unblock the Notifications