ಚಿತ್ರಗಳು; ಚಳಿ, ಮಂಜು, ಇದು ನಿಸರ್ಗ ಬರೆಯುವ ಮಂಜಿನ ಕಾವ್ಯ
ಮೈಸೂರು, ಜನವರಿ 21; ಕಳೆದ ವರ್ಷದ ಕೊನೆಯವರೆಗೂ ಅಕಾಲಿಕ ಮಳೆಯಿಂದಾಗಿ ರೈತಾಪಿ ಜನರಿಗೆ ಒಂದಷ್ಟು ಕಷ್ಟ ನಷ್ಟ ಎದುರಾಗಿತ್ತು. ಈಗ ಇಡೀ ಪರಿಸರ ಹಸಿರಿನಿಂದ ಕಂಗೊಳಿಸುತ್ತಿದೆ. ಕೆರೆಕಟ್ಟೆಗಳು ಭರ್ತಿಯಾಗಿ ನಳನಳಿಸುತ್ತಿವೆ. ಇದೆಲ್ಲದರ ನಡುವೆ ಮುಂಜಾನೆಯ ಮಂಜು ನಗರಕ್ಕಿಂತ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸುಂದರ ದೃಶ್ಯ ಕಾವ್ಯವನ್ನು ಬರೆಯುತ್ತಿದೆ.
ಬೆಟ್ಟಗುಡ್ಡ, ಹೊಲಗದ್ದೆಗಳಲ್ಲಿ ಹರಡುವ ಮಂಜಿನ ನೋಟ ಪ್ರಾಂಜಲ ಮನಸ್ಸಿನ ನಿಸರ್ಗ ಪ್ರೇಮಿಗಳಿಗೆ ಒಂದಷ್ಟು ಖುಷಿ, ಸಂತಸವನ್ನು ತಂದು ಕೊಡುತ್ತಿದೆ. ಸಾಮಾನ್ಯವಾಗಿ ಈ ವೇಳೆಗೆ ಮಳೆಯಿಲ್ಲದೆ ಕುರುಚಲು ಕಾಡುಗಳೆಲ್ಲವೂ ಒಣಗಿರುತ್ತಿದ್ದವು. ಆದರೆ ಈ ಬಾರಿ ಇನ್ನೂ ಕೂಡ ಪರಿಸರ ಹಸಿರಾಗಿರುವುದು ಸಂತಸ ತರುತ್ತಿದೆ.
ಅದರ ಜತೆಗೆ ಇಡೀ ನಿಸರ್ಗವನ್ನು ಮುಸುಕು ಹಾಕಿ ನಲಿಯುವ ಮಂಜಿನ ನೋಟ ರೋಮಾಂಚನ, ವರ್ಣಿಸಲಸದಳ. ಬಹುಶಃ ಮಂಜಿನ ಸುಂದರ ನೋಟ ಎಲ್ಲರಿಗೂ ಲಭ್ಯವಾಗುವುದಿಲ್ಲ. ಕಾರಣ ಮುಂಜಾನೆಯ ಚಳಿಗೆ ಬೆಚ್ಚಗೆ ಮಲಗುವವರೇ ಹೆಚ್ಚು.
ಇವರ ನಡುವೆ ಬೆಳಕು ಹರಿಯುತ್ತಿದ್ದಂತೆಯೇ ಹಾಲು, ಪೇಪರ್ ಹಾಕಲು ಹೊರಡುವವರು, ವಾಯು ವಿಹಾರಕ್ಕೆ ತೆರಳುವವರು, ಉಳುಮೆಗೆಂದು ಹೊಲದತ್ತ ಮುಖ ಮಾಡುವವರಿಗೆ ಮಂಜಿನ ಆಟ, ನೋಟ ನಿತ್ಯದ ದಿನಚರಿಯಾಗುತ್ತದೆ. ಈ ಸಮಯದಲ್ಲಿ ಮಂಜು ಮುಸುಕಿಕೊಳ್ಳುವುದು ಸಾಮಾನ್ಯ. ಕೆಲವೊಮ್ಮೆ ಬೆಳಗ್ಗೆ ಎಂಟು ಗಂಟೆಯಾದರೂ ರವಿಗೆ ತೆರೆ ಎಳೆದು ತಮ್ಮ ವೈಭವ ತೋರುವ ಮಂಜು ನಾಟ್ಯವಾಡುತ್ತಲೇ ಮಾಯವಾಗಿಬಿಡುತ್ತದೆ.

ಚಾಮುಂಡಿಬೆಟ್ಟದಲ್ಲಿ ಮಂಜಿನ ನೋಟ
ಮೈಸೂರು ನಗರವಾಸಿಗಳು ಮಂಜಿನ ಲಾಸ್ಯ ನೋಡಬೇಕೆಂದರೆ ಚುಮುಚುಮು ಬೆಳಕಲ್ಲಿ ಚಾಮುಂಡಿಬೆಟ್ಟಕ್ಕೆ ಹೆಜ್ಜೆ ಹಾಕಬೇಕು. ಬೆಟ್ಟದಿಂದ ನಿಂತು ಹಾಗೆ ಸುಮ್ಮನೆ ಕಣ್ಣಾಡಿಸಬೇಕು ಅಲ್ಲಿಂದ ಕಾಣಸಿಗುವ ಸುಂದರ ರಮಣೀಯ ದೃಶ್ಯಗಳು ನಮ್ಮನ್ನು ಕುಣಿದು ಕುಪ್ಪಳಿಸುವಂತೆ ಮಾಡಿ ಬಿಡುತ್ತದೆ.
ಹಾಗೆ ಸುಮ್ಮನೆ ಹಳ್ಳಿಗಳತ್ತ ಮುಖ ಮಾಡಿ ನೋಡಿ ಮಬ್ಬುಗತ್ತಲಲ್ಲೇ ಮಂಜಿಗೆ ಗೋಲಿ ಹೊಡೆದು ಶೀತ ಗಾಳಿಯನ್ನು ಲೆಕ್ಕಿಸದೆ ತಮ್ಮ ಹೊಲದಲ್ಲಿ ದುಡಿಮೆಗೆ ತೊಡಗಿಸಿಕೊಳ್ಳುವ ರೈತಾಪಿ ವರ್ಗ. ಅದರಾಚೆಗೆ ತಮ್ಮ ದೈನಂದಿನ ಕೆಲಸ ಕಾರ್ಯಗಳಿಗಾಗಿ ಪಟ್ಟಣದತ್ತ ಹೊರಡುವ ಮಂದಿ. ಇದೆಲ್ಲದರ ನಡುವೆ ಚಳಿಗೆ ಹೆದರಿ ಬೆಚ್ಚಗೆ ಇನ್ನೊಂದಷ್ಟು ಹೊತ್ತು ಮಲಗಿ ಬಿಡೋಣ ಎನ್ನುವ ಸೋಮಾರಿ ಜನ.

ಹಿಡಿಶಾಪ ಹಾಕುವ ಜನ
ಈಗೀಗ ಜನ ಶೀತಗಾಳಿ, ದಟ್ಟ ಮಂಜಿಗೆ ಹಿಡಿಶಾಪ ಹಾಕಲಾರಂಭಿಸಿದ್ದಾರೆ. ಮೊದಲೇ ಜನರನ್ನು ಹಿಂಡಿ ಹಿಪ್ಪೆ ಮಾಡಿರುವ ಕೊರೊನಾದ ನಡುವೆ ವಾತಾವರಣದ ಬದಲಾವಣೆಗೆ ಶೀತ, ಕೆಮ್ಮು, ನೆಗಡಿಯಿಂದ ಮಕ್ಕಳು, ಹಿರಿಯರು ಹೀಗೆ ಎಲ್ಲರೂ ಬಳಲುತ್ತಿದ್ದಾರೆ. ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಅದರಲ್ಲೂ ನದಿ ಜಲಾಶಯವನ್ನು ಹೊಂದಿರುವ ಪ್ರದೇಶಗಳಂತು ತಣ್ಣಗಿವೆ.
ಅದರಲ್ಲೂ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ ಸೇರಿದಂತೆ ದಟ್ಟ ಕಾಡು ಮತ್ತು ನೀರಿನಿಂದ ಸುತ್ತುವರಿದಿರುವ ಹೆಚ್. ಡಿ. ಕೋಟೆಯಲ್ಲಿ ಮಂಜಿನ ಆಟ ಮತ್ತು ಕಾಟ ತುಸು ಜಾಸ್ತಿ ಎಂದರೆ ತಪ್ಪಾಗಲಾರದು.

ಆರೋಗ್ಯದತ್ತ ಕಾಳಜಿ ಇರಲಿ
ಇಲ್ಲಿನವರು ಹೇಳುವಂತೆ ಸಾಮಾನ್ಯವಾಗಿ ಪ್ರತಿ ವರ್ಷವೂ ಡಿಸೆಂಬರ್ ತಿಂಗಳಲ್ಲಿ ದಟ್ಟ ಮಂಜು ಕಾಣಿಸಿಕೊಳ್ಳುತ್ತಿತ್ತು. ಆದರೆ ಈ ಬಾರಿ ಮಂಜು ವಾತಾವರಣ ತಡವಾಗಿ ಆವರಿಸಿಕೊಳ್ಳುತ್ತಿದೆಯಂತೆ. ತಜ್ಞರ ಪ್ರಕಾರ ಈಗಿನ ವಾತಾವರಣ ಹಿರಿಯ ನಾಗರಿಕರು ಸೇರಿದಂತೆ ಮಕ್ಕಳ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದ್ದು, ಅಸ್ತಮಾ, ದಮ್ಮು, ಕಮ್ಮು, ಪಾರ್ಶ್ವವಾಯು ಪೀಡಿತರು ತಮ್ಮ ಆರೋಗ್ಯದ ಮೇಲೆ ಹೆಚ್ಚಿನ ಕಾಳಜಿ ವಹಿಸಿ ಜೋಪಾನವಾಗಿರುವುದು ಅಗತ್ಯವಂತೆ.

ವಾಹನ ಸವಾರರೇ ಎಚ್ಚರ
ಮುಂಜಾನೆಯ ಮಂಜು ಅಪರೂಪಕ್ಕೆ ನೋಡುವವರಿಗೆ ಶೃಂಗಾರವಾದರೂ ಅದು ಅಪಾಯಕಾರಿ. ಹೀಗಾಗಿ ಜನ ತಮ್ಮ ಆರೋಗ್ಯದತ್ತ ಕಾಳಜಿ ವಹಿಸುವುದರೊಂದಿಗೆ ದೇಹವನ್ನು ಬೆಚ್ಚಗಿಟ್ಟುಕೊಳ್ಳಬೇಕು. ಇದೆಲ್ಲದರ ನಡುವೆ ಮುಂಜಾನೆ ಮಂಜು ದಟ್ಟವಾಗಿ ಆವರಿಸಿಕೊಳ್ಳುವುದರಿಂದ ವಾಹನ ಸವಾರರು ಭಯದಲ್ಲಿಯೇ ವಾಹನ ಚಲಾಯಿಸುವಂತಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತ ನಿಶ್ಚಿತ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ದಟ್ಟವಾದ ಮಂಜು ಆವರಿಸಿದ ವೇಳೆ ಬಹಳ ಜಾಗರೂಕರಾಗಿರುವುದು ಅಗತ್ಯವಾಗಿದೆ.












Click it and Unblock the Notifications