ಜಿ.ಟಿ.ದೇವೇಗೌಡ ಮಗನ ಮೇಲೆ ಎಫ್ ಐಆರ್, ಸಿದ್ದು ಷಡ್ಯಂತ್ರ ಎಂದ ಜಿಟಿಡಿ
ಮೈಸೂರು, ಡಿಸೆಂಬರ್ 19: "ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ವಿರುದ್ಧ ಎಸಿಬಿಯನ್ನು ಬಳಸಿಕೊಳ್ಳುತ್ತಿದ್ದಾರೆ. ಅವರ ವಿರುದ್ಧ ಮುಂಬರುವ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂಬ ಕಾರಣಕ್ಕೆ ಇಂಥ ಷಡ್ಯಂತ್ರ ಹೂಡಿದ್ದಾರೆ" ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಗಂಭೀರ ಆರೋಪ ಮಾಡಿದ್ದಾರೆ.
ಕರ್ನಾಟಕ ಗೃಹಮಂಡಳಿಗೆ ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷರಾಗಿದ್ದ ಸಮಯದಲ್ಲಿ ನಡೆದಿದ್ದ ಭೂಸ್ವಾಧೀನ ಹಗರಣವನ್ನು ಎಸಿಬಿ ಪೊಲೀಸರಿಗೆ ವರ್ಗಾವಣೆ ಮಾಡಿರುವ ಹಿನ್ನೆಲೆಯಲ್ಲಿ ಅವರು ಈ ಆರೋಪ ಮಾಡಿದ್ದಾರೆ. ಕಳೆದ ನವೆಂಬರ್ 7ರಂದು ಭೂಸ್ವಾಧೀನ ಪ್ರಕರಣ ಎಸಿಬಿ ಪೊಲೀಸರಿಗೆ ವರ್ಗಾವಣೆಯಾಗಿದ್ದು, ಶಾಸಕ ಜಿ.ಟಿ.ದೇವೇಗೌಡ ಮಗನ ವಿರುದ್ಧವೂ ಎಫ್ ಐಆರ್ ದಾಖಲಾಗಿದೆ.

ಜಿ.ಟಿ.ದೇವೇಗೌಡ ಮಗ ಹರೀಶ್ ಗೌಡ 44ನೇ ಆರೋಪಿ ಆಗಿದ್ದು, ಒಟ್ಟು 46 ಮಂದಿಯ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ಮೈಸೂರಿನಲ್ಲಿ ಗೃಹ ಮಂಡಳಿಯಿಂದ ಭೂ ಸ್ವಾಧೀನವಾಗುವ ಮುನ್ನ ಅಂದರೆ 2008-09ರಲ್ಲಿ ಎಕರೆಗೆ ಕೇವಲ 8ರಿಂದ 10 ಲಕ್ಷ ರುಪಾಯಿ ನೀಡಿದ ಮಧ್ಯವರ್ತಿಗಳು ರೈತರಿಂದ ಜಮೀನು ಖರೀದಿಸಿ ಒಡಂಬಡಿಕೆ ಮಾಡಿಕೊಂಡಿದ್ದರು.
ಭೂ ಸ್ವಾಧೀನವಾದ ನಂತರ ಇದೇ ಒಂದು ಎಕರೆ ಭೂಮಿಯನ್ನು ಗೃಹಮಂಡಳಿಗೆ 36.50 ಲಕ್ಷಕ್ಕೆ ನೀಡಿದ್ದರು. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಮೈಸೂರು ತಾಲೂಕಿನ ಹಲವು ಗ್ರಾಮಗಳಲ್ಲಿ ಅವ್ಯವಹಾರವಾಗಿದೆ ಎಂಬ ವಿಷಯ ಬಹಿರಂಗವಾಗಿತ್ತು. ಆಗ ಗೃಹ ಮಂಡಳಿ ಅಧ್ಯಕ್ಷರಾಗಿದ್ದ ಜಿ.ಟಿ.ದೇವೇಗೌಡ ವಿರುದ್ಧ 81 ಎಕರೆ ಭೂಮಿ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು.
ಈ ಆರೋಪಕ್ಕೆ ಸಂಬಂಧಿಸಿದಂತೆ 46 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಸರಕಾರ ಲೋಕಾಯುಕ್ತ ತನಿಖೆಗೆ ಆದೇಶಿಸಿತ್ತು. ನಾನಾ ಕಾರಣಕ್ಕೆ ಪ್ರಕರಣ ನನೆಗುದಿಗೆ ಬಿದ್ದಿದ್ದರಿಂದ ನ್ಯಾಯಾಲಯವೇ ಮಧ್ಯಪ್ರವೇಶಿಸಿ ಸೂಕ್ತ ಕ್ರಮಕ್ಕೆ ಆದೇಶಿಸಿತ್ತು.
ಇದೀಗ ರಾಅಜ್ಯ ಸರಕಾರ ತನಿಖೆಯನ್ನು ಲೋಕಾಯುಕ್ತದಿಂದ ಎಸಿಬಿಗೆ ವರ್ಗಾಯಿಸಿದೆ. ಶಾಸಕ ಜಿ.ಟಿ.ದೇವೇಗೌಡ ಪ್ರಕರಣದ ಆರೋಪ ಎದುರಿಸುತ್ತಿದ್ದಾರೆ. ಅವರ ಮಗ ಹರೀಶ್ ಗೌಡ ಸೇರಿದಂತೆ 46 ಮಂದಿ ವಿರುದ್ಧ ಎಫ್ ಐಆರ್ ದಾಖಲಾಗಿದೆ.











Click it and Unblock the Notifications