ಗಜಪಡೆಗೆ ಇಂದು ಬೀಳ್ಕೊಡುಗೆ; ಅಧಿಕಾರಿ, ಜನಪ್ರತಿನಿಧಿಗಳ ಸುಳಿವೇ ಇಲ್ಲ!
ಮೈಸೂರು, ಅಕ್ಟೋಬರ್ 10: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಪ್ರಮುಖ ಆಕರ್ಷಣೆಯ ಕೇಂದ್ರವಾದ ಗಜಪಡೆಗೆ ಇಂದು ಅರಮನೆಯ ಆವರಣದಲ್ಲಿ ವಿಶೇಷ ಪೂಜೆ ಸಲ್ಲಿಸಿ ಆತ್ಮೀಯವಾಗಿ ಬೀಳ್ಕೊಡಲಾಯಿತು. ಆದರೆ ಅವುಗಳನ್ನು ದಸರಾಗೆ ಕರೆಸಿಕೊಳ್ಳಲು ಸ್ವಾಗತಿಸುವಾಗ ಕಂಡುಬಂದಿದ್ದ ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲೀ ಬೀಳ್ಕೊಡುವಾಗ ಕಾಣಲಿಲ್ಲ.
ದಸರಾದ ಪ್ರಮುಖ ಆಕರ್ಷಣೆ ಜಂಬೂಸವಾರಿ. ಈ ಜಂಬೂ ಸವಾರಿಯನ್ನು ಕಣ್ತುಂಬಿಕೊಳ್ಳಲೆಂದೇ ದೇಶ ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಅಂಥ ಆಕರ್ಷಣೆಯ ಕೇಂದ್ರವಾದ ಗಜಪಡೆ ಈ ಬಾರಿ ತಮ್ಮ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿದ್ದು, ಇಂದು ಸ್ವಸ್ಥಾನಕ್ಕೆ ಮರಳಲಿವೆ.
ಜಂಬೂಸವಾರಿಯಲ್ಲಿ ಪಾಲ್ಗೊಂಡಿದ್ದ ಅರ್ಜುನ, ವಿಜಯ, ವರಲಕ್ಷ್ಮಿ, ಧನಂಜಯ ಮತ್ತು ಈಶ್ವರ, ಕಾವೇರಿ ಸೇರಿದಂತೆ ಹತ್ತು ಆನೆಗಳಿಗೆ ಅರಮನೆ ಆವರಣದಲ್ಲಿ ಪೂಜೆ ಸಲ್ಲಿಸಿ ಆತ್ಮೀಯವಾಗಿ ಬೀಳ್ಕೊಡಲಾಗಿದ್ದು, ಇಂದು ಕಾಡಿಗೆ ಈ ಆನೆಗಳು ಮರಳಲಿವೆ. ಬೀಳ್ಕೊಡುವ ಸಂದರ್ಭ ಯಾವುದೇ ಜನಪ್ರತಿನಿಧಿಗಳು ಭಾಗವಹಿಸಿರಲಿಲ್ಲ. ಅರಣ್ಯಾಧಿಕಾರಿಗಳು, ಜಿಲ್ಲಾಡಳಿತದ ವತಿಯಿಂದ ಆನೆಗಳನ್ನು ಅವುಗಳ ಶಿಬಿರಕ್ಕೆ ಬೀಳ್ಕೊಡಲಾಗಿದೆ.

ಬಂಡೀಪುರದಲ್ಲಿ ನರಭಕ್ಷಕ ಹುಲಿಯನ್ನು ಸೆರೆ ಹಿಡಿಯಲು ಅರಮನೆ ಆವರಣದಲ್ಲಿ ಬೀಡುಬಿಟ್ಟಿದ್ದ ದಸರಾ ಆನೆಗಳಾದ ಅಭಿಮನ್ಯು, ಗೋಪಾಲಸ್ವಾಮಿ, ಜಯಪ್ರಕಾಶ್ ಆನೆಗಳನ್ನು ನಿನ್ನೆ ಬೀಳ್ಕೊಡಲಾಗಿತ್ತು. ಇಂದು ಇತರೆ ಆನೆಗಳನ್ನು ಬೀಳ್ಕೊಡಲಾಯಿತು.












Click it and Unblock the Notifications