ಡಿ ಬಾಸ್ ನೋಡಲು ಅವಕಾಶ ಕೊಡಿ, ಅಭಿಮಾನಿಗಳ ಒತ್ತಾಯ
ಮೈಸೂರು, ಸೆಪ್ಟೆಂಬರ್. 25: ನಟ ದರ್ಶನ್ ಕಾರು ಅಪಘಾತ ಪ್ರಕರಣ ಈಗಾಗಲೇ ಹಲವು ಗುಮಾನಿಗಳಿಗೆ ಕಾರಣವಾಗಿದೆ. ಸದ್ಯ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ದರ್ಶನ್ ರೆಸ್ಟ್ ಮಾಡುತ್ತಿದ್ದಾರೆ. ಆಸ್ಪತ್ರೆಯ ಸುತ್ತಮುತ್ತ ಬಿಗಿ ಬಂದೋಬಸ್ತ್ ಸಹ ಏರ್ಪಡಿಸಲಾಗಿದೆ.
ಆಸ್ಪತ್ರೆಯಲ್ಲಿ ಇತರ ವಾರ್ಡ್ ಗಳಲ್ಲಿ ದಾಖಲಾಗಿರುವ ರೋಗಿಗಳು ಮತ್ತು ಅವರ ಕುಟುಂಬದವರು ದರ್ಶನ್ ದಾಖಲಾಗಿರುವ ಕೊಠಡಿ ಕಡೆ ಹೋಗದಂತೆ ಸೂಚಿಸಲಾಗಿದೆ. ಇದೇ ವೇಳೆ ದರ್ಶನ್ ಕೊಠಡಿ ಒಳಗೆ ಹೋಗುವ ಸಿಬ್ಬಂದಿಗೆ ಮೊಬೈಲ್ ಬಳಕೆ ನಿಷೇಧಿಸಲಾಗಿದೆ.
ಆಸ್ಪತ್ರೆಯ ಸಿಬ್ಬಂದಿ ದರ್ಶನ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗುತ್ತಿದ್ದ ಹಿನ್ನೆಲೆಯಲ್ಲಿ ದರ್ಶನ್ ಮನವಿ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಆಸ್ಪತ್ರೆಯ ಮುಂಭಾಗ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಯಾರನ್ನೂ ಕೂಡ ಒಳಗೆ ಬಿಡಲಾಗುತ್ತಿಲ್ಲ.

ತಮ್ಮ ನೆಚ್ಚಿನ ನಟನನ್ನು ನೋಡಲು ಇಂದು ಮಂಗಳವಾರ ಬೆಳಗ್ಗೆ ಕೂಡ ಆಸ್ಪತ್ರೆಯ ಮುಂಭಾಗ ನೂರಾರು ಅಭಿಮಾನಿಗಳು ಜಮಾಯಿಸಿದ್ದರು. ದರ್ಶನ್ ಅವರನ್ನು ನೋಡಲು ಅವಕಾಶ ನೀಡುವಂತೆ ಒತ್ತಾಯಿಸಿದರು. ಆದರೆ ಭದ್ರತಾ ದೃಷ್ಟಿಯಿಂದ ಯಾರನ್ನೂ ಪೊಲೀಸರು ಒಳಗೆ ಬಿಡಲಿಲ್ಲ.
'ದಾಸ' ದರ್ಶನ್ ಅಪಘಾತದ ಸುತ್ತ ಹಲವು ಅನುಮಾನಗಳ ಹುತ್ತ.!
ಪೌರ ಕಾರ್ಮಿಕರ ನಿಯೋಗವೊಂದು ದರ್ಶನ್ ಭೇಟಿಗೆ ಇಂದು ಆಸ್ಪತ್ರೆಗೆ ಆಗಮಿಸಿತ್ತು. ಆದರೆ ಅವರಿಗೂ ಭೇಟಿಯ ಅವಕಾಶ ಸಿಗಲಿಲ್ಲ.

ಇಂದು ಪ್ರಜ್ವಲ್, ದೇವರಾಜ್ ಡಿಸ್ಚಾರ್ಜ್
ದರ್ಶನ್ ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಕೈಗೆ ಶಸ್ತ್ರಚಿಕಿತ್ಸೆ ನಡೆಸಿರುವುದರಿಂದ ಇನ್ನು ಒಂದೆರಡು ದಿನಗಳ ಕಾಲ ಆಸ್ಪತ್ರೆಯಲ್ಲೇ ಇರಬೇಕಾಗುತ್ತದೆ. ಅವರ ಆರೋಗ್ಯ ಪರಿಸ್ಥಿತಿ ನೋಡಿಕೊಂಡು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಇನ್ನು ಬಹುತೇಕ ಚೇತರಿಸಿಕೊಂಡಿರುವ ನಟರಾದ ದೇವರಾಜ್ ಮತ್ತು ಪ್ರಜ್ವಲ್ ದೇವರಾಜ್ ಅವರು ಇಂದು ಸಂಜೆ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.












Click it and Unblock the Notifications