ಸಂಪುಟ ವಿಸ್ತರಣೆ?, ಪುನಾರಚನೆ?; ಗುಟ್ಟು ಬಿಟ್ಟುಕೊಡದ ಯಡಿಯೂರಪ್ಪ
ಮೈಸೂರು, ಜನವರಿ 11: "ಅಮಾವಾಸ್ಯೆ ಬಳಿಕ ಸಂಪುಟ ವಿಸ್ತರಣೆ ಮಾಡಲು ಒಪ್ಪಿಗೆ ಸಿಕ್ಕಿದೆ. ಏಳು ಶಾಸಕರು ಸಂಪುಟ ಸೇರಲಿದ್ದಾರೆ. ವಿಸ್ತರಣೆಯೋ? ಅಥವಾ ಪುನಾರಚನೆಯೋ? ಕಾದು ನೋಡಿ" ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದರು.
ದೆಹಲಿ ಪ್ರವಾಸದಿಂದ ವಾಪಸ್ ಆಗಿರುವ ಯಡಿಯೂರಪ್ಪ ಸೋಮವಾರ ಬೆಳಗ್ಗೆ ಮೈಸೂರು ನಗರಕ್ಕೆ ಆಗಮಿಸಿದರು. ಸುತ್ತೂರು ಹೆಲಿಪ್ಯಾಡ್ನಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು.
"ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಮತ್ತು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಪ್ರಮಾಣ ವಚನ ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ. ಅವರಿಗೆ ಅನುಕೂಲಕರವಾಗುವ ದಿನ ನೋಡಿಕೊಂಡು ದಿನಾಂಕ ಅಂತಿಮಗೊಳಿಸುತ್ತೇವೆ" ಎಂದರು.

ವರಿಷ್ಠರ ಸೂಚನೆ ಹಿನ್ನಲೆಯಲ್ಲಿ ಭಾನುವಾರ ಬೆಳಗ್ಗೆ ಯಡಿಯೂರಪ್ಪ ದೆಹಲಿ ಪ್ರವಾಸ ಕೈಗೊಂಡಿದ್ದರು. ಪಕ್ಷದ ಅಧ್ಯಕ್ಷ ಜೆ. ಪಿ. ನಡ್ಡಾ ಸೇರಿದಂತೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದರು. ರಾತ್ರಿಯೇ ಬೆಂಗಳೂರಿಗೆ ವಾಪಸ್ ಆಗಿದ್ದರು.
"ಏಳು ಶಾಸಕರಿಗೆ ಸಚಿವ ಸ್ಥಾನ ನೀಡಲು ಹೈಕಮಾಂಡ್ ಒಪ್ಪಿಗೆ ನೀಡಿದೆ" ಎಂದು ಯಡಿಯೂರಪ್ಪ ಹೇಳಿದ್ದರು. ಆದರೆ, ಸಂಪುಟ ವಿಸ್ತರಣೆಯೋ?, ಪುನಾರಚನೆಯೋ ಎಂಬ ಗುಟ್ಟನ್ನು ಅವರು ಬಿಟ್ಟುಕೊಟ್ಟಿಲ್ಲ. ಕಾದು ನೋಡಿ ಎಂದು ಮಾತ್ರ ಹೇಳಿದ್ದಾರೆ.
"ಸದ್ಯದ ಆರ್ಥಿಕ ಪರಿಸ್ಥಿತಿ ನಡುವೆಯೂ ರೈತರನ್ನು ಆಲೋಚನೆಯಲ್ಲಿ ಇಟ್ಟುಕೊಂಡು ಮಾರ್ಚ್ ಮೊದಲ ವಾರ ಬಜೆಟ್ ಅಧಿವೇಶನ ನಡೆಸಲಾಗುವುದು" ಎಂದು ತಿಳಿಸಿದರು.












Click it and Unblock the Notifications