ನಾಗರಹೊಳೆ: ಅನಾರೋಗ್ಯದಿಂದ ಐರಾವತ ಆನೆ ಸಾವು
ನಾಗರಹೊಳೆ, ಮೇ 29: ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಅನಾರೋಗ್ಯದಿಂದಾಗಿ ಸುಮಾರು 48 ವರ್ಷ ಪ್ರಾಯದ ಐರಾವತ ಆನೆ ಮೃತಪಟ್ಟಿದೆ.
ಶನಿವಾರದಂದು ಮೇಯಲು ಬಿಟ್ಟಿದ್ದ ವೇಳೆ ಅಸ್ಪಸ್ಥನಾಗಿದ್ದ ಐರಾವತ ನಡೆಯಲು ಆಗುತ್ತಿರಲಿಲ್ಲ, ನಾಗರಹೊಳೆ ಉದ್ಯಾನದ ಪಶುವೈದ್ಯ ಡಾ.ಮುಜೀಬ್ ರೆಹಮಾನ್ ಚಿಕಿತ್ಸೆ ನೀಡುತ್ತಿದ್ದರಾದರೂ ಫಲಕಾರಿಯಾಗದೆ ಇಂದು ಮೃತಪಟ್ಟಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮತ್ತಿಗೋಡು ವಲಯದ ಕಂಠಾಪುರ ಸಾಕಾನೆ ಶಿಬಿರದಲ್ಲಿ ಆಶ್ರಯ ಪಡೆದಿದ್ದ ಐರಾವತ ಆನೆಯನ್ನು ಬೆಂಗಳೂರು ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಸುತ್ತಮುತ್ತಲಿನಲ್ಲಿ ದಾಂಧಲೆ ನಡೆಸುತ್ತಿದ್ದ ವೇಳೆ 2017ರ ಜೂನ್ರಲ್ಲಿ ಸೆರೆ ಹಿಡಿದು ಇಲ್ಲಿಗೆ ತಂದು ಶಿಬಿರದಲ್ಲಿ ಆಶ್ರಯ ನೀಡಲಾಗಿತ್ತು.

ನಾಗರಹೊಳೆಯ ಹುಲಿಯೋಜನೆ ಕ್ಷೇತ್ರ ನಿರ್ದೇಶಕ ಆರ್.ರವಿಶಂಕರ್ ಸಮ್ಮುಖದಲ್ಲಿ ನಾಗರಹೊಳೆ ಉದ್ಯಾನದ ಪಶುವೈದ್ಯ ಡಾ.ಮುಜೀಬ್ ರೆಹಮಾನ್, ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಾಳೆಲೆ ಪಶು ಆಸ್ಪತ್ರೆಯ ಪಶುವೈದ್ಯ ಡಾ. ಭವಿಷ್ಯಕುಮಾರ್ ಮರಣೋತ್ತರ ಪರೀಕ್ಷೆ ನಡೆಸಿದ್ದು, ಆ ವೇಳೆ ಆನೆಯ ಹೃದಯಭಾಗದಲ್ಲಿ ನೀರು ತುಂಬಿ ಕೊಂಡಿದ್ದು, ಹೈಡ್ರೋ ಪೆರಿಕಾರ್ಡಿನಾ ಕಾಯಿಲೆಯಿಂದ ಸತ್ತಿದೆ ಎಂದು ಶಂಕಿಸಲಾಗಿದೆ.
ಈ ಸಂದರ್ಭಧಲ್ಲಿ ಕೊಡಗಿನ ದೊಡ್ಡ ಆಳವಾರದ ವನ್ಯಜೀವಿ ಪಶುವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ದಿವ್ಯ, ವಲಯ ಅರಣ್ಯಾಧಿಕಾರಿ ಕಿರಣ್ಕುಮಾರ್ ಹಾಗೂ ಸಿಬ್ಬಂದಿ ಹಾಜರಿದ್ದರು.
ವಿಜ್ಞಾನಿಗಳ ದಂಡು
ಆನೆಗಳು ಹೃದಯಾಘಾತ ಮತ್ತಿತರ ಕಾಯಿಲೆಗಳಿಂದ ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ ಸಮಗ್ರ ಪರಿಶೀಲನೆಗಾಗಿ ಆಂಧ್ರಪ್ರದೇಶದ ಪುಲಿವೆಂದಲದಲ್ಲಿರುವ ಅಮೆರಿಕಾ ಮೂಲದ ಅಟ್ಲಾಂಟಾ ವಿ.ವಿ.ಯ ವಿಜ್ಞಾನಿಗಳ ತಂಡ ಶಿಬಿರಕ್ಕೆ ಭೇಟಿ ನೀಡಿದ್ದು, ಆನೆಗಳ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಸಿ.ಎಫ್.ರವಿಶಂಕರ್ ತಿಳಿಸಿದ್ದಾರೆ.












Click it and Unblock the Notifications