ಮೈಸೂರಲ್ಲಿ ಆನೆ ಕಾರಿಡಾರ್ ಕಂಬಿಗಳ ಕಳ್ಳ ಸಾಗಣೆ!
ಮೈಸೂರು, ಡಿಸೆಂಬರ್ 09 : ಮಾನವ ಮತ್ತು ಆನೆಗಳ ಸಂಘರ್ಷ ತಡೆಯಲು ಕೇಂದ್ರ ಸರ್ಕಾರದ ನೆರವಿನಲ್ಲಿ ಆನೆಗಳ ಕಾರಿಡಾರ್ ನಿರ್ಮಾಣ ಮಾಡಲಾಗುತ್ತಿದೆ. ಆದರೆ, ಈ ಯೋಜನೆಯಲ್ಲಿ ಅವ್ಯವಹಾರ ನಡೆದಿರುವ ಶಂಕೆ ಇದ್ದು, ಕಳ್ಳಸಾಗಣೆ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಮೈಸೂರು ಜಿಲ್ಲೆಯ ಹೆಚ್. ಡಿ. ಕೋಟೆಯಲ್ಲಿ ಕಾಡಾನೆಗಳು ಅರಣ್ಯದಿಂದ ಹೊರ ಬಾರದಂತೆ ಆನೆಗಳ ಕಾರಿಡಾರ್ ನಿರ್ಮಾಣ ಮಾಡಲಾಗುತ್ತಿದೆ. ಆದರೆ, ಇದಕ್ಕೆ ಬಳಕೆ ಮಾಡುವ ರೈಲ್ವೆ ಕಂಬಿಗಳನ್ನು ಕಳ್ಳ ಸಾಗಾಣೆ ಮಾಡುತ್ತಿದ್ದ ಪ್ರಕರಣ ಈಗ ಬಯಲಾಗಿದೆ.
ಹೆಚ್. ಡಿ. ಕೋಟೆಯಲ್ಲಿ ಆನೆಗಳ ಕಾರಿಡಾರ್ ಯೋಜನೆಯಡಿ ಕಾಡಿನ ಸುತ್ತ ಕಂದಕ ತೋಡಿ ರೈಲ್ವೆ ಕಂಬಿಗಳನ್ನು ಅಳವಡಿಕೆ ಮಾಡಲಾಗುತ್ತಿತ್ತು. ಈ ಯೋಜನೆಗೆ ಕೇಂದ್ರ ಸರ್ಕಾರ ಕೋಟ್ಯಾಂತರ ರೂಪಾಯಿ ಅನುದಾನವನ್ನು ನೀಡುತ್ತಿದೆ.

ಈ ಯೋಜನೆಗೆ ಬಳಕೆ ಮಾಡುವ ರೈಲು ಕಂಬಿಗಳನ್ನು ಕಾಡಿನಲ್ಲಿ ಅಳವಡಿಕೆ ಮಾಡದೆ ಗುಜರಿಗೆ ಸಾಗಣೆ ಮಾಡುವ ಪ್ರಕರಣ ಬಯಲಾಗಿದೆ. ಕಂಬಿಗಳನ್ನು ಗುಜರಿಗೆ ಸಾಗಿಸುವಾಗಲೇ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಇದಕ್ಕೆ ಕೆಲವು ಅರಣ್ಯ ಇಲಾಖೆ ಅಧಿಕಾರಿಗಳು ಕೈ ಜೋಡಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಕಂಬಿಗಳ ಕಳ್ಳ ಸಾಗಣೆ ವಿಚಾರವನ್ನು ಗ್ರಾಮಸ್ಥರು ಪೊಲೀಸರಿಗೆ ತಿಳಿಸಿದ್ದಾರೆ. ನೆಪ ಮಾತ್ರಕ್ಕೆ ಪ್ರಕರಣ ದಾಖಲಾಗಿದೆ. ಇದರ ಹಿಂದೆ ಯಾರಿದ್ದಾರೆ? ಎಂಬುವುದನ್ನು ಪತ್ತೆ ಹಚ್ಚುವ ಕೆಲಸ ಆಗುತ್ತಿಲ್ಲ ಎಂದು ಜನರು ದೂರಿದ್ದಾರೆ.
ಪ್ರಕರಣದಲ್ಲಿ ಅರಣ್ಯ ಇಲಾಖೆ ಮತ್ತು ಪೊಲೀಸರು ಶಾಮೀಲಾಗಿದ್ದಾರೆಯೇ? ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ತನಿಖೆಯಿಂದ ಮಾತ್ರ ಸತ್ಯಾಂಶ ಬಯಲಿಗೆ ಬರಲಿದೆ.












Click it and Unblock the Notifications