ಹಿರಿಯರನ್ನು ಕಡೆಗಣಿಸಿರುವುದೇ ರಾಜೀನಾಮೆಗೆ ಕಾರಣ : ಶ್ರೀನಿವಾಸ್ ಪ್ರಸಾದ್
ಪಕ್ಷದಲ್ಲಿ ಹಿರಿಯರನ್ನು ಕಡೆಗಣಿಸಿರುವುದೇ ಎಸ್ ಎಂ ಕೃಷ್ಣ ರಾಜೀನಾಮೆಗೆ ಕಾರಣ ಎಂದು ಮಾಜಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.
ಮೈಸೂರು, ಜನವರಿ 29 : "ಪಕ್ಷ ತನ್ನನ್ನು ಮೂಲೆಗುಂಪು ಮಾಡಿದೆ ಎಂಬ ಭಾವನೆಯಿಂದ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಸಕ್ರಿಯ ರಾಜಕೀಯದಿಂದ ನಿವೃತ್ತಿ ಹೊಂದಿರಬಹುದು," ಎಂದು ಮಾಜಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಕೃಷ್ಣ ಅವರ ಕೊಡುಗೆಯನ್ನು ಕೊಂಡಾಡಿದರು. ಕೃಷ್ಣ ಅವರೊಬ್ಬ ಬಹಳ ಗೌರವಯುತ ರಾಜಕಾರಣಿ. ಕೃಷ್ಣ ಅವರ ಈ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಕಾರಣರಾಗಿದ್ದಾರೆ ಎಂದು ಆರೋಪಿಸಿದರು.

ಕಾವೇರಿ ವಿವಾದ ಭುಗಿಲೆದ್ದಾಗ ಸಿದ್ದರಾಮಯ್ಯ ಅವರು ಹಿರಿಯ ಮುಖಂಡ ಎಸ್ ಎಂ ಕೃಷ್ಣ ಅವರ ಸಲಹೆ ಪಡೆಯಬೇಕಿತ್ತು, ಆದರೆ ಸಿದ್ದರಾಮಯ್ಯ ಕೃಷ್ಣಾರನ್ನು ಸಂಪೂರ್ಣ ನಿರ್ಲಕ್ಷ್ಯಿಸಿದರು ಎಂದು ಶ್ರೀನಿವಾಸ್ ಪ್ರಸಾದ್ ದೂರಿದ್ದಾರೆ.
ಸಿದ್ದರಾಮಯ್ಯ ಜೆಡಿಎಸ್ ನಲ್ಲಿದ್ದಾಗ ಹಲವು ಬಾರಿ ಎಸ್ ಎಂ ಕೃಷ್ಣ ಅವರನ್ನು ಜೈಲಿಗೆ ಕಳುಹಿಸುವುದಾಗಿ ಹೇಳಿದ್ದರು.
ನಂತರ ಕಾಂಗ್ರೆಸ್ ಗೆ ಸೇರ್ಪಡೆಗೊಂಡು ಸಿಎಂ ಆದ ಬಳಿಕ ಸಿದ್ದರಾಮಯ್ಯ 50 ವರ್ಷಗಳ ರಾಜಕೀಯ ಅನುಭವವಿರುವ ಮುತ್ಸದ್ಧಿ ಕೃಷ್ಣ ಅವರನ್ನು ಭೇಟಿ ಮಾಡಲಿಲ್ಲ. ಅವರ ಬಳಿ ಯಾವುದೇ ಸಲಹೆ ಪಡೆಯಲಿಲ್ಲ," ಎಂದು ಪ್ರಸಾದ್ ದೂರಿದರು.












Click it and Unblock the Notifications