"ವಾಟರ್ ಬೆಲ್" ನಂತರ ಮಕ್ಕಳಿಗೆ ವಾರಕ್ಕೊಂದು ದಿನ "ಬ್ಯಾಗ್ ಲೆಸ್ ಡೇ"
ಮೈಸೂರು, ಜನವರಿ 11: ಶಾಲೆಗಳಲ್ಲಿ ವಾರದಲ್ಲಿ ಒಂದು ದಿನ "ಬ್ಯಾಗ್ ರಹಿತ ದಿನ" ಮಾಡುವ ಆಲೋಚನೆಯನ್ನು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಂಚಿಕೊಂಡಿದ್ದಾರೆ. ಮುಂಬರುವ ಶೈಕ್ಷಣಿಕ ವರ್ಷದಿಂದ ಈ ಒಂದು ಆಲೋಚನೆಯನ್ನು ಜಾರಿಗೆ ತರುವುದಾಗಿ ತಿಳಿಸಿದ್ದಾರೆ.
"ಈ ಆಲೋಚನೆ ಜಾರಿಗೆ ಶಿಕ್ಷಣ ತಜ್ಞರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡುವ ದೃಷ್ಟಿಯಿಂದ ವಾರದಲ್ಲಿ ಒಂದು ದಿನ ಅಥವಾ ಹದಿನೈದು ದಿನಕ್ಕೊಮ್ಮೆ ವಿದ್ಯಾರ್ಥಿಗಳಿಗೆ ಬ್ಯಾಗ್ ಲೆಸ್ ಡೇ ಮಾಡಲಾಗುವುದು. ನಾಟಕ, ಸ್ವಚ್ಛತೆ, ಹಾಡುಗಾರಿಕೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಶಿಕ್ಷಣ ನೀಡಲಾಗುವುದು" ಎಂದು ಮಾಹಿತಿ ನೀಡಿದರು.
"ಶಾಲಾ ಮಕ್ಕಳ ಬ್ಯಾಗ್ ತೂಕವನ್ನು ಕಡಿಮೆ ಮಾಡಲು ಕೂಡ ಚಿಂತಿಸಲಾಗಿದೆ. ಮುಂದಿನ ವಾರ ಶಿಕ್ಷಣ ತಜ್ಞರೊಂದಿಗೆ ಸಂವಾದ ನಡೆಸಿ ಅಭಿಪ್ರಾಯ ಪಡೆಯಲಾಗುವುದು" ಎಂದರು.

ಈಚೆಗೆ ಬಿಸಿಯೂಟ ಸೇವಿಸಿ ಎಚ್.ಡಿ.ಕೋಟೆ ಆದರ್ಶ ಶಾಲೆಯ ಮಕ್ಕಳು ಅಸ್ವಸ್ಥಗೊಂಡಿದ್ದ ಪ್ರಕರಣದ ಕುರಿತೂ ಮಾತನಾಡಿದ ಅವರು, "ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಜಿಲ್ಲಾಧಿಕಾರಿ ಪರಿಶೀಲನೆ ನಡೆಸಿದ್ದಾರೆ. ಮಕ್ಕಳ ಮಧ್ಯಾಹ್ನದ ಊಟದ ಬಗ್ಗೆ ಅಡುಗೆ ಸಿಬ್ಬಂದಿಗೆ ಜಾಗೃತಿ ಮೂಡಿಸಬೇಕಿದೆ. ಈ ಇಂದು ಘಟನೆಯಿಂದ ಎಲ್ಲಾ ಶಾಲೆಗಳಲ್ಲೂ ಇದೇ ರೀತಿ ಆಗುತ್ತದೆಯಾ ಎಂಬ ಭಾವನೆ ಮೂಡುತ್ತದೆ. ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು. ಕ್ರಮ ತೆಗೆದುಕೊಳ್ಳುತ್ತೇವೆ" ಎಂದರು.
ಇನ್ನು ಉಚ್ಛಾರಣೆಗೆ ತಡವರಿಸಿದ್ದ ವಿದ್ಯಾರ್ಥಿಯೊಬ್ಬನ ವೀಡಿಯೋ ವೈರಲ್ ವಿಚಾರವಾಗಿಯೂ ಪ್ರತಿಕ್ರಿಯೆ ನೀಡಿದ ಅವರು, "ಆತ ಹಗರಿಬೊಮ್ಮನಹಳ್ಳಿ ಶಾಲೆ ಶಿಕ್ಷಕ ಎಂದು ತಿಳಿದುಬಂದಿದೆ. ಆ ಶಿಕ್ಷಕನನ್ನು ಅಮಾನತು ಮಾಡಲಾಗಿದೆ. ದೂರು ಕೂಡ ದಾಖಲಾಗಿದೆ. ಈ ರೀತಿ ಮಾಡುವುದರಿಂದ ಮಗುವಿನ ಮನಸ್ಥಿತಿ, ಪೋಷಕರ ಮನಸ್ಥಿತಿ ಏನು ಆಗಬೇಡ? ಮಗುವಿಗೆ ಇರುವ ಕೊರತೆ ಆಟದ ಸಂಗತಿ ಆಗಬಾರದು. ಎಲ್ಲ ಡಿಡಿಪಿಐಗಳಿಗೆ ಪತ್ರ ಬರೆದಿದ್ದೇನೆ" ಎಂದು ಬೇಸರ ವ್ಯಕ್ತಪಡಿಸಿದರು.












Click it and Unblock the Notifications