ಮೊದಲ ಬಾರಿಗೆ ಸಿಡಿಮದ್ದು ಶಬ್ದಕ್ಕೆ ಕಿವಿ ಕೊಡಲಿದ್ದಾನೆ ಧನಂಜಯ
ಮೈಸೂರು, ಸೆಪ್ಟೆಂಬರ್. 27: ದಸರಾ ಮಹೋತ್ಸವಕ್ಕೆ ಜಿಲ್ಲಾಡಳಿತ ಸಿದ್ಧತೆ ನಡೆಸುತ್ತಿದೆ. ಜಂಬು ಸವಾರಿ ವೇಳೆ ಪೊಲೀಸ್ ಸಿಬ್ಬಂದಿ 21 ಸುತ್ತು ಕುಶಾಲತೋಪು ಸಿಡಿಸಲಿದ್ದು, ಈ ವೇಳೆ ಆನೆಗಳು ಬೆದರದ ಹಾಗೆ ನೋಡಿಕೊಳ್ಳಲು ಇಂದು ಗುರುವಾರ ತರಬೇತಿ ನೀಡಲಾಯಿತು.
ಅರಮನೆ ಕೋಟೆ ಮಾರಮ್ಮ ದೇವಾಲಯದ ಬಳಿ ಸಿಡಿಮದ್ದು ತಾಲೀಮು ನಡೆಸಲಾಗಿದ್ದು, ಆನೆಗಳು ಬೆದರದಂತೆ ಕುಶಾಲ ತೋಪು ಸಿಡಿಸಿ ತರಬೇತಿ ನೀಡಲಾಗುತ್ತಿದೆ. ತಾಲೀಮಿನಲ್ಲಿ ಅಶ್ವರೋಹಿಪಡೆ ಕೂಡ ಭಾಗಿಯಾಗಿದ್ದು ಪೊಲೀಸ್ ಸಿಬ್ಬಂದಿ ಮೂರು ಫಿರಂಗಿ ಗಾಡಿಗಳಿಂದ ಸಿಡಿಮದ್ದು ಸಿಡಿಸಿದರು.
ಸಿಡಿಮದ್ದು ತಾಲೀಮಿನಲ್ಲಿ ಕ್ಯಾಪ್ಟನ್ ಅರ್ಜುನ ಸೇರಿ 12 ಆನೆಗಳು ಭಾಗಿಯಾಗಿದ್ದು, ಇದೇ ಮೊದಲ ಬಾರಿಗೆ ಸಿಡಿಮದ್ದು ಶಬ್ದಕ್ಕೆ ಧನಂಜಯ ಕಿವಿ ಕೊಡಲಿದ್ದಾನೆ.

ಜಂಬೂಸವಾರಿಯ ಮೆರವಣಿಗೆಯಲ್ಲಿ ಭಾಗವಹಿಸುವ ದಸರಾ ಗಜಪಡೆಗೆ ಹಾಗೂ ಕುದುರೆಗಳಿಗೆ ಕುಶಾಲುತೋಪುಗಳ ಸದ್ದನ್ನು ಪರಿಚಯ ಮಾಡಿಸಲು ಸಿದ್ಧತೆ ನಡೆಸುತ್ತಿದ್ದು, ಆನೆಗಳು, ಅಶ್ವಗಳು ಫಿರಂಗಿಯಿಂದ ಹೊರ ಬರುವ ಸದ್ದಿಗೆ ಹೆದರದಂತೆ ಮುಂಜಾಗ್ರತೆಯಾಗಿ 2 ಬಾರಿ ತಾಲೀಮು ನಡೆಸಲಾಗುತ್ತದೆ.
ನಗರ ಸಶಸ್ತ್ರ ಮೀಸಲು ಪಡೆಯ ಪೊಲೀಸರು ಫಿರಂಗಿ ಸಿಡಿಸಲಿದ್ದು, ಮೂವತ್ತು ಮಂದಿ ಪೊಲೀಸ್ ಸಿಬ್ಬಂದಿ, ಮೂವರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಒಟ್ಟು ಮೂವತ್ತಮೂರು ಪೊಲೀಸರು ಫಿರಂಗಿ ಸಿಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವಿಜಯದಶಮಿಯ ದಿನ ನಡೆಯುವ ಜಂಬೂ ಸವಾರಿ ಮೆರವಣಿಗೆ ಆರಂಭಗೊಳ್ಳುವುದಕ್ಕೆ ಮುಂಚೆ ವಿಜಯೋತ್ಸವದ ಪತೀಕವಾಗಿ 21 ಕುಶಾಲುತೋಪು ಗಳನ್ನು ಹಾರಿಸುವ ಪರಿಪಾಠ ಹಿಂದಿನಿಂದಲೂ ನಡೆದುಬಂದಿದೆ.

ಈ ಸಂದರ್ಭದಲ್ಲಿ ಜನರ ಮಧ್ಯೆ ನಿಂತಿರುವ ಆನೆಗಳು ಮತ್ತು ಕುದುರೆಗಳು ಅಗಾಧ ಸದ್ದಿಗೆ ಬೆದರಿ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವ ಉದ್ದೇಶದಿಂದ ತಾಲೀಮು ನಡೆಸಲಾಗುವುದು.
ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ನಗರ ಸಶಸ್ತ್ರ ಮೀಸಲು ಪಡೆಯ (ಸಿಎಆರ್) ಮೈದಾನದಲ್ಲಿ ಆನೆಗಳು ಹಾಗೂ ಕುದುರೆಗಳನ್ನು ನಿಲ್ಲಿಸಿ ಅವುಗಳಿಂದ ಸ್ವಲ್ಪ ದೂರದಲ್ಲಿ ಫಿರಂಗಿಗಳನ್ನು ಸಜ್ಜುಗೊಳಿಸಿ ಅವುಗಳಿಗೆ ಮದ್ದು ತುಂಬಿ ಸಿಡಿಸುವ ಮೂಲಕ ಆ ಸಂದರ್ಭದಲ್ಲಿ ಹೊರಡುವ ಅಗಾಧ ಶಬ್ದವನ್ನು ಆನೆಗಳು ಮತ್ತು ಕುದುರೆಗಳಿಗೆ ಪರಿಚಯಿಸಲಾಗುವುದು.












Click it and Unblock the Notifications