ಪ್ಲಾಸ್ಟಿಕ್ ಮುಕ್ತ ದಸರಾ ಆಚರಣೆಗೆ ಈ ಬಾರಿ ಮೈಸೂರಲ್ಲಿ ಭರ್ಜರಿ ತಯಾರಿ
ಮೈಸೂರು, ಸೆಪ್ಟೆಂಬರ್ 3: ಒಂಬತ್ತು ದಿನಗಳ ನಾಡಹಬ್ಬ ದಸರಾವನ್ನು ಈ ಬಾರಿ ಪ್ಲಾಸ್ಟಿಕ್ ಮುಕ್ತವನ್ನಾಗಿ ಆಚರಿಸಲು ಮೈಸೂರು ಜಿಲ್ಲಾಡಳಿತ ಈಗಾಗಲೇ ರೂಪುರೇಷೆ ಸಿದ್ಧಪಡಿಸಿದೆ.
ನಾಡಹಬ್ಬಕ್ಕೆ ಈಗ ಅರಮನೆಯಲ್ಲಿ ಫಿರಂಗಿ ತಾಲೀಮು
ದಸರೆಗೆ ಪ್ರವಾಸಿಗರು ತಂಡೋಪತಂಡವಾಗಿ ಎಲ್ಲೆಲ್ಲಿಂದಲೂ ಬರುತ್ತಾರೆ. ಇದೇ ವೇಳೆ ಅಂಗಡಿ ಮುಂಗಟ್ಟುಗಳಲ್ಲಿ, ದಸರಾ ಕಾರ್ಯಕ್ರಮ ಸೇರಿದಂತೆ ವಿವಿಧ ಕಡೆ ಪ್ಲಾಸ್ಟಿಕ್ ಬಳಕೆ ಹೆಚ್ಚಿರುತ್ತದೆ. ಬೀದಿ ಬದಿಯಲ್ಲಿ ಪ್ಲಾಸ್ಟಿಕ್ ಬಳಕೆಯೂ ರಾಜಾರೋಷವಾಗಿ ನಡೆಯುತ್ತಿರುತ್ತದೆ. ಹೀಗಾಗಿ ಈ ಬಾರಿ ಪ್ಲಾಸ್ಟಿಕ್ ಬದಲಾಗಿ ಪರಿಸರಸ್ನೇಹಿ ದಸರಾ ಆಚರಣೆಗೆ ಜಿಲ್ಲಾಡಳಿತ ಮುಂದಾಗಿದೆ. ಎಲ್ಲೆಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಬೇಕೋ ಅಲ್ಲಿ ಪೇಪರ್, ಬಟ್ಟೆ, ಬಿದಿರಿನ ಹೂಗುಚ್ಛ, ಬಾಳೆ ಎಲೆ, ಮರದ ಚಮಚವನ್ನು ಬಳಸುವ ಸಿದ್ಧತೆ ನಡೆಯುತ್ತಿದೆ.
"ಈ ಬಾರಿಯ ದಸರಾ ಮಹೋತ್ಸವವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಬಾರದೆಂಬ ಸಂದೇಶವನ್ನು ಅಂಟಿಸಲಾಗುವುದು. ಯುವ ದಸರಾ ಹಾಗೂ ಆಹಾರ ಮೇಳಗಳಲ್ಲಿ ಪ್ಲಾಸ್ಟಿಕ್ ಮುಕ್ತರಾಗಿ ಸಹಕರಿಸಬೇಕೆಂದು ಚಿತ್ರವನ್ನು ಪ್ರದರ್ಶಿಸಲಾಗುತ್ತಿದೆ. ಆದಷ್ಟು ಪ್ಲಾಸ್ಟಿಕ್ ಗೆ ಪರ್ಯಾಯ ವಸ್ತುಗಳನ್ನು ಪಟ್ಟಿ ಮಾಡಲಾಗಿದೆ" ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್ ತಿಳಿಸಿದರು.
ಪ್ರತಿ ದಿನ ನಗರದಲ್ಲಿ 450 ಟನ್ ಕಸ ಸಂಗ್ರಹವಾಗುತ್ತದೆ. ದಸರಾ ವೇಳೆ ಇದಕ್ಕಿಂತ ಹೆಚ್ಚುವರಿಯಾಗಿ 10 ಟನ್ ಕಸ ಸಂಗ್ರಹವಾಗುತ್ತದೆ. ಇದರಲ್ಲಿ ಶೇಕಡ 50ರಷ್ಟು ಪ್ಲಾಸ್ಟಿಕ್ ಹಾಗೂ ಕವರ್ ಬಾಟಲಿಗಳೇ ಇರುತ್ತವೆ. ಈ ಹಿನ್ನೆಲೆಯಲ್ಲಿ ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಅಗತ್ಯ ಸಿದ್ಧತೆ ನಡೆಸಿಕೊಂಡಿದೆ.
ದಸರಾ ಕಾರ್ಯಕ್ರಮದ ಅತಿಥಿಗಳಿಗೆ ಪ್ಲಾಸ್ಟಿಕ್ ಬದಲಾಗಿ ಬಿದಿರಿನಿಂದ ಬೊಕ್ಕೆ ಮಾಡಿ ಅದರೊಳಗೆ ಹೂವಿನ ಸಸಿ ಇಟ್ಟು ನೀಡುವುದು, ದಸರೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳಿಗೆ ಸ್ಟೀಲ್ ಮತ್ತು ಗಾಜಿನ ಲೋಟದಲ್ಲಿ ನೀರು ವಿತರಿಸುವುದು, ಆಹಾರ ಮೇಳದಲ್ಲಿ ಪ್ಲಾಸ್ಟಿಕ್ ಕವರ್ ನೀಡುವುದು ಹೀಗೆ ಹಲವು ಮಾರ್ಪಾಡುಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಗಣೇಶ ಚತುರ್ಥಿಯಂದು ಮೈಸೂರು ದಸರಾ ಆನೆಗಳಿಗೆ ವಿಶೇಷ ಪೂಜೆ
ಪ್ಲಾಸ್ಟಿಕ್ ಚಮಚ ಮತ್ತು ಬಾಟೆಲ್ ನೀಡುವುದು ಕಂಡುಬಂದರೆ ತಕ್ಷಣ ದಂಡ ವಿಧಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಗಿಫ್ಟ್ ಅಥವಾ ಮೊಮೆಂಟೊಗಳಿಗೆ ಪ್ಲಾಸ್ಟಿಕ್ ಬದಲು ಪೇಪರ್ ಸುತ್ತಿ ನೀಡುವುದು, ಪ್ಲಾಸ್ಟಿಕ್ ಬದಲು ಬಟ್ಟೆ ಬ್ಯಾಗ್ ನಲ್ಲಿ ಪಾರ್ಸೆಲ್ ಕಟ್ಟಿಕೊಡುವುದು, ಪ್ಲಾಸ್ಟಿಕ್ ಚಮಚದ ಬದಲು ಮರದ ಸ್ಪೂನ್ ಬಳಸುವುದು, ಪೇಪರ್ ಮೇಲೆ ಪ್ಲಾಸ್ಟಿಕ್ ನೀಡುವ ಬದಲು ಬಾಳೆ ಎಲೆ ನೀಡಿ ಊಟ ಹಾಕಿ ಕೊಡುವಂತೆ ಮಾಲೀಕರಿಗೆ ಹೇಳುವುದು ಹೀಗೆ ಹಲವು ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.