ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ತಾನೇ ಡಿಸಿಎಂ ವಿಚಾರ: ಸಿದ್ದು ಲೇವಡಿ
ಮೈಸೂರು, ನವೆಂಬರ್ 29 : "ಇಲ್ನೋಡ್ರೀ, ಜೆಡಿಎಸ್ ಅಧಿಕಾರಕ್ಕೆ ಬಂದರೆ ತಾನೇ ಉಪ ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಚಿಂತೆ ಮಾಡಬೇಕು" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಮಾತಿಗೆ ಲೇವಡಿ ಮಾಡಿದ್ದಾರೆ.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಗೆ ಬಹುಮತ ಬಂದರೆ ಎರಡು ಉಪ ಮುಖ್ಯಮಂತ್ರಿ ಸ್ಥಾನವನ್ನು ಸೃಷ್ಟಿಸಿ, ಒಂದು ದಲಿತರಿಗೆ ಹಾಗೂ ಮತ್ತೊಂದು ಅಲ್ಪಸಂಖ್ಯಾತರಿಗೆ ನೀಡಲಾಗುವುದು ಎಂದು ಈಚೆಗೆ ಎಚ್ ಡಿಕೆ ಹೇಳಿಕೆ ನೀಡಿದ್ದರು. ಆ ಮಾತಿಗೆ ಪ್ರತಿಕ್ರಿಯೆಯಾಗಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಕುಟುಂಬವರ್ಗದವರ ಮದುವೆ ಕಾರ್ಯಕ್ರಮಕ್ಕೆ ತೆರಳಲು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು, ಜೆಡಿಎಸ್ ಅದಿಕಾರಕ್ಕೆ ಬರುವ ಕನಸು ಕಾಣುತ್ತಿದೆ. ಆ ಪಕ್ಷವು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದು ಸಾಧ್ಯವೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದರು.
ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲರು ಜಾತ್ಯತೀತ ಬದ್ಧತೆ ಇರುವ ಪಕ್ಷಕ್ಕೆ ಮತ ಹಾಕಿ ಎಂದು ಹೇಳಿರುವುದರಲ್ಲಿ ತಪ್ಪೇನೂ ಇಲ್ಲ. ಜಾತ್ಯತೀತ ಎಂಬುದು ಸಂವಿಧಾನ ಬದ್ಧವಾದ ವಿಷಯವಾಗಿದೆ ಎಂದು ಹೇಳಿದರು.

ಕೋಮುವಾದಿ ಎಂದು ಒಪ್ಪಿಕೊಂಡಂತಾಗಿದೆ ಬಿಜೆಪಿ
ಚಂಪಾ ಅವರ ಮಾತನ್ನು ವಿರೋಧಿಸುವ ಬಿಜೆಪಿಯು ಕೋಮುವಾದಿ ಪಕ್ಷ ಎಂಬುದನ್ನು ತಾನೇ ಒಪ್ಪಿಕೊಂಡಂತಾಗುತ್ತದೆ. ಕುಂಬಳಕಾಯಿ ಕಳ್ಳ ಅಂದರೆ ಬಿಜೆಪಿಯವರು ಏಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಸಂಸದೀಯ, ಸಜ್ಜನಿಕೆ ಪದಗಳ ಅರಿವಿರಬೇಕು
ಸಾಹಿತಿಗಳನ್ನು ಕರೆತಂದು ರಾಜಕೀಯ ಮಾಡುವ ಅಗತ್ಯ ನನಗಿಲ್ಲ. ಚಂಪಾ ಅವರ ಬಗ್ಗೆ ಸಂಸದ ಪ್ರತಾಪ ಸಿಂಹ ಮಾತನಾಡಿರುವುದಕ್ಕೆ ನಾನು ಪ್ರತಿಕ್ರಿಯಿಸುವ ಅವಶ್ಯಕತೆ ಇಲ್ಲ. ರಾಜಕಾರಣಿಗಳಿಗೆ ಸಂಸದೀಯ ಹಾಗೂ ಸಜ್ಜನಿಕೆ ಪದಗಳ ಬಳಕೆ ಅರಿವಿರಬೇಕು ಎಂದು ಕುಟುಕಿದರು.

ವಿನಯ ಕುಲಕರರ್ಣಿ ವಿರುದ್ಧ ಸಾಕ್ಷ್ಯವಿಲ್ಲ
ಬಿಜೆಪಿ ಮುಖಂಡ, ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ವಿನಯ ಕುಲಕರ್ಣಿ ಅವರ ವಿರುದ್ಧ ಯಾವುದೇ ಎಫ್ ಐಆರ್ ದಾಖಲಾಗಿಲ್ಲ. ಹಾಗೆಯೇ ಸಾಕ್ಷ್ಯಾಧಾರವೂ ಇಲ್ಲ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅರಸರ ವಂಶಸ್ಥರ ಆಹ್ವಾನದ ಜವಾಬ್ದಾರಿ ಪರಿಷತ್ತಿನದು
ಸಾಹಿತ್ಯ ಸಮ್ಮೇಳನಕ್ಕೆ ಮೈಸೂರು ಅರಸರ ವಂಶಸ್ಥರಿಗೆ ಆಹ್ವಾನ ನೀಡದಿರುವುದಕ್ಕೂ ರಾಜ್ಯ ಸರಕಾರಕ್ಕೂ ಯಾವುದೇ ಸಂಬಂಧವಿಲ್ಲ. ಸಮ್ಮೇಳನಕ್ಕೆ ನಾವು ಹಣ ನೀಡಿದ್ದೇವೆ ಅಷ್ಟೇ. ಉಳಿದೆಲ್ಲಾ ಜವಾಬ್ದಾರಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಸೇರಿದ್ದು ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ರವಿ ಬೆಳಗೆರೆ ಪ್ರಕರಣ ಮುಂದುವರಿಸಿದ್ದು ಬಿಜೆಪಿ
ರವಿ ಬೆಳಗೆ ವಿರುದ್ಧದ ಹಕ್ಕು ಚ್ಯುತಿ ಪ್ರಕರಣವನ್ನು ಮುಂದುವರಿಸಿದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಆ ಪ್ರಕರಣವನ್ನು ಮುಂದುವರೆಸಿದ್ದೇ ಬಿಜೆಪಿ. ಉಳಿದಂತೆ ಇತರೆ ಎಲ್ಲ ಪಕ್ಷಗಳೂ ಅದಕ್ಕೆ ಹೊಣೆಯಾಗುತ್ತವೆ ಎಂದರು.

ರಮ್ಯಾ ಸ್ಪರ್ಧೆ ವರಿಷ್ಠರ ತೀರ್ಮಾನಕ್ಕೆ
ಮಂಡ್ಯ ವಿಧಾನಸಭಾ ಕ್ಷೇತದಿಂದ ಮಾಜಿ ಸಂಸದೆ ರಮ್ಯಾ ಅವರನ್ನು ಕಣಕ್ಕಿಳಿಸಬೇಕೇ, ಬೇಡವೇ ಎಂಬ ತೀರ್ಮಾನವನ್ನು ಕಾಂಗ್ರೆಸ್ ವರಿಷ್ಠರು ತೆಗೆದುಕೊಳ್ಳುತ್ತಾರೆ. ಸದ್ಯಕ್ಕಂತೂ ಅಂಬರೀಶ್ ಆ ಕ್ಷೇತ್ರದ ಶಾಸಕರಾಗಿದ್ದಾರೆ ಎಂದರು.












Click it and Unblock the Notifications