ಕೊರೊನಾ ವೈರಸ್ ಪ್ರಕರಣ ಇನ್ನೂ ಹೆಚ್ಚುತ್ತದೆ; ಮೈಸೂರಿಗರಿಗೆ ಡಿಸಿ ಎಚ್ಚರಿಕೆ
ಮೈಸೂರು, ಜೂನ್ 09: ಲಾಕ್ ಡೌನ್ ಮತ್ತಷ್ಟು ಸಡಿಲಿಕೆ ಬೆನ್ನಲ್ಲೇ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಮೈಸೂರು ಜಿಲ್ಲೆಯಲ್ಲಿ ಹೆಚ್ಚುತ್ತಿದೆ. ಇಂದು ಮತ್ತೆ ಜಿಲ್ಲೆಯ ಇಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ''ಕೊರೊನಾ ವೈರಸ್ ಪ್ರಕರಣಗಳು ಮುಂದೆ ಇನ್ನೂ ಹೆಚ್ಚಾಗಬಹುದು. ಆದರೆ ಏನೂ ಮಾಡಲು ಆಗುವುದಿಲ್ಲ" ಎಂದಿದ್ದಾರೆ.
Recommended Video
"ಲಾಕ್ಡೌನ್ ಇದ್ದಾಗ ಎಲ್ಲವೂ ನಿಯಂತ್ರಣದಲ್ಲಿತ್ತು. ಅನ್ಲಾಕ್ ಶುರುವಾದ ಮೇಲೆ ಬಸ್, ರೈಲು, ವಿಮಾನ ಎಲ್ಲವೂ ಬಂದು ಹೋಗುತ್ತಿವೆ. ಅಂತರ ರಾಜ್ಯಗಳಿಂದ ಬಂದು ಹೋಗುವವರ ಸಂಖ್ಯೆಯೂ ಹೆಚ್ಚಾಗಿದೆ. ಆದ್ದರಿಂದ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗಬಹುದು. ಹಾಗೆಂದು ಎಷ್ಟು ದಿನ ಅಂತ ಲಾಕ್ಡೌನ್ ಮಾಡಲು ಸಾಧ್ಯ? ಜೀವನವೂ ನಡೆಯಬೇಕಲ್ವ?" ಎಂದರು.
ಇಂದು ಮೈಸೂರಿನಲ್ಲಿ ಎರಡು ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ಬಂದಿವೆ. ನಂಜನಗೂಡು ನಿವಾಸಿಯೊಬ್ಬರು ವಿದ್ಯಾಭ್ಯಾಸಕ್ಕಾಗಿ ದೆಹಲಿಗೆ ಹೋಗಿದ್ದರು. ಈಗ ವಾಪಸ್ಸಾಗಿದ್ದಾರೆ, ಅವರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ಮತ್ತೊಬ್ಬ ಇಟ್ಟಿಗೆಗೂಡು ನಿವಾಸಿ ಕಾರ್ಯನಿಮಿತ್ತ ತಮಿಳುನಾಡಿಗೆ ಹೋಗಿ ಬಂದಿದ್ದರು. ಅವರಿಗೂ ಸೋಂಕು ದೃಢಪಟ್ಟಿದೆ ಎಂದು ತಿಳಿಸಿದರು.

ಆಷಾಡ ಮಾಸ ಸಮೀಪಿಸುತ್ತಿದ್ದು, ಚಾಮುಂಡಿ ಬೆಟ್ಟದಲ್ಲಿ ಯಾವ ರೀತಿಯ ಕ್ರಮ ಕೈಗೊಳ್ಳಬೇಕೆಂದು ಮುಂದಿನ ವಾರ ನಿರ್ಧರಿಸಲಾಗುತ್ತದೆ. ನಿನ್ನೆಯಿಂದ ದೇವರ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ವಾರ ಪೂರ್ತಿ ಜನರು ದೇಗುಲಕ್ಕೆ ಬಂದಾಗ ಯಾವ ರೀತಿ ನಡೆದುಕೊಳ್ಳುತ್ತಾರೆ ಎಂಬುದನ್ನು ಗಮನಿಸಲಾಗುವುದು. ಎಲ್ಲಕ್ಕಿಂತ ಪ್ರಮುಖವಾಗಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವಿಚಾರದಲ್ಲಿ ಜನರು ಹೇಗಿರುತ್ತಾರೆ ಎಂಬುದನ್ನು ಗಮನಿಸಿ ಆ ಆಧಾರದ ಮೇಲೆ ಆಷಾಡ ಶುಕ್ರವಾರದಲ್ಲಿ ಏನು ಮಾಡಬೇಕೆಂದು ನಿರ್ಧರಿಸುತ್ತೇವೆ. ಈ ಸಂಬಂಧ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳ ಜೊತೆಯೂ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.











Click it and Unblock the Notifications