ವಿಶ್ರಾಂತಿಯಲ್ಲಿರುವ ಡಿಸಿ ಶಿಖಾ ಟೀ ಮಾಡಿಕೊಟ್ಟರು
ಮೈಸೂರು: ವರ್ಗಾವಣೆ ಬಳಿಕ ಹುಣಸೂರು ರಸ್ತೆಯ ಜಲ್ಲಾದರ್ಶಿನಿ ಅತಿಥಿ ಗೃಹ ಪಕ್ಕದಲ್ಲಿರುವ ಜಿಲ್ಲಾಧಿಕಾರಿಗಳ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ, ಅವರನ್ನು ಭೇಟಿ ಮಾಡಲು ತೆರಳಿದ್ದ ಪತ್ರಕರ್ತರು ಹಾಗೂ ಹಿತೈಷಿಗಳಿಗೆ ಸ್ವತಃ ತಾವೇ ಟೀ ಮಾಡಿಕೊಟ್ಟು, ಸ್ವಾಗತ ಕೋರಿದರು.
ಒಂದೆಡೆ ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಅವರ ವರ್ಗಾವಣೆ ಖಂಡಿಸಿ ವಿವಿಧ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸುತ್ತಿವೆ. ಮತ್ತೊಂದೆಡೆ ತಾನು ಜಿಲ್ಲಾಧಿಕಾರಿ ಎಂಬುದನ್ನೂ ಮರೆತು, ಅತಿಥಿಗಳಿಗೆ ತಾವೇ ಸ್ವತಃ ಟೀ ಮಾಡಿ ನೀಡುವ ಮೂಲಕ ಶಿಖಾ ಸರಳತೆಯನ್ನು ಮೆರೆದಿದ್ದಾರೆ.

ಮೈಸೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದಷ್ಟು ದಿನ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ ಶಿಖಾ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಕಳಂಕವಿಲ್ಲದೆ ಕರ್ತವ್ಯ ನಿರ್ವಹಿಸಿದ ಅವರಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ತೃಪ್ತಿಯಿದೆ.
ಅಷ್ಟಕ್ಕೂ ಸಿಎಂ ಪರಮಾಪ್ತನ ವಿರುದ್ಧದ ಮೊಕದ್ದಮೆ ವಾಪಸ್ ತೆಗೆದುಕೊಳ್ಳದಿದ್ದಾಗಲೇ ಶಿಖಾ ವರ್ಗಾವಣೆ ಆಗುತ್ತದೆ ಎಂಬ ಸಂಶಯವಿತ್ತು. ಅದೀಗ ನಿಜವಾಗಿದೆ.

ಎಲ್ಲವನ್ನೂ ಗಮನಿಸುತ್ತಿರುವ ಸಾರ್ವಜನಿಕರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವರ್ಗಾವಣೆ ಕ್ರಮವನ್ನು ವಿರೋಧಿಸಿ ವಿವಿಧ ಸಂಘಟನೆಗಳು ಗುರುವಾರ ಪ್ರತ್ಯೇಕವಾಗಿ ಪ್ರತಿಭಟನೆ ಕೂಡ ನಡೆಸಿವೆ.
ಜಿಲ್ಲಾ ನ್ಯಾಯಾಲಯದ ಮುಂಭಾಗದಲ್ಲಿರುವ ಗಾಂಧಿ ಪ್ರತಿಮೆ ಎದುರು ಜಮಾವಣೆಗೊಂಡ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಶಿಖಾ ಅವರ ವರ್ಗಾವಣೆಯನ್ನು ಖಂಡಿಸಿ, ಪ್ರತಿಭಟಿಸಿದ್ದಾರೆ.

3 ವರ್ಷಗಳಿಂದ ಜಿಲ್ಲಾಧಿಕಾರಿ ಶಿಖಾ ಅವರು ಉತ್ತಮ ಆಡಳಿತ ನೀಡಿದ್ದಾರೆ. ಮೂರು ವರ್ಷದ ದಸರಾವನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಅಂತಹವರನ್ನು ವರ್ಗಾವಣೆ ಮಾಡಿರುವುದು ಸರಿಯಲ್ಲ ಎಂದು ಆರೋಪಿಸಿ ಕರ್ನಾಟಕ ಜನಪರ ಶಕ್ತಿ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಸರಕಾರದ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.












Click it and Unblock the Notifications