ನಿರಾಳವಾಗಿದ್ದ ಅರಮನೆ ನಗರಿಯಲ್ಲಿ ಮತ್ತೆ ಕೇಸ್; ಸಹಕಾರ ಕೇಳಿದ ಡಿಸಿ
ಮೈಸೂರು, ಮೇ 30: ಜಿಲ್ಲೆಯಲ್ಲಿ ಹೋಂ ಕ್ವಾರೆಂಟೈನ್ ನಲ್ಲಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಕೊರೊನಾವನ್ನು ಸಂಪೂರ್ಣವಾಗಿ ದೂರವಿಡಲು ಜನತೆಯ ಮತ್ತು ಸಮಾಜದ ಸಹಕಾರ ಇನ್ನೂ ಹೆಚ್ಚು ಬೇಕಾಗಿದೆ ಎಂದು ತಿಳಿಸಿದ್ದಾರೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್.
ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, "ಮೊದಲು ವರದಿಯಾಗಿದ್ದ 90 ಸೋಂಕು ಪ್ರಕರಣಗಳು ಗುಣಮುಖವಾಗಿವೆ. ನಿನ್ನೆ ಪಾಸಿಟಿವ್ ಬಂದ ಇನ್ನೊಬ್ಬ ವ್ಯಕ್ತಿ ಐರ್ಲ್ಯಾಂಡ್ ನಿಂದ ಬಂದಿದ್ದವರು. ಆ ವ್ಯಕ್ತಿ ಆಂಬುಲೆನ್ಸ್ ನಲ್ಲಿ ಬೆಂಗಳೂರು ಏರ್ ಪೋರ್ಟ್ ನಿಂದ ಆಸ್ಪತ್ರೆಗೆ ಬಂದಿದ್ದರು. ಇಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಐಸೊಲೇಶನ್ ವಾರ್ಡ್ ನಲ್ಲಿ ಚಿಕಿತ್ಸೆಯಲ್ಲಿದ್ದಾಗ ಪಾಸಿಟಿವ್ ಬಂದಿದೆ" ಎಂದು ಮಾಹಿತಿ ನೀಡಿದರು.

ಸೋಂಕಿತ ವ್ಯಕ್ತಿ ಬೆಂಗಳೂರಿಗೆ ಶಿಫ್ಟ್
"ಆ ಸೋಂಕಿತ ವ್ಯಕ್ತಿಯನ್ನು ಕ್ಲಿನಿಕಲ್ ಆಗಿ ಇಲ್ಲಿನ ಖಾಸಗಿ ಆಸ್ಪತ್ರೆಯ ವೈದ್ಯರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಸೂಪರ್ ಸ್ಪೆಶಾಲಿಟಿ ಕೇರ್ ಬೇಕಾಗುತ್ತದೆ ಎಂದು ಅಲ್ಲಿಗೆ ಶಿಫ್ಟ್ ಮಾಡಿದ್ದಾರೆ. ಪಾಸಿಟಿವ್ ನಮ್ಮ ಜಿಲ್ಲೆಯಲ್ಲೇ ದಾಖಲಾಗಿದೆ. ಈಗ ಚಿಕಿತ್ಸೆ ಮಾತ್ರ ಬೆಂಗಳೂರಿನಲ್ಲಿ ನಡೆಯುತ್ತಿದೆ" ಎಂದು ಸ್ಪಷ್ಟಪಡಿಸಿದರು.

"ಹೋಂ ಕ್ವಾರಂಟೈನ್ ನಲ್ಲಿರುವವರ ಸಂಖ್ಯೆ ಹೆಚ್ಚಿದೆ"
"ಜಿಲ್ಲೆಯಲ್ಲಿ ಇನ್ನೂ ಕೆಲವರ ಪರೀಕ್ಷೆ ನಡೆದಿದೆ. ಇಂದು ಫಲಿತಾಂಶ ಬರಬಹುದು. ಹೋಂ ಕ್ವಾರೆಂಟೈನ್ ನಲ್ಲಿರುವವರ ಸಂಖ್ಯೆ ಜಾಸ್ತಿ ಆಗುತ್ತಿದೆ. 500ಕ್ಕೂ ಹೆಚ್ಚು ಮಂದಿ ಇದ್ದಾರೆ. ಇನ್ಸಟಿಟ್ಯೂಶನ್ ನಲ್ಲಿ ಇರುವವರ ಸಂಖ್ಯೆ ಕಡಿಮೆ ಆಗಿದೆ. ಯಾಕೆಂದರೆ ಒಂದು ವಾರ ಇದ್ದು ಟೆಸ್ಟ್ ಮಾಡಿ ನೆಗೆಟಿವ್ ಬಂದರೆ ಹೋಂ ಕ್ವಾರೆಂಟೈನ್ ಮಾಡಬಹುದು ಎಂದಿರುವುದರಿಂದ ಹೋಂ ಕ್ವಾರೆಂಟೈನ್ ನಲ್ಲಿರುವವರ ಸಂಖ್ಯೆ ಹೆಚ್ಚಾಗಿದೆ" ಎಂದು ತಿಳಿಸಿದ್ದಾರೆ.

"ಕ್ವಾರಂಟೈನ್ ನಲ್ಲಿರುವವರ ಮೇಲೂ ನಿಗಾಯಿರಲಿ"
"ನಮ್ಮ ತಂಡಗಳಿಗೂ ತರಬೇತಿ ನೀಡಿದ್ದೇವೆ, ಗ್ರಾಮಾಂತರ ಪ್ರದೇಶಗಳಿಗೂ ಅಕ್ಕಪಕ್ಕದ ಮನೆಯಲ್ಲಿರುವವರು, ಬಡಾವಣೆಯಲ್ಲಿರುವವರು ಸ್ವಲ್ಪ ನಿಗಾ ಇಡಬೇಕಾಗಲಿದೆ. ಯಾರು ಕ್ವಾರೆಂಟೈನ್ ನಲ್ಲಿದ್ದಾರೆ ಅವರು ತಪ್ಪಿಸಿಕೊಂಡು ಓಡಾಡ್ತಿದ್ದಾರಾ? ಕ್ವಾರೆಂಟೈನ್ ನಲ್ಲಿ ಇದ್ದಾರಾ ಎನ್ನುವುದು ಮುಖ್ಯ. ಈಗ ಜನರ ಮತ್ತು ಸಮಾಜದ ಸಹಕಾರ ಇನ್ನೂ ಹೆಚ್ಚಾಗುವಂತಹ ಸಮಯ ಬರುತ್ತಿದೆ. ಈಗ ಎಲ್ಲ ಕಡೆ ಸಡಿಲಿಕೆ ಆರಂಭವಾಗಿ ಓಡಾಟ ಆರಂಭವಾಗಿದ್ದು, ಜಾಗ್ರತವಾಗಿರಬೇಕಿದೆ" ಎಂದರು.

"100% ರಾಜ್ಯದಲ್ಲಿ ಅನ್ವಯವಾಗಬೇಕು ಎನ್ನುವುದೇನಿಲ್ಲ"
ಲಾಕ್ ಡೌನ್ ಕುರಿತು ಪ್ರತಿಕ್ರಿಯಿಸಿದ ಅವರು, "ಸಡಿಲಿಕೆ ನಿಯಮಾವಳಿಗಳು ಕೇಂದ್ರದಿಂದ ಬರುತ್ತವೆ. ಕೇಂದ್ರದಿಂದ ಏನು ಬರಲಿದೆ ಅದು 100% ರಾಜ್ಯದಲ್ಲಿ ಅನ್ವಯವಾಗಬೇಕು ಎನ್ನುವುದೇನಿಲ್ಲ. ರಾಜ್ಯ ಸರ್ಕಾರದಿಂದ ನಮಗೆ ಅನುಕೂಲವಾಗುವಂತಹ, ಪ್ರತ್ಯೇಕವಾದ ಕೆಲವು ವಿಚಾರಗಳನ್ನಿಟ್ಟುಕೊಂಡು ರಾಜ್ಯ ಸರ್ಕಾರದಲ್ಲೂ ತೀರ್ಮಾನ ತೆಗೆದುಕೊಳ್ಳುತ್ತಾರೆ. ಬಹುಶಃ ಒಂದೆರಡು ದಿನಗಳು ಬೇಕಾಗಬಹುದು" ಎಂದರು.












Click it and Unblock the Notifications