ಸಿದ್ದರಾಮಯ್ಯ ಬರಲಿ, ಎಲ್ಲಾ ಹೇಳುತ್ತೇನೆ: ಪುಟ್ಟರಂಗ ಶೆಟ್ಟಿ
Recommended Video

ಮೈಸೂರು, ಸೆಪ್ಟೆಂಬರ್. 14: ದಸರಾ ಮಹೋತ್ಸವ 2018ರ ಹಿನ್ನೆಲೆಯಲ್ಲಿ ಇಂದು ಶುಕ್ರವಾರ ಬೆಳಗ್ಗೆ ದಸರಾ ಕಾರ್ಯಕಾರಿ ಸಮಿತಿ ಸಭೆ ಆರಂಭವಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಯುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಸಭೆಯ ಅಧ್ಯಕ್ಷತೆ ವಹಿಸಿದ್ದಾರೆ.
ಇದೇ ಸಂದರ್ಭದಲ್ಲಿ 2018ರ ದಸರಾ ಪೋಸ್ಟರ್ ಹಾಗೂ ವೆಬ್ ಸೈಟ್ ಲೋಕಾರ್ಪಣೆಯಾಗಿದ್ದು, ಸಚಿವ ಜಿಟಿಡಿ ವೆಬ್ಸೈಟ್ ಉದ್ಘಾಟಿಸಿದರು.
ಸಭೆ ಆರಂಭದಲ್ಲೇ ಚಾಮರಾಜನಗರ ಜಿಲ್ಲೆಯ ಸಚಿವರನ್ನು ದಸರಾ ಕಾರ್ಯಕಾರಿ ಸಮಿತಿ ಉಪಾಧ್ಯಕ್ಷರನ್ನಾಗಿ ಮಾಡಿ ಎಂದು ಸಚಿವ ಪುಟ್ಟರಂಗಶೆಟ್ಟಿ ಬೇಡಿಕೆಯಿಟ್ಟರು. ಇಲ್ಲವಾದರೆ ನಮ್ಮನ್ನು ಸಭೆಗೆ ಯಾಕೆ ಕರೆಯುತ್ತೀರಿ ಎಂದು ಅಸಮಾಧಾನ ಹೊರಹಾಕಿದರು.

ಸಭೆಯಿಂದ ಹೊರನಡೆದ ಪುಟ್ಟರಂಗ ಶೆಟ್ಟಿ
ಸಭೆ ಆರಂಭವಾದಾಗಿನಿಂದಲೂ ತನ್ನ ಮಾತನ್ನು ಯಾರು ಪರಿಗಣಿಸಲಿಲ್ಲವೆಂದು ಆಕ್ರೋಶಗೊಂಡು ಸಚಿವ ಪುಟ್ಟರಂಗ ಶೆಟ್ಟಿ ಸಭೆಯಿಂದ ಹೊರ ನಡೆದರು. ಶಿಷ್ಟಾಚಾರದಂತೆ ನನಗೆ ಕಾರ್ಯಕಾರಿ ಸಮಿತಿಯಲ್ಲಿ ಉಪಾಧ್ಯಕ್ಷ ಸ್ಥಾನ ನೀಡಬೇಕಿತ್ತು.
ಆದರೆ ನನ್ನ ಬದಲಾಗಿ ಸಚಿವ ಸಾ.ರಾ.ಮಹೇಶ್ ಅವರಿಗೆ ನೀಡಿದ್ದಾರೆ. ಎಲ್ಲವನ್ನೂ ಅವರೇ ಮಾಡಿಕೊಳ್ಳಲಿ. ಮಾಜಿ ಸಿಎಂ ಸಿದ್ದರಾಮಯ್ಯ ಬರಲಿ ಎಲ್ಲಾ ಹೇಳುತ್ತೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ ದಸರ ವೆಬ್ ಸೈಟ್ ನಲ್ಲಿ ತಮ್ಮ ಫೋಟೋ ಹಾಗೂ ಹೆಸರು ಇಲ್ಲದೇ ಇರುವುದಕ್ಕೆ ಗರಂ ಆದ ಪುಟ್ಟರಂಗ ಶೆಟ್ಟಿ, ಜಿ.ಟಿ ದೇವೇಗೌಡರ ನಂತರ ನಾನೇ ಹಿರಿಯ. ಹೀಗಿದ್ದರೂ ಕೂಡ ವೆಬ್ ಸೈಟ್ ನಲ್ಲಿ ನನ್ನ ಫೋಟೋ ಇಲ್ಲ. ಈ ಕುರಿತಾಗಿ ಸಂಜೆ ತನಕ ಸಮಯ ನೀಡುವೆ, ಆಗಿರುವ ತಪ್ಪನ್ನು ಸರಿ ಪಡಿಸುವುದಕ್ಕೆ ಅವಕಾಶ ನೀಡುವೆ.
ಇಲ್ಲದೇ ಹೋದರೆ ಮುಂದೆ ಏನು ಮಾಡಬೇಕು ಅಂತ ನನಗೆ ಗೊತ್ತಿದೆ ಅಂತ ಅರ್ಧಕ್ಕೆ ಸಭೆಯಿಂದ ಹೊರನಡೆದರು.












Click it and Unblock the Notifications