ಹುಲಿ ಹಿಡಿಯಲು ಹೋದಾಗ ನಾಪತ್ತೆಯಾದ ದಸರಾ ಆನೆ ಅಶೋಕ
ಮೈಸೂರು, ಡಿಸೆಂಬರ್ 5: ಕಳೆದ ಕೆಲವು ದಿನಗಳಿಂದ ಬೆಂಬಿಡದೆ ಹಸುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿಯನ್ನು ಸೆರೆ ಹಿಡಿಯಲು ದಸರಾ ಆನೆಗಳ ಜತೆ ತೆರಳಿದ ಅಧಿಕಾರಿಗಳು ಸದ್ಯ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು, ಹುಲಿ ಹಿಡಿಯಲು ಹೋಗಿದ್ದ ದಸರಾ ಆನೆ ಅಶೋಕ ಇದೀಗ ನಾಪತ್ತೆಯಾಗಿದೆ. ಅಂದರೆ ಆಪರೇಷನ್ ಟೈಗರ್ ಮಾಡಲು ಹೋದವರು ಆಪರೇಷನ್ ಆನೆಯ ಬಲೆಗೂ ಬಿದ್ದಂತಾಗಿದೆ. ಎಚ್. ಡಿ ಕೋಟೆಯ ಅಂತರಸಂತೆ ಗ್ರಾಮದಲ್ಲಿ ಹಸುಗಳ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದ್ದ ಹುಲಿಯನ್ನು ಹಿಡಿಯಲು ಪಟಾಕಿಗಳ ಜತೆ, ದಸರಾ ಆನೆ ಅರ್ಜುನನ್ನೂ ಸೇರಿ ನಾಲ್ಕು ಆನೆಗಳನ್ನು ಕರೆದೊಯ್ಯಲಾಗಿತ್ತು.

ಹುಲಿ ಶೋಧಕ್ಕೆ ನೆರವಾಗಲು ಪಟಾಕಿ ಹೊಡೆದಾಗ, ಹೆದರಿದ ಅಶೋಕ ಎಂಬ ಹೆಸರಿನ ಆನೆ, ಮಾವುತನನ್ನು ಕೆಡವಿ ಸ್ಥಳದಿಂದ ಕಾಲ್ಕಿತ್ತಿದೆ. ಸಣ್ಣಪುಟ್ಟ ಗಾಯಗಳಿಂದ ಮಾವುತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಈಗ ಅರಣ್ಯ ಇಲಾಖೆಯೂ ಹುಲಿ ಕಾರ್ಯಾಚರಣೆ ನಿಲ್ಲಿಸಿ ಕಾಡಿನೊಳಗೆ ತಪ್ಪಿಸಿಕೊಂಡಿರುವ ಅಶೋಕ ಆನೆ ಹುಡುಕುವ ಕಾರ್ಯಚರಣೆ ಪ್ರಾರಂಭಿಸಿದೆ. ಸದ್ಯ ಹುಲಿ ಹಿಡಿಯಲು ಹೋದವರು ಆನೆ ಹುಡುಕುವ ಸ್ಥಿತಿ ಎದುರಾಗಿದೆ.












Click it and Unblock the Notifications