ದಸರಾ ಮಹೋತ್ಸವ: ಗಜಪಡೆ ಸುರಕ್ಷತೆಗೆ ಸಿಸಿ ಕ್ಯಾಮೆರಾ 'ಕಣ್ಗಾವಲು'
ಮೈಸೂರು, ಆಗಸ್ಟ್ 23: ನಾಡ ಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ವಿವಿಧ ಆನೆ ಶಿಬಿರಗಳಿಂದ ಆಗಮಿಸಿ ಅರಮನೆಯ ಆವರಣದಲ್ಲಿ ಬೀಡು ಬಿಟ್ಟಿರುವ ಅಭಿಮನ್ಯು ನೇತೃತ್ವದ ಗಜಪಡೆಯ ಮೇಲೆ ಸಿಸಿ ಕ್ಯಾಮರಾದ ಕಣ್ಗಾವಲಿಟ್ಟಿದ್ದು, ಅಪರಿಚಿತರು ಆನೆಗಳ ಸಮೀಪ ಹೋಗದಂತೆ ಕಟ್ಟೆಚ್ಚರ ವಹಿಸಲಾಗಿದೆ.
ಈ ನಡುವೆ ಅರಮನೆಗೆ ಆಗಮಿಸುವ ಪ್ರವಾಸಿಗರಲ್ಲಿ ಹಲವರು ದಸರಾ ಗಜಪಡೆಯನ್ನು ಕಣ್ತುಂಬಿಕೊಳ್ಳಲು ಬಯಸುವುದರಿಂದ ಆನೆಗಳ ಬಳಿ ನುಸುಳುವ ಸಾಧ್ಯತೆ ಇದೆ. ಹಾಗಾಗಿ ಆನೆಗಳ ಭದ್ರತೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ.
Mysuru Dasara 2022: ಮೈಸೂರು ದಸರಾ ; 110 ಕಿ. ಮೀ. ದೀಪಾಲಂಕಾರ
ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾದ ಆನೆಗಳಿಗೆ ಎಲ್ಲಿಲ್ಲದ ಮಹತ್ವವಿದ್ದು, ಅವುಗಳ ಪಾಲನೆ ಮತ್ತು ಪೋಷಣೆಗೆ ಹೆಚ್ಚಿನ ಗಮನ ನೀಡಿದಂತೆ ಆನೆಗಳ ರಕ್ಷಣೆಗೂ ಅರಣ್ಯ ಇಲಾಖೆ ಆದ್ಯತೆ ನೀಡಿದೆ. ಅರಮನೆಯ ಆವರಣದಲ್ಲಿ ಈಗಾಗಲೇ ಮೊದಲ ತಂಡದಲ್ಲಿ ಆಗಮಿಸಿರುವ ಅಭಿಮನ್ಯು ನೇತೃತ್ವದ 9 ಆನೆಗಳಿಗೆ ಪೌಷ್ಟಿಕ ಆಹಾರ ನೀಡಿ ಅಣಿಗೊಳಿಸಲಾಗುತ್ತಿದ್ದು, ಅವುಗಳ ಭದ್ರತೆಗೆ ಆಯಕಟ್ಟಿನ ಸ್ಥಳದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಚಲನ-ವಲನಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.
ಅಭಿಮನ್ಯು, ಚೈತ್ರ ಆನೆಗೆ ವಿಶೇಷ ಕಾಳಜಿ
ಪ್ರತಿವರ್ಷದಂತೆ ಚಿನ್ನದ ಅಂಬಾರಿ ಹೊರುವ ಆನೆಯನ್ನು ಪ್ರತ್ಯೇಕವಾಗಿ ಇರಿಸುವ ಪದ್ಧತಿ ಮುಂದುವರಿಸಲಾಗಿದ್ದು, ಅಂಬಾರಿ ಆನೆ ಅಭಿಮನ್ಯು ಹಾಗೂ ಕುಮ್ಕಿ ಆನೆ ಚೈತ್ರಳನ್ನು ಪ್ರತ್ಯೇಕವಾಗಿ ಶೆಡ್ ನಿರ್ಮಿಸಿ ಕಟ್ಟಿ ಹಾಕಲಾಗಿದೆ. ಅರಮನೆಯ ಆವರಣದಲ್ಲಿರುವ ಕೋಡಿ ಸೋಮೇಶ್ವರ ದೇವಾಲಯದ ಬಳಿ ಅಭಿಮನ್ಯು ಹಾಗೂ ಚೈತ್ರ ಆನೆಯನ್ನು ಇರಿಸಲಾಗಿದೆ. ಹಾಗಾಗಿ ಇವೆರಡು ಆನೆಗಳ ಮೇಲೆ ಹೆಚ್ಚು ಕಾಳಜಿ ವಹಿಸಲಾಗಿದೆ.
ದಸರಾ ಜಂಬೂಸವಾರಿಗೆ ಗಜಪಡೆಗಳ ತಯಾರಿ ಆರಂಭ!
ವಿಶೇಷ ಬ್ಯಾಟರಿಗಳ ವ್ಯವಸ್ಥೆ
ಆಹಾರ ತಯಾರಿಸುವ ಸ್ಥಳ, ಆಹಾರ ನೀಡುವ ಸ್ಥಳ, ಅಂಬಾರಿ ಆನೆ ಇರುವ ಸ್ಥಳ, ಮಾವುತರ ಶೆಡ್ ಬಳಿ, ಒಣ ಹುಲ್ಲು ಸಂಗ್ರಹ ಘಟಕ ಹಾಗೂ ಎರಡು ಸ್ಥಳದಲ್ಲಿ ಬೀಡು ಬಿಟ್ಟಿರುವ 7 ಆನೆಗಳ ಚಿತ್ರಣವೂ ಕಾಣುವಂತೆ ಒಟ್ಟು 8 ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಗಜಪಡೆಯ ಮೇಲೆ ಇರುವ ಸಿಸಿ ಕ್ಯಾಮರಾಗಳ ಹದ್ದಿನ ಕಣ್ಣಿನಲ್ಲಿ ರೆಕಾರ್ಡ್ ಆಗುವ ದೃಶ್ಯಾವಳಿಯು ಒಂದು ತಿಂಗಳವರೆಗೂ ದಾಖಲಾಗುವ ಸಾಮರ್ಥ್ಯ ಹೊಂದಿದೆ. ಅಲ್ಲದೆ ವಿದ್ಯುತ್ ಕಡಿತವಾದರೆ ರೆಕಾರ್ಡಿಂಗ್ ಸ್ಥಗಿತಗೊಳ್ಳಬಹುದೆಂಬ ಆತಂಕದಿಂದ ಪ್ರತ್ಯೇಕ ಬ್ಯಾಟರಿ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಆನೆಗಳ ಚಲನವಲನವನ್ನು ಸಂಪೂರ್ಣವಾಗಿ ದಾಖಲೀಕರಿಸಲಾಗುತ್ತಿದೆ.
ಆನೆಗಳ ಮೇಲೆ ದಿನದ 24 ಗಂಟೆಯೂ ಸೂಕ್ಷ್ಮವಾಗಿ ಗಮನವಿಡಲು ಸಿಸಿ ಕ್ಯಾಮರಾ ಅನುಕೂಲವಾಗಲಿದೆ. ರೆಕಾರ್ಡಿಂಗ್ ಸ್ಥಗಿತಗೊಳ್ಳದಂತೆ ಹೆಚ್ಚುವರಿ ಬ್ಯಾಟರಿ ವ್ಯವಸ್ಥೆ ಮಾಡಲಾಗಿದೆ. ಮೊಬೈಲ್ ಮೂಲಕವೂ ಸಿಸಿ ಕ್ಯಾಮರಾ ದೃಶ್ಯಾವಳಿ ಗಮನಿಸಬಹುದಾಗಿದೆ" ಎಂದು ಡಿಸಿಎಫ್ ಡಾ.ವಿ.ಕರಿಕಾಳನ್ ತಿಳಿಸಿದ್ದಾರೆ.
ಆನೆಗಳಿಗೆ ವಿಶೇಷ ಸೌಲಭ್ಯ
ಮೈಸೂರು ದಸರಾದ ಆರಂಭ ಕಾಲದಿಂದಲೂ ಆನೆಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ಹೀಗಾಗಿಯೇ ಆನೆಗಳನ್ನು ಕರೆತಂದು ಅವುಗಳಿಗೆ ಅರಮನೆ ಬಳಿ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಟ್ಟು ಬಳಿಕ ಪ್ರತಿನಿತ್ಯ ತಾಲೀಮು ನಡೆಸಿ ದಸರಾ ಜಂಬೂಸವಾರಿಗೆ ತಯಾರಿಗೊಳಿಸುವುದು ಮೊದಲಿನಿಂದಲೂ ನಡೆದು ಬಂದಿದೆ. ಇಲ್ಲಿಯೇ ಆನೆಗಳಿಗೆ ವಿಶೇಷ ತಿಂಡಿ ಮತ್ತು ಮಜ್ಜನದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಆನೆಗಳ ಮಜ್ಜನಕ್ಕೆ ಅನುಕೂಲವಾಗುವಂತೆ ಬೃಹತ್ ವಿಸ್ತಾರದ ತೊಟ್ಟಿಯನ್ನು ನಿರ್ಮಿಸಲಾಗಿದೆ. ಇಲ್ಲಿಯೇ ದಿನನಿತ್ಯ ಆನೆಗಳ ಮಹಾಮಜ್ಜನ ನಡೆಯುತ್ತದೆ
ಗೋಲ್ಡ್ ಕಾರ್ಡ್ಗಳನ್ನು ಮುದ್ರಿಸಲು ಸರಕಾರಕ್ಕೆ ಮನವಿ
ವಿಶ್ವವಿಖ್ಯಾತ ದಸರೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ನಾಡಹಬ್ಬಕ್ಕೆ ಸಿದ್ಧತೆಗಳು ಆರಂಭವಾಗಿದೆ. ಆ ನಿಟ್ಟಿನಲ್ಲಿ ದಸರಾ ಗೋಲ್ಡ್ ಕಾರ್ಡ್ಗಳನ್ನು ಆದಷ್ಟು ಬೇಗ ವಿತರಿಸುವಂತೆ ಕರ್ನಾಟಕ ಟೂರಿಸಂ ಸೊಸೈಟಿ ಸರಕಾರವನ್ನು ಒತ್ತಾಯಿಸಿದೆ.
ಕೆಟಿಎಸ್ ಪರವಾಗಿ ನಾವು 1000 ಗೋಲ್ಡ್ ಕಾರ್ಡ್ಗಳನ್ನು ಮುದ್ರಿಸಲು ಸರಕಾರಕ್ಕೆ ಮನವಿ ಮಾಡಿದ್ದೇವೆ. ಅವುಗಳಲ್ಲಿ 500 ಅನ್ನು ಕೆಟಿಎಸ್ ಸದಸ್ಯರಿಗೆ ಪ್ರತ್ಯೇಕವಾಗಿ ಮೀಸಲಿಡಲು ವಿನಂತಿಸಿದ್ದೇವೆ. ಈ ಹಬ್ಬದ ಅವಧಿಯಲ್ಲಿ ಗೋಲ್ಡ್ ಕಾರ್ಡ್ಗಳನ್ನು ಮಾರಾಟ ಮಾಡುವುದು ಉತ್ತಮ ಆದಾಯದ ಮೂಲವಾಗುತ್ತದೆ. ಅಲ್ಲದೆ ಸೆಪ್ಟೆಂಬರ್ 1 ರಿಂದ ಅಕ್ಟೋಬರ್ 31 ರವರೆಗೆ ಇತರ ರಾಜ್ಯಗಳಿಂದ ಮೈಸೂರಿಗೆ ಪ್ರವೇಶಿಸುವ ಪ್ರವಾಸಿ ವಾಹನಗಳಿಗೆ ಅಂತರ ರಾಜ್ಯ ಪರವಾನಗಿ ಶುಲ್ಕವನ್ನು ಮನ್ನಾ ಮಾಡಿದರೆ ಅನೇಕ ಅಂತಾರಾಜ್ಯ ಪ್ರವಾಸಿಗರನ್ನು ಮೈಸೂರಿನತ್ತ ಸೆಳೆಯಬಹುದು" ಎಂದು ಕರ್ನಾಟಕ ಪ್ರವಾಸೋದ್ಯಮ ಸೊಸೈಟಿ ಸಂಸ್ಥಾಪಕ ನಿರ್ದೇಶಕ ಬಿ.ಎಸ್.ಪ್ರಶಾಂತ್ ತಿಳಿಸಿದ್ದಾರೆ.