ದಸರಾ ಉತ್ಸವ: ಎರಡನೇ ಹಂತದಲ್ಲಿ ಅರಮನೆ ಪ್ರವೇಶಕ್ಕೆ ಸಜ್ಜಾದ 5 ಆನೆಗಳು
ಮೈಸೂರು, ಸೆಪ್ಟೆಂಬರ್, 02: ಮೈಸೂರಿನಲ್ಲಿ ದಸರಾ ಮಹೋತ್ಸವಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಮೊದಲ ಹಂತದಲ್ಲಿ 9 ಆನೆಗಳು ಅರಮನೆ ಪ್ರವೇಶಿಸಿದ್ದು, ಈ ವಾರದಲ್ಲಿ ಎರಡನೇ ಹಂತದಲ್ಲಿ 5 ಆನೆಗಳು ಅರಮನೆ ಪ್ರವೇಶಿಸಲಿವೆ.
ಜಂಬೂಸವಾರಿಯೇ ದಸರಾದ ಪ್ರಮುಖ ಆಕರ್ಷಣೆ ಆಗಿದೆ. ಜಂಬೂಸವಾರಿಯನ್ನು ಕಣ್ತುಂಬಿಕೊಳ್ಳಲು ರಾಜ್ಯ, ದೇಶ-ವಿದೇಶದಿಂದ ಲಕ್ಷಾಂತರ ಜನರು ಮೈಸೂರಿಗೆ ಆಗಮಿಸುತ್ತಾರೆ. ಈ ನಿಟ್ಟಿನಲ್ಲಿ ಅರಮನೆಯಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಆನೆಗಳಿಗೆ ತಾಲೀಮು ಶುರುವಾಗಿದೆ. ನಿತ್ಯ ಬೆಳಗ್ಗೆ, ಸಂಜೆ ಗಜಪಡೆಗಳು ಅರಮನೆಯಿಂದ ಬನ್ನಿಮಂಟದವರೆಗೂ ತಾಲೀಮು ನಡೆಸುತ್ತಿವೆ. ನಿತ್ಯ ಒಂದೊಂದು ಆನೆಗೆ ಮರದ ಮೂಟೆ ಹಾಗೂ ಮರದ ಅಂಬಾರಿ ಕಟ್ಟಿ ತಾಲೀಮು ನಡೆಸಲಾಗುತ್ತಿದೆ. ಈ ನಡುವೆ ಅರಮನೆಗೆ ಎರಡನೇ ಹಂತದ ಆನೆಗಳನ್ನು ಸ್ವಾಗತಿಸಲು ಸಿದ್ಧತೆ ಜೋರಾಗಿದೆ. ಈ ತಿಂಗಳ ಮೊದಲ ವಾರದಲ್ಲೇ ಗಜಪಡೆ ಕಾಡಿನಿಂದ ನಾಡಿಗೆ ಆಗಮಿಸಲಿವೆ. ಈಗಾಗಲೇ ಮೊದಲ ತಂಡದಲ್ಲಿ ಅಂಬಾರಿ ಹೊರಲಿರುವ ಅಭಿಮನ್ಯು, ಅರ್ಜುನ, ಗೋಪಾಲಸ್ವಾಮಿ, ಧನಂಜಯ, ಭೀಮ, ಮಹೇಂದ್ರ, ಕಾವೇರಿ, ಚೈತ್ರ, ಲಕ್ಷ್ಮೀ ಆನೆಗಳು ಅರಮನೆ ಪ್ರವೇಶಿಸಿ ಯಶಸ್ವಿಯಾಗಿ ತಾಲೀಮು ನಡೆಸುತ್ತಿವೆ.
2ನೇ ಹಂತದಲ್ಲಿ ಆಗಮಿಸಲಿರುವ ಆನೆಗಳು
ಎರಡನೇ ತಂಡದ 5 ಆನೆಗಳನ್ನು ಸೆಪ್ಟೆಂಬರ್ 7 ಅಥವಾ 8ರಂದು ವಿವಿಧ ಶಿಬಿರಗಳಿಂದ ಅರಮನೆಗೆ ಬರಮಾಡಿಕೊಳ್ಳಲಾಗುತ್ತಿದೆ. ಅದರಲ್ಲಿ ಶ್ರೀರಾಮ, ಗೋಪಿ, ವಿಜಯ, ಪಾರ್ಥ ಸಾರಥಿ ಬರುವುದು ಬಹುತೇಕ ಖಚಿತ ಆಗಿದೆ. ವಿಕ್ರಮ, ಕುಂತಿ ಅಥವಾ ಸುಗ್ರೀವ ಈ ಮೂರಲ್ಲಿ ಒಂದು ಆನೆ ಆಗಮಿಸಲಿದೆ. ಮೊದಲ ತಂಡದಲ್ಲಿನ ಎಲ್ಲಾ ಆನೆಗಳು ತಾಲೀಮು ಸೇರಿದಂತೆ ಎಲ್ಲದಕ್ಕೂ ಉತ್ತಮವಾಗಿ ಸ್ಪಂದಿಸುತ್ತಿವೆ. ಅದೇ ರೀತಿ ಎರಡನೇ ತಂಡದ ಆನೆಗಳು ಇವುಗಳೊಂದಿಗೆ ಹೊಂದಿಕೊಂಡು ಹೋಗುವಂತಾಗಬೇಕು. ಹಾಗಾಗಿ ಅವುಗಳನ್ನೂ ಅರಮನೆ ಆವರಣಕ್ಕೆ ಕರೆತರಲು ಅರಣ್ಯ ಇಲಾಖೆ ಮುಂದಾಗಿದೆ.

ಮರದ ಅಂಬಾರಿ ತಾಲೀಮು
ಸೆಪ್ಟೆಂಬರ್ 5ರಿಂದ ಆನೆಗಳ ಮೇಲೆ ಮರದ ಅಂಬಾರಿ ಹೊರಿಸಿ ಬನ್ನಿಮಂಟಪದವರೆಗೆ ತಾಲೀಮು ನಡೆಸಲು ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಅಭಿಮನ್ಯು ನೇತೃತ್ವದ ಗಜಪಡೆ ಮುಂದಿನ ವಾರದಿಂದ ಮರದ ಅಂಬಾರಿ ಹೊರುವ ತಾಲೀಮು ಆರಂಭಿಸಲಿದೆ. ಅದೇ ರೀತಿ ಗಜಪಡೆಗೆ ಮೂರು ಹಂತದಲ್ಲಿ ಕುಶಾಲತೋಪಿನ ತಾಲೀಮು ನಡೆಸಲಾಗುತ್ತದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಮೊದಲ ಹಂತದ ಕುಶಾಲತೋಪು ತಾಲೀಮು ನಡೆಯಲಿದೆ. 6 ಫಿರಂಗಿಗಳಿಂದ ತಲಾ 3 ಸುತ್ತಿನಂತೆ ಒಟ್ಟು 18 ಸುತ್ತು ಕುಶಾಲತೋಪು ಸಿಡಿಸಲಾಗುತ್ತದೆ. ಬಲರಾಮ ಗೇಟ್ನಿಂದ ಬನ್ನಿಮಂಟಪದವರೆಗೆ ಗಜಪಡೆ ಸಾಗುವ 5 ಕಿಲೋ ಮೀಟರ್ ಹಾದಿಯಲ್ಲಿ ನಾಲ್ಕು ದಿನಗಳ ಮುಂಚಿತವಾಗಿ ದಸರಾ ದೀಪಾಲಂಕಾರ ವ್ಯವಸ್ಥೆ ಕಲ್ಪಿಸಬೇಕು ಎಂದು ಡಿಸಿಎಫ್ ಡಾ.ವಿ.ಕರಿಕಾಳನ್ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
'ದೀಪಾಲಂಕಾರ ಆರಂಭವಾದ ಬಳಿಕ ರಸ್ತೆಯಲ್ಲಿ ಹೆಚ್ಚು ಜನರು ಜಮಾಯಿಸಿ ಟ್ರಾಫಿಕ್ ಜಾಮ್ ಆಗಬಹುದು. ಇದರಿಂದ ಆನೆಗಳಿಗೆ ಕಿರಿಕಿರಿ ಆಗಿ ಗಾಬರಿಗೊಳ್ಳುತ್ತವೆ. ಹಾಗಾಗಿ ಗಜಪಡೆ ಸಾಗುವ ಸಯ್ಯಾಜಿರಾವ್ ರಸ್ತೆಯಲ್ಲಿ ಬೆಳಕಿನ ವ್ಯವಸ್ಥೆ ಕಲ್ಪಿಸಿದರೆ ಅವುಗಳು ಈಗಿನಿಂದಲೇ ಲೈಟಿಂಗ್ಗೆ ಹೊಂದಿಕೊಳ್ಳಲು ಸಹಕಾರಿ ಆಗುತ್ತದೆ' ಎಂದು ಡಾ.ವಿ.ಕರಿಕಾಳನ್ ತಿಳಿಸಿದರು.

ನಾಡಹಬ್ಬ ದಸರಾಗೆ ಸಿದ್ಧತೆಗಳು ಭರದಿಂದ ಸಾಗಿದ್ದು, ಜಂಬೂಸವಾರಿಯ ದಿನದಂದು ಚಿನ್ನದ ಅಂಬಾರಿ ಹೊರುವ ಅಭಿಮನ್ಯುವಿಗೆ ಮರದ ಅಂಬಾರಿ ಹೊರಿಸಿ ತಾಲೀಮು ನಡೆಸಲಾಗಿದೆ. ಅಕ್ಟೋಬರ್ 7ರಂದು ಚಾಮುಂಡಿ ತಾಯಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾಗೆ ವಿದ್ಯುಕ್ತ ಚಾಲನೆ ದೊರೆಯಲಿದೆ. ನಂತರ ಅಕ್ಟೋಬರ್ 15ರಂದು ಜಂಬೂಸವಾರಿ ನಡೆಯುತ್ತದೆ. ಅಂದು ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ರತ್ನ ಖಚಿತ ಅಂಬಾರಿಯಲ್ಲಿಟ್ಟು ಗಣ್ಯರು ಪುಷ್ಪಾರ್ಚನೆ ನಡೆಸಲಿದ್ದಾರೆ. ಈ ಮೂಲಕ ವಿಶ್ವವಿಖ್ಯಾತ ಜಂಬೂಸವಾರಿಗೆ ಚಾಲನೆ ಸಿಗಲಿದೆ.











Click it and Unblock the Notifications