ಸರಳ ದಸರಾ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ: ನಂಜರಾಜೇ ಅರಸ್ ಆರೋಪ
ಮೈಸೂರು, ಅಕ್ಟೋಬರ್ 8: ಸರ್ಕಾರ ಸರಳ ದಸರಾ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ ಮಾಡಲು ಹೊರಟಿದ್ದು, ಮಹಿಷನಂತೆ ಚುನಾಯಿತ ಪ್ರತಿನಿಧಿಗಳನ್ನೂ ಚಾಮುಂಡಿ ದೇವಿ ದಮನಿಸಲಿ ಎಂದು ಇತಿಹಾಸ ತಜ್ಞ ಪ್ರೊ.ಪಿ.ವಿ. ನಂಜರಾಜೇ ಅರಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ಅವರು, ಸರಳ ದಸರಾ ಎಂದರೆ ಇವರ ದೃಷ್ಟಿಯಲ್ಲಿ ಹದಿನೈದು ಕೋಟಿ ರುಪಾಯಿ ವೆಚ್ಚದ್ದಾಗಿದೆ. ಸರಳ ದಸರಾ ನೆಪದಲ್ಲಿ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಲೂಟಿ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಕೋವಿಡ್ ತುರ್ತು ಸಂದರ್ಭದಲ್ಲಿ ಜನಪರ ಕಾಳಜಿ ಇದ್ದರೆ ಆಸ್ಪತ್ರೆಗಳಿಗೆ ಸೌಲಭ್ಯ ಒದಗಿಸಲಿ. ಇದರ ಹೊರತು ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಯಾವುದೇ ಆಶೀರ್ವಾದ ಸಿಗುವುದಿಲ್ಲ. ಜನರ ಆರೋಗ್ಯ ಕಾಪಾಡಿದಾಗ ಮಾತ್ರ ಚಾಮುಂಡಿದೇವಿ ಆಶೀರ್ವಾದ ಸಿಗುತ್ತದೆ ಎಂದಿದ್ದಾರೆ.

ಜನರ ಸಾವು ದುಡ್ಡು ತಿನ್ನಲು ಇರುವ ಸಾಧನ ಎಂದು ರಾಜ್ಯ ಸರ್ಕಾರ ಅಂದುಕೊಂಡಿದೆ. ಜನರ ಆರೋಗ್ಯ, ಬದುಕಿನ ಬಗ್ಗೆ ಕಾಳಜಿ ಇದ್ದರೆ ಆಕ್ಸಿಜನ್, ವೆಂಟಿಲೇಟರ್ ಸೌಲಭ್ಯದ ಮೂಲಕ ಬದುಕನ್ನು ಕಟ್ಟಿಕೊಡಲಿ. ಚಾಮುಂಡಿಯ ನಂಬಿಕೆಗೋಸ್ಕರ ಪ್ರವಾಸೋದ್ಯಮದ ಹೆಸರಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಬೇಡ ಎಂದು ತಿಳಿಸಿದರು.
ದಸರೆಗಾಗಿ ನೀಡಲಾಗಿರುವ 15 ಕೋಟಿಯಲ್ಲಿ ಅರಮನೆಯೊಳಗೆ ಸಾಂಸ್ಕೃತಿಕ, ಮೆರವಣಿಗೆ ಕಾರ್ಯಕ್ರಮಗಳ ಮೂಲಕ ದುಡ್ಡು ತಿನ್ನಲು ಹೊರಟಿದ್ದಾರೆ. ಈ ಅಧಿಕಾರಿಗಳಿಗೆ, ಮಂತ್ರಿಗಳಿಗೆ ಏಕೆ ದುಡ್ಡು ತಿನ್ನುವ ಚಪಲ? ಎಂದು ನಂಜರಾಜೇ ಅರಸ್ ಪ್ರಶ್ನಿಸಿದರು.
ಕೋವಿಡ್ ಸಂದರ್ಭದಲ್ಲಿ ಬಡವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದೆ ಸಾಯುತ್ತಿದ್ದು, ಮನೆ, ಆಸ್ತಿ ಮಾರಿ ಚಿಕಿತ್ಸೆ ಪಡೆಯುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ವಿಜೃಂಭಣೆಯ ದಸರಾ ಬದಲು ಜನರಿಗೆ ವೈದ್ಯಕೀಯ ಸೌಲಭ್ಯ ನೀಡಲು ಸರ್ಕಾರ ಮುಂದಾಗಲಿ ಎಂದು ಇತಿಹಾಸ ತಜ್ಞ ಒತ್ತಾಯಿಸಿದ್ದಾರೆ.












Click it and Unblock the Notifications