ಜಮೀನಿಗೆ ನುಗ್ಗಿದ ಲಕ್ಷ್ಮಣತೀರ್ಥ ನದಿ ನೀರು; ಹುಣಸೂರು ರೈತರ ಪಾಡೇನು?

ಮೈಸೂರು, ಆಗಸ್ಟ್‌ 07: ಕೊಡಗಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮ ಲಕ್ಷ್ಮಣತೀರ್ಥ ನದಿ ಭೋರ್ಗರೆದು ಹರಿಯುತ್ತಿದೆ. ಇದರಿಂದ ಮೈಸೂರು ಜಿಲ್ಲೆಯ ಹುಣಸೂರು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ರೈತರು ಬೆಳೆದ ಬೆಳೆ ನೀರು ಪಾಲಾಗಿದೆ. ಕೆಲವೆಡೆ ಮನೆಗಳು ಕುಸಿದು ಬಿದ್ದಿವೆ.

ಈ ಬಾರಿ ಕೊರೊನಾ ಸೋಂಕಿನ ಸಂಕಷ್ಟಗಳ ನಡುವೆಯೂ ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಶುಂಠಿ, ಮುಸುಕಿನ ಜೋಳ ಮತ್ತು ತಂಬಾಕು ಬೆಳೆದಿದ್ದರು. ಅದರಲ್ಲೂ ಹೆಚ್ಚಿನ ರೈತರು ಈ ಹಿಂದೆ ತಂಬಾಕು ಬೆಳೆಯುತ್ತಿದ್ದರಾದರೂ ಅದನ್ನು ಬಿಟ್ಟು ಶುಂಠಿ ಬೆಳೆಗೆ ಮಾರು ಹೋಗಿದ್ದರು. ಹೀಗಾಗಿ ಹೆಚ್ಚಿನ ಪ್ರದೇಶಗಳಲ್ಲಿ ಶುಂಠಿ ಬೆಳೆ ಬೆಳೆದಿರುವುದು ಕಂಡು ಬಂದಿತ್ತು. ಆದರೆ ಇದೀಗ ಬೆಳೆಗಳ ನಾಶವಾಗುತ್ತಿದೆ.

 ಜಮೀನಿಗೆ ನುಗ್ಗಿದ ಲಕ್ಷ್ಮಣತೀರ್ಥ ನೀರು

ಜಮೀನಿಗೆ ನುಗ್ಗಿದ ಲಕ್ಷ್ಮಣತೀರ್ಥ ನೀರು

ಮುಂಗಾರು ಆರಂಭ ಉತ್ತಮವಾಗಿಯೇ ಇದ್ದುದರಿಂದ ಜೋಳ, ಶುಂಠಿ ಮತ್ತು ತಂಬಾಕು ಚೆನ್ನಾಗಿಯೇ ಬೆಳೆದಿತ್ತು. ಹುಣಸೂರು ತಾಲೂಕಿನ ಕೆಲವು ಪ್ರದೇಶಗಳಲ್ಲಿ ಲಕ್ಷ್ಮಣ ತೀರ್ಥ ನದಿ ಹರಿಯುತ್ತಿದ್ದು, ಇದೀಗ ನದಿಯಲ್ಲಿ ಪ್ರವಾಹ ಬಂದಿರುವ ಕಾರಣ ನೀರು ಗ್ರಾಮೀಣ ಪ್ರದೇಶಗಳ ಜಮೀನಿಗೆ ನುಗ್ಗಿದೆ. ಕಳೆದ ಕೆಲ ದಿನಗಳಿಂದ ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಪ್ರವಾಹ ಪರಿಸ್ಥಿತಿ ಹೆಚ್ಚಾಗುತ್ತಲೇ ಸಾಗುತ್ತಿದೆ. ಹೀಗಾಗಿ ಜಮೀನು ಜಲಾವೃತವಾಗಿದ್ದು, ಅದರಲ್ಲಿ ಶುಂಠಿ ಬೆಳೆ ಮುಳುಗಿದೆ. ಒಂದು ವೇಳೆ ನೀರು ಇದೇ ರೀತಿ ಹೆಚ್ಚು ದಿನ ಹಾಗೆಯೇ ನಿಂತರೆ ಶುಂಠಿ ಕೊಳೆಯಲಾರಂಭಿಸುತ್ತದೆ. ಲಕ್ಷಾಂತರ ರೂ ಖರ್ಚು ಮಾಡಿದ ರೈತನಿಗೆ ಬೆಳೆಯೇ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ.

 ಶುಂಠಿಯನ್ನು ಕೀಳುತ್ತಿರುವ ರೈತರು

ಶುಂಠಿಯನ್ನು ಕೀಳುತ್ತಿರುವ ರೈತರು

ಶುಂಠಿ ಬೆಳೆದ ಪ್ರದೇಶಕ್ಕೆ ನೀರು ನುಗ್ಗಿದ್ದರಿಂದ ಆತಂಕಗೊಂಡಿರುವ ರೈತರು ಶುಂಠಿಯನ್ನು ಕೀಳುವ ಪ್ರಯತ್ನ ಮಾಡುತ್ತಿರುವುದು ಕಂಡುಬರುತ್ತಿದೆ. ಜಲಾವೃತಗೊಂಡ ಪ್ರದೇಶದಿಂದಲೇ ಶುಂಠಿಯನ್ನು ಗಿಡ ಸಹಿತ ಕಿತ್ತು ಸುರಕ್ಷಿತ ಪ್ರದೇಶಗಳಲ್ಲಿ ಸಂಗ್ರಹಿಸುತ್ತಿರುವುದು ಕಂಡು ಬರುತ್ತಿದೆ. ಇನ್ನೊಂದೆಡೆ ಮಳೆಯಿಂದಾಗಿ ಮೆಕ್ಕೆ ಜೋಳವು ನೆಲಕಚ್ಚಿದೆ. ಜತೆಗೆ ಹಲವು ಮನೆಗಳು ಗಾಳಿ ಮಳೆಗೆ ಕುಸಿದು ಬಿದ್ದಿವೆ.

 ತಗ್ಗು ಪ್ರದೇಶದ ಜನರಲ್ಲಿ ಭಯ

ತಗ್ಗು ಪ್ರದೇಶದ ಜನರಲ್ಲಿ ಭಯ

ಹನಗೋಡು ಅಣೆಕಟ್ಟಿಗೆ ಭಾರೀ ಪ್ರಮಾಣದಲ್ಲಿ ನೀರು ಬರುತ್ತಿರುವುದರಿಂದ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಅಣೆಕಟ್ಟೆಗೆ ಹಾನಿಯಾಗಿ ಬಿಡುತ್ತಾ ಎಂಬ ಭಯವೂ ಸ್ಥಳೀಯರನ್ನು ಕಾಡತೊಡಗಿದೆ. ಕಳೆದ ವರ್ಷವೂ ಇದೇ ರೀತಿ ಭಾರೀ ಪ್ರಮಾಣದ ನೀರು ಹರಿದು ಬಂದಿತ್ತು. ಆದರೆ ಇದೀಗ ನದಿಯು ಅಪಾಯ ಮಟ್ಟದಲ್ಲಿ ಹರಿಯುತ್ತಿರುವುದು ತಗ್ಗುಪ್ರದೇಶದ ಜನರ ನೆಮ್ಮದಿಯನ್ನು ಕೆಡಿಸಿದೆ.

 ಮೂರು ಕುಟುಂಬಗಳ ಸ್ಥಳಾಂತರ

ಮೂರು ಕುಟುಂಬಗಳ ಸ್ಥಳಾಂತರ

ಹನಗೋಡು ಭಾಗದ ಸಾವಿರಾರು ರೈತರಿಗೆ ಅನುಕೂಲವಾಗಲೆಂದು 1961ರಲ್ಲಿ ವಿಶಾಲವಾದ ಅಣೆಕಟ್ಟು ಕಟ್ಟಲಾಗಿತ್ತು. ಆದರೆ ಈ ಬಾರಿ ಧಾರಾಕಾರವಾಗಿ ಮಳೆ ಸುರಿದು ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಈ ವ್ಯಾಪ್ತಿಯ ಮೂರು ಮನೆಗಳಲ್ಲಿದ್ದ ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ.

 ನಿಗಾವಹಿಸಿರುವ ಜಿಲ್ಲಾಡಳಿತ

ನಿಗಾವಹಿಸಿರುವ ಜಿಲ್ಲಾಡಳಿತ

ಕಳೆದ ವರ್ಷವೂ ಲಕ್ಷ್ಮಣತೀರ್ಥ ನದಿ ಉಕ್ಕಿ ಹರಿದ ಪರಿಣಾಮ ಹಲವು ಅನಾಹುತಗಳು ಸಂಭವಿಸಿದ್ದವು. ಜತೆಗೆ ಹುಣಸೂರಿನ ಕೆಲವು ಬಡಾವಣೆಗಳಿಗೂ ನೀರು ನುಗ್ಗಿತ್ತು. ಹೀಗಾಗಿ ಜಿಲ್ಲಾಡಳಿತ ಇತ್ತ ನಿಗಾವಹಿಸಿದ್ದು, ಅಧಿಕಾರಿಗಳು ಸ್ಥಳಕ್ಕೆ ತೆರಳಿ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಗಮನ ಹರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+