ಅರಮನೆ ನಗರಿಯ ಪಾರಂಪರಿಕ ದೊಡ್ಡ ಗಡಿಯಾರ ಕಟ್ಟಡದ ಗೋಡೆಯಲ್ಲಿ ಬಿರುಕು
ಮೈಸೂರು, ಮೇ 11: ಅರಮನೆಯ ಮುಂಭಾಗದಲ್ಲಿರುವ ಶತಮಾನಗಳ ಹಿಂದಿನ ದೊಡ್ಡಗಡಿಯಾರದ ಗೋಪುರದಲ್ಲಿ ಬಿರುಕು ಕಂಡುಬಂದಿದ್ದು, ಆತಂಕ ಮೂಡಿಸಿದೆ.
ದೊಡ್ಡ ಗಡಿಯಾರದ ಘಂಟೆಯ ಶಬ್ದವನ್ನು ಮತ್ತೆ ಆರಂಭಿಸಲು ಜಿಲ್ಲಾ ಪಾರಂಪರಿಕ ತಜ್ಞರ ಸಮಿತಿ ಸದಸ್ಯರು ಇತ್ತೀಚೆಗೆ ಪರಿಶೀಲನೆ ನಡೆಸಿದಾಗ ಬಿರುಕು ಮೂಡಿರುವುದು ಕಂಡುಬಂದಿದೆ. ಸುಮಾರು 5.5 ಅಡಿ ಎತ್ತರವಿರುವ ಕಂಚಿನ ಘಂಟೆಯಿಂದ ಬರುವ ದೊಡ್ಡ ಶಬ್ದದಿಂದ ಬಿರುಕು ಮೂಡುತ್ತಿದೆ ಎಂದು ಭಾವಿಸಿ ಶಬ್ದವನ್ನು 30 ವರ್ಷಗಳ ಹಿಂದೆಯೇ ನಿಲ್ಲಿಸಲಾಗಿತ್ತು.
ಇದಾದ ಬಳಿಕವೂ ದಿನದಿಂದ ದಿನಕ್ಕೆ ಗಂಟೆಯಲ್ಲಿ ಬಿರುಕು ಮೂಡತ್ತಲೇ ಇದೆ. ಇದಕ್ಕೆ ಬಳಸಲಾಗಿರುವ ಕಬ್ಬಿಣ ತುಕ್ಕು ಹಿಡಿಯುತ್ತಿರುವುದೇ ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ.

ಈ ದೊಡ್ಡ ಗಡಿಯಾರ ನೆಲದಿಂದ ಸುಮಾರು 75 ಅಡಿ ಎತ್ತರದದಲ್ಲಿದೆ. ಇದಕ್ಕೆ ಸದ್ಯ 92 ವರ್ಷ. 1927ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತಕ್ಕೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅರಮನೆಯಲ್ಲಿದ್ದ ನೌಕರರು ಮತ್ತು ಅಧಿಕಾರಿಗಳು ಹಣವನ್ನು ಸಂಗ್ರಹಿಸಿ ಈ ಸ್ಮಾರಕವನ್ನು ನಿರ್ಮಿಸಿದರು. 1990ರವರೆಗೂ ಇದರ ಘಂಟಾನಾದವು ಐದು ಕಿ.ಮೀ.ವರೆಗೂ ಕೇಳಿಸುತ್ತಿತ್ತು. ನಂತರ, ಇದನ್ನು ಸ್ಥಗಿತಗೊಳಿಸಲಾಯಿತು.
ಘಂಟೆಯ ಬಿರುಕಿನ ಕುರಿತು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಪ್ರತಿಕ್ರಿಯಿಸಿ, ದೊಡ್ಡ ಗಡಿಯಾರ ಈ ಹಿಂದೆ 1 ಗಂಟೆಗೊಮ್ಮೆ ಶಬ್ದ ಮಾಡುತ್ತಿತ್ತು. ಹಾಗೆಯೇ ಸರಿಪಡಿಸಬೇಕೆಂದು ಪಾಲಿಕೆ ಆಯುಕ್ತರು ಹೇಳುತ್ತಿದ್ದರು. ಅದರಂತೆ ಆಯುಕ್ತರು, ಇಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಗೋಪುರ ಬಿರುಕು ಬಿಟ್ಟಿರುವುದು ಗೊತ್ತಾಗಿದೆ. ಇದು ಯಾವ ಕಾರಣಕ್ಕೆ ಬಿಟ್ಟಿತೆಂದು ಗೊತ್ತಾಗಿಲ್ಲ. ಈ ವಾರದಲ್ಲಿ ತಜ್ಞರ ಸಮಿತಿ ಸಭೆ ಕರೆದು ಚರ್ಚಿಸಿ, ಸಲಹೆ ಪಡೆಯಲಾಗುವುದು ಎಂದು ತಿಳಿಸಿದರು.












Click it and Unblock the Notifications