ಕೋವಿಡ್; ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಿದೆ ಸುತ್ತೂರು ಮಠ
ಮೈಸೂರು, ಮೇ 23; ಮಹಾಮಾರಿ ಕೊರೊನಾ ಹೊಡೆತದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳೊಂದಿಗೆ ಸುತ್ತೂರು ಮಹಾಸಂಸ್ಥಾನ ಕೈಜೋಡಿಸಿದೆ. ಕೊರೊನಾ ಕಾರಣದಿಂದ ಜೀವನ ನಿರ್ವಹಣೆಯ ಸವಾಲು ಎದುರಿಸುತ್ತಿರುವ ಕುಟುಂಬಗಳ ಮಕ್ಕಳಿಗೆ ಸುತ್ತೂರು ಮಠದಿಂದ ಉಚಿತ ಶಿಕ್ಷಣ ನೀಡಲು ತೀರ್ಮಾನಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, "ರಾಜ್ಯದಲ್ಲಿ ಕೊರೊನಾದಿಂದಾಗಿ ಮೃತಪಟ್ಟ ಪೋಷಕರ ಮಕ್ಕಳು ಹಾಗೂ ಕೊರೊನಾ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ಅವರ ಮಕ್ಕಳಿಗೆ ಶಿಕ್ಷಣ ನೀಡುವುದು ಸವಾಲಾಗಿದೆ" ಎಂದರು.
"ಈ ಕುಟುಂಬಗಳ ಮಕ್ಕಳು ಶಿಕ್ಷಣದಿಂದ ವಚಿಂತವಾಗಬಾರದು. ಜೊತೆಗೆ ಅವರುಗಳಿಗೆ ಅನಾಥಭಾವ ಮೂಡಬಾರದೆಂಬ ಕಾರಣಕ್ಕೆ ಸುತ್ತೂರು ಮಠದಿಂದ ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸವನ್ನು ಉಚಿತವಾಗಿ ನೀಡಲಾಗುವುದು" ಎಂದು ಹೇಳಿದರು.

ಕರ್ನಾಟಕದ ಎಲ್ಲಾ ಭಾಗಗಳಲ್ಲಿ ಕೊರೊನಾ ಸಂಕಷ್ಟದಲ್ಲಿರುವ ಕುಟುಂಬಗಳ ಮಕ್ಕಳಿಗೆ ಮಠದ ವತಿಯಿಂದ ಉಚಿತ ಶಿಕ್ಷಣ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. 1 ರಿಂದ 10ನೇ ತರಗತಿವರೆಗಿನ ಹೆಣ್ಣು ಹಾಗೂ ಗಂಡು ಮಕ್ಕಳನ್ನು ಸಹ ಶಾಲೆಗೆ ಸೇರಿಸಬಹುದಾಗಿದೆ.
ಮಕ್ಕಳನ್ನು ಶಾಲೆಗೆ ಸೇರಿಸಲು ಪೋಷಕರು ಹಾಗೂ ಅವರು ಕುಟುಂಬ ಸದಸ್ಯರು 7411486938 ಸಂಖ್ಯೆಯನ್ನು ಸಂಪರ್ಕಿಸಿ, ವಿವರಗಳನ್ನು ಪಡೆದು, ನೋಂದಾಯಿಸಿಕೊಳ್ಳಬಹುದು.
ಆದಿಚುಂಚನಗಿರಿ ಮಠವೂ ಸಹ ಕೋವಿಡ್ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳ ವಿದ್ಯಾಭ್ಯಾಸವನ್ನು ನೋಡಿಕೊಳ್ಳುವುದಾಗಿ ಈಗಾಗಲೇ ಘೋಷಣೆ ಮಾಡಿದೆ.












Click it and Unblock the Notifications