ತಲಕಾಡಿನಲ್ಲಿ ಪ್ರಿ ವೆಡ್ಡಿಂಗ್ ಫೋಟೊಶೂಟ್ ಮಾಡಿಸಿಕೊಳ್ಳುವಾಗ ಜೋಡಿ ಸಾವು
ಮೈಸೂರು, ನವೆಂಬರ್ 09: ನದಿಯ ಮಧ್ಯೆ ಪ್ರಿ ವೆಡ್ಡಿಂಗ್ ಫೋಟೊಶೂಟ್ ಮಾಡಿಸಿಕೊಳ್ಳುವಾಗ ತೆಪ್ಪ ಮಗುಚಿ, ಇನ್ನು ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಜೋಡಿ ಸಾವನ್ನಪ್ಪಿರುವ ದಾರುಣ ಘಟನೆ ಮೈಸೂರಿನಲ್ಲಿ ನಡೆದಿದೆ.
ಚಂದ್ರು (28) ಹಾಗೂ ಶಶಿಕಲಾ(20) ಮೃತ ದುರ್ದೈವಿಗಳು. ಮೂಲತಃ ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿಗಳಾಗಿರುವ ಇವರಿಬ್ಬರ ಮದುವೆಯು ಇದೇ ನವೆಂಬರ್ 22ರಂದು ನಿಶ್ಚಯವಾಗಿತ್ತು. ಹೀಗಾಗಿ ಪ್ರಿ ವೆಡ್ಡಿಂಗ್ ಫೋಟೊಶೂಟ್ ಮಾಡಿಸಿಕೊಳ್ಳಲು ಪ್ಲಾನ್ ಮಾಡಿದ್ದರು. ಅದಕ್ಕಾಗಿ ತಲಕಾಡಿಗೆ ಹೋಗಿ ಫೋಟೊಶೂಟ್ ಮಾಡಿಸಿಕೊಳ್ಳಲು ನಿರ್ಧರಿಸಿ ಸೋಮವಾರ ಇಲ್ಲಿಗೆ ಬಂದಿದ್ದಾರೆ.
ಕಾವೇರಿ ನದಿ ಮಧ್ಯೆ ಫೋಟೊ ತೆಗೆಸಿಕೊಳ್ಳಬೇಕೆಂದು ತೆಪ್ಪದಲ್ಲಿ ಹೊರಟಿದ್ದಾರೆ. ಎರಡು ತೆಪ್ಪದಲ್ಲಿ ಐವರು ಹೋಗಿದ್ದು, ಫೋಟೊಶೂಟ್ ಗೆ ಹುಡುಗ, ಹುಡುಗಿಯನ್ನು ಒಂದು ತೆಪ್ಪದಲ್ಲಿ ಬಿಟ್ಟು, ಫೋಟೊಗ್ರಾಫರ್, ಮಿಕ್ಕವರು ಮತ್ತೊಂದು ತೆಪ್ಪದಲ್ಲಿದ್ದರು.

ಹರಿಯುವ ನೀರಲ್ಲಿ ತೆಪ್ಪದ ಮೇಲೆ ನಿಂತು ಫೋಟೊ ತೆಗೆಸಿಕೊಳ್ಳುವ ಸಂದರ್ಭ ತೆಪ್ಪ ಮಗುಚಿ ಚಂದ್ರು, ಶಶಿಕಲಾ ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ. ಶವಗಳಿಗಾಗಿ ಶೋಧ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, ತಲಕಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮದುವೆಯಾಗಿ ಹೊಸ ಹಾದಿ ತುಳಿಯಬೇಕಿದ್ದ ಜೋಡಿ ಹೀಗೆ ಶವವಾಗಿದೆ. ಪ್ರಿ ವೆಡ್ಡಿಂಗ್ ಫೋಟೊಗಳೇ ಇವರ ಜೀವನದ ಕೊನೆ ಕ್ಷಣಗಳಾಗಿವೆ.












Click it and Unblock the Notifications