ದಸರಾಕ್ಕೆ ಕ್ಷಣಗಣನೆ: ಮಧುವಣಗಿತ್ತಿಯಂತೆ ಸಿಂಗಾರಗೊಂಡ ಸಾಂಸ್ಕೃತಿಕ ನಗರಿ
Recommended Video

ಮೈಸೂರು, ಅಕ್ಟೋಬರ್.09: ನಾಡಿನ ಇತಿಹಾಸ, ಸಂಸ್ಕೃತಿ, ಪರಂಪರೆ, ಸಂಪ್ರದಾಯವನ್ನು ಅನಾವರಣಗೊಳಿಸುವ ಹಾಗೂ ಸಂವಿಧಾನ... ಪ್ರಜಾಸತ್ತೆ... ಸಮಾನತೆ'... ಆಶಯಗಳೊಂದಿಗೆ ನಡೆಯುವ ಐತಿಹಾಸಿಕ ನಾಡಹಬ್ಬ, ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ವಿದ್ಯುಕ್ತ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ.
ನವರಾತ್ರಿಯ ವೈಭವಕ್ಕೆ ಬುಧವಾರ ಬೆಳಗ್ಗೆ ಚಾಮುಂಡಿ ಬೆಟ್ಟದಲ್ಲಿ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಗುವುದು.
ದೇಶ ವಿದೇಶಗಳ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ದಸರಾ ಮಹೋತ್ಸವದ 10 ದಿನಗಳ ಸಾಂಸ್ಕೃತಿಕ ವೈಭವಕ್ಕೆ ಈ ಮೂಲಕ ನಾಂದಿ ಹಾಡಲಿದ್ದು, ನಗರದ ವಿವಿಧೆಡೆ ನಡೆಯುವ ಎಲ್ಲ ಕಾರ್ಯಕ್ರಮಗಳೂ ಇದರೊಂದಿಗೆ ಆರಂಭವಾಗಲಿವೆ.
ಅ.10 ರಿಂದ 19 ರವರೆಗೆ ನಗರದ 20ಕ್ಕೂ ಹೆಚ್ಚು ಕಡೆ, 30ಕ್ಕೂ ಅಧಿಕ ಪ್ರಕಾರದ ಕಾರ್ಯಕ್ರಮಗಳು ಅನಾವರಣಗೊಳ್ಳಲಿವೆ. ಪಾರಂಪರಿಕ ಹಾಗೂ ಅರಮನೆಗಳ ನಗರಿ ಮಧುವಣಗಿತ್ತಿಯಂತೆ ಸಿಂಗಾರಗೊಂಡು ದೇಶ- ವಿದೇಶದ ಪ್ರವಾಸಿಗರನ್ನು ಸ್ವಾಗತಿಸಲು ಸಜ್ಜಾಗಿದೆ. ಮುಂದೆ ಓದಿ...

ಇಂಡೋ ಸಾರ್ಸನಿಕ್ ಶೈಲಿಯಲ್ಲಿ ವೇದಿಕೆ ನಿರ್ಮಾಣ
ಝಗಮಗಿಸುವ ವಿದ್ಯುತ್ ದೀಪಗಳಿಂದ ನಗರದ ಪ್ರಮುಖ ರಸ್ತೆಗಳು ಹಾಗೂ ವೃತ್ತಗಳು ಸಿಂಗಾರಗೊಂಡಿದ್ದು, ದಸರಾ ವೈಭವಕ್ಕೆ ಕಳೆ ಕಟ್ಟಿದೆ. ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಇಂಡೋ ಸಾರ್ಸನಿಕ್ ಶೈಲಿಯಲ್ಲಿ ವೇದಿಕೆ ನಿರ್ಮಾಣವಾಗಿದೆ.
ವಿವಿಧ ಪ್ರಕಾರಗಳ ಸಂಗೀತ, ನೃತ್ಯ ಕಾರ್ಯಕ್ರಮಗಳು, ಜಂಬೂಸವಾರಿ, ಪಂಜಿನ ಕವಾಯಿತು, ರೈತ ದಸರಾ, ಮಹಿಳಾ ಮತ್ತು ಮಕ್ಕಳ ದಸರಾ, ಮೆರವಣಿಗೆ ಮಾರ್ಗದಲ್ಲಿ ದೀಪಾಲಂಕಾರ, ದಸರಾ ವಸ್ತು ಪ್ರದರ್ಶನ, ಫಲಪುಷ್ಪ ಪದರ್ಶನ, ಪಾರಂಪರಿಕ ನಡಿಗೆ, ಹಾಫ್ ಮ್ಯಾರಥಾನ್, ದಸರಾ ಕ್ರೀಡಾಕೂಟ, ಯುವ ದಸರಾ, ಚಲನಚಿತ್ರೋತ್ಸವ, ಕುಸ್ತಿ ಪಂದ್ಯಾವಳಿ, ಕವಿಗೋಷ್ಠಿ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ.

ದಸರಾ ಉದ್ಘಾಟನೆ
ಚಾಮುಂಡಿಬೆಟ್ಟದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಉಪಸ್ಥಿತಿಯಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿಯವರು ಬೆಳಿಗ್ಗೆ 7 ರಿಂದ 7.35ರವರೆಗಿನ ತುಲಾ ಲಗ್ನದಲ್ಲಿ ದಸರಾ ಮಹೋತ್ಸವವನ್ನು ಉದ್ಘಾಟಿಸಲಿದ್ದಾರೆ.
ಮಂಗಳವಾದ್ಯ, ನಂದಿಧ್ವಜ, ತಮಟೆ, ವೀರಗಾಸೆ, ನಗಾರಿ ಮೇಳ, ಪೂಜಾ ಕುಣಿತ, ಗೊರವರ ಕುಣಿತ ಮುಂತಾದ ಜನಪದ ಪ್ರಕಾರಗಳ ಮೆರವಣಿಗೆಯಲ್ಲಿ ಸುಧಾಮೂರ್ತಿ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಚಾಮುಂಡಿಬೆಟ್ಟದಲ್ಲಿ ಮಹಿಷಾಸುರನ ಪ್ರತಿಮೆ ಬಳಿ ಬರಮಾಡಿಕೊಳ್ಳಲಾಗುವುದು.
ನಂತರ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಗುವುದು. ಚಾಮುಂಡೇಶ್ವರಿ ಪೂಜೆ ನಂತರ ವಿಶೇಷ ವೇದಿಕೆಯಲ್ಲಿ ಸಮಾರಂಭ ನಡೆಯಲಿದೆ.

ದಸರಾ ಚಲನಚಿತ್ರೋತ್ಸವಕ್ಕೆ ಚಾಲನೆ
ನಾಳೆ ಬುಧವಾರ ಬೆಳಗ್ಗೆ ಚಾಮುಂಡಿ ಬೆಟ್ಟದ ಆವರಣದಲ್ಲಿ ಪೊಲೀಸ್ ಸಹಾಯವಾಣಿಯನ್ನು ಡಿಸಿಎಂ ಪರಮೇಶ್ವರ್ ಉದ್ಘಾಟಿಸಲಿದ್ದಾರೆ. ದಸರಾ ಕ್ರೀಡಾಕೂಟವನ್ನು 9.30ಕ್ಕೆ ಸಚಿವ ರೇವಣ್ಣ ಉದ್ಘಾಟಿಸಲಿದ್ದಾರೆ. ನಂತರ ಕಲಾಮಂದಿರದಲ್ಲಿ 11.30ಕ್ಕೆ ಸಿಎಂ ಕುಮಾರಸ್ವಾಮಿ ದಸರಾ ಚಲನಾಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಆಹಾರ ಮೇಳ ಆಯೋಜನೆ
ಬುಧವಾರ ಮಧ್ಯಾಹ್ನ 3.30ಕ್ಕೆ ದೇವರಾಜ ಅರಸು ವಿವಿಧೋದ್ದೇಶ ಕೀಡಾಂಗಣದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ದಸರಾ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡುವರು. ಅಷ್ಟೇ ಅಲ್ಲದೇ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅರಮನೆ ಆವರಣದಲ್ಲಿ ಸಂಜೆ 6 ಗಂಟೆಗೆ ಉದ್ಘಾಟಿಸುವರು. ನಾಳೆ ಮಧ್ಯಾಹ್ನ 2.30ಕ್ಕೆ ನಗರದ ಸ್ಕೌಟ್ಸ್ ಗೈಡ್ಸ್ ಸಭಾಂಗಣದಲ್ಲಿ ಆಹಾರ ಮೇಳ ಸಹ ಆಯೋಜನೆಗೊಳ್ಳಲಿದೆ.












Click it and Unblock the Notifications