ದಸರಾ ಉದ್ಘಾಟನೆಯಿಂದ ದೂರ ಉಳಿದ ಕಾಂಗ್ರೆಸ್ ನಾಯಕರು: ಕಾರಣವೇನು?
Recommended Video

ಮೈಸೂರು, ಅಕ್ಟೋಬರ್. 10: ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರದ ಮೊದಲ ದಸರೆ ಇಂದು ಬುಧವಾರ (ಅ.10) ಉದ್ಘಾಟನೆಗೊಂಡಿದೆ. ಆದರೆ ಉಭಯ ಪಕ್ಷದ ಮುಖಂಡರ ಗೈರು ಮಾತ್ರ ದಸರೆಯ ವೇದಿಕೆಯಲ್ಲಿ ಎದ್ದು ಕಾಣುತ್ತಿತ್ತು.
ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಐದು ತಿಂಗಳು ಕಳೆದರೂ ಎರಡೂ ಪಕ್ಷಗಳಲ್ಲಿ ಸಮನ್ವಯತೆ ಕೊರತೆಯಿದೆ ಎಂಬುದು ದಸರಾ ಉದ್ಘಾಟನೆ ಕಾರ್ಯಕ್ರಮದ ವೇಳೆ ತಿಳಿದಿದೆ.
ಸರ್ಕಾರದಿಂದಲೇ ಆಚರಿಸುವ ದಸರಾ ಸಂಭ್ರಮ ಉದ್ಘಾಟನೆ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಸೇರಿದಂತೆ ಕಾಂಗ್ರೆಸ್ ನಾಯಕರು, ಸ್ಥಳೀಯ ಜನಪ್ರತಿನಿಧಿಗಳು ಹಾಜರಾಗದೆ ದೂರವೇ ಉಳಿದಿದ್ದಾರೆ.
"ಸರ್ಕಾರದಲ್ಲಿ ಎರಡನೇ ಸ್ಥಾನದಲ್ಲಿದ್ದರೂ ತಮ್ಮನ್ನ ನಿರ್ಲಕ್ಷಿಸಲಾಗುತ್ತಿದೆ. ಮೈಸೂರು ದಸರಾ ಉತ್ಸವದ ಸಿದ್ಧತಾ ಸಭೆಗಳಿಗೂ ತಮ್ಮನ್ನು ಆಹ್ವಾನಿಸಿಲ್ಲ. ಸರ್ಕಾರದ ಮಟ್ಟದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ. ವರ್ಗಾವಣೆ ವಿಚಾರ ಸೇರಿ ಯಾವುದೇ ವಿಚಾರಕ್ಕೂ ತಮ್ಮ ಅಭಿಪ್ರಾಯಗಳಿಗೆ ಬೆಲೆಯೇ ಇಲ್ಲ" ಎಂಬ ಕಾರಣಕ್ಕೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ದಸರಾ ಉದ್ಘಾಟನೆಗೆ ಗೈರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂದೆ ಓದಿ...

ಕಾಂಗ್ರೆಸ್ ಜನಪ್ರತಿನಿಧಿಗಳ ದಂಡೇ ಹರಿದು ಬಂತು
ಕಳೆದ ಬಾರಿ ದಸರೆಯನ್ನು ಮುಖ್ಯಮಂತ್ರಿಯಾಗಿದ್ದ, ಮೈಸೂರಿನವರೇ ಆದ ಸಿದ್ದರಾಮಯ್ಯ ಅವರು ಉದ್ಘಾಟಿಸಿದ್ದರು. ಆಗ ಸಚಿವರಾಗಿದ್ದ ಎಚ್.ಎಸ್.ಮಹದೇವಪ್ರಸಾದ್, ಎಚ್.ಸಿ.ಮಹದೇವಪ್ಪ, ತನ್ವೀರ್ ಸೇಠ್ ಸೇರಿ ಶಾಸಕರಾದ ಸೋಮಶೇಖರ್, ವಾಸು ಮುಂತಾದ ಕಾಂಗ್ರೆಸ್ ಜನಪ್ರತಿನಿಧಿಗಳ ದಂಡೇ ದಸರಾ ಉದ್ಘಾಟನೆಯಲ್ಲಿ ನೆರೆದಿದ್ದರು.

ಮುಖಂಡರ ಸುಳಿವಿಲ್ಲ
ಆದರೆ, ಈ ಬಾರಿ ಯಾವೊಬ್ಬ ಕಾಂಗ್ರೆಸ್ ಜನಪ್ರತಿನಿಧಿಗಳು ಉದ್ಘಾಟನೆ ಕಾರ್ಯಕ್ರಮದ ಹತ್ತಿರ ಸುಳಿದಿಲ್ಲ. ಸಿದ್ದರಾಮಯ್ಯ ಮತ್ತು ಮಹದೇವಪ್ಪ ಅವರು ಮೈಸೂರು ಭಾಗದ ಕ್ಷೇತ್ರಗಳಲ್ಲಿ ಸೋಲನ್ನು ಅನುಭವಿಸಿದ್ದಾರೆ.

ಉದ್ಘಾಟನೆ ಕಾರ್ಯಕ್ರಮದಿಂದ ದೂರ
ಇನ್ನು ವರುಣಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಯತೀಂದ್ರ ಸಿದ್ದರಾಮಯ್ಯ, ನರಸಿಂಹರಾಜ ಕ್ಷೇತ್ರದ ತನ್ವೀರ್ ಸೇಠ್ ಹಾಗೂ ಎಚ್.ಡಿ.ಕೋಟೆದ ಅನಿಲ್ ಚಿಕ್ಕಮಾದು ಅವರು ಕೂಡ ದಸರಾ ಉದ್ಘಾಟನೆ ಕಾರ್ಯಕ್ರಮದಿಂದ ದೂರವೇ.

ಮೇಯರ್ ಆಯ್ಕೆ ಆಗಿಲ್ಲ
ಅಲ್ಲದೇ, ದೋಸ್ತಿ ಸರ್ಕಾರದ ಕಾಂಗ್ರೆಸ್ ಸಚಿವರುಗಳೂ ಕೂಡ ಈ ಕಾರ್ಯಕ್ರಮದಿಂದ ದೂರವೇ ಉಳಿದರು. ಇನ್ನು ಇತ್ತ ಮೈಸೂರಿನ ಮೇಯರ್ ಆಯ್ಕೆಯಾಗದ ಪರಿಣಾಮ ಮೇಯರ್ ಅನುಪಸ್ಥಿತಿಯಲ್ಲಿ ಈ ಬಾರಿಯ ದಸರೆ ಉದ್ಘಾಟನೆಗೊಂಡಿದ್ದು ವಿಪರ್ಯಾಸ.
ಈ ಎಲ್ಲಾ ಘಟನೆಗಳನ್ನು ಗಮನಿಸಿದರೆ ಕಾಂಗ್ರೆಸ್ - ಜೆಡಿಎಸ್ ನಲ್ಲಿ ಮೈತ್ರಿಯಿಲ್ಲ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತದೆ.












Click it and Unblock the Notifications